ಪುತ್ತೂರು: ಸರ್ವೋಚ್ಚ ನ್ಯಾಯಾಲಯ ಆದೇಶದಂತೆ ಸರಕಾರದ ವಿವಿಧ ಕಾಮಗಾರಿಗಳ ಬಗ್ಗೆ ಜನಪ್ರತಿನಿಧಿಗಳ ಫೋಟೋ ಹಾಗೂ ಹೆಸರು ಅಳವಡಿಸಿ ಪ್ರಚಾರ ಪಡಿಸುವ ಫ್ಲೆಕ್ಸ್ ಹಾಗೂ ಬ್ಯಾನರ್ ಗಳನ್ನು ನಿರ್ಬಂಧಿಸುವಂತೆ ಕಾಂಗ್ರೆಸ್ ಮುಖಂಡ ಎಚ್. ಮಹಮ್ಮದ್ ಅಲಿ ರವರು ನಗರ ಸಭಾ ಪೌರಾಯುಕ್ತರಿಗೆ ಮತ್ತು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಸರ್ವೋಚ್ಚ ನ್ಯಾಯಾಲಯದ ರಿಟ್ ಅರ್ಜಿ ಸಂಖ್ಯೆ 13/2003 ದಿನಾಂಕ 13/5/2015 ಹಾಗೂ ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯದ ರಿಟ್ ಅರ್ಜಿ ಸಂಖ್ಯೆ 7135/2021 ರಂತೆ ಹೊರಡಿಸಿರುವ ಆದೇಶದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರದ ಮತ್ತು ಸ್ಥಳೀಯ ಸಂಸ್ಥೆಗಳ ಅನುದಾನಗಳಿಂದ ಅನುಷ್ಠಾನಗೊಳಿಸುವ ಯೋಜನೆಗಳು ಹಾಗೂ ನಿರ್ವಹಿಸುವ ಕಾಮಗಾರಿಗಳನ್ನು ಅನುಷ್ಠಾನಗೊಳಿಸುವ ಸಂದರ್ಭದಲ್ಲಿ ಜನಪ್ರತಿನಿಧಿಗಳ ಹಾಗೂ ರಾಜಕೀಯ ಪಕ್ಷದ ಪದಾಧಿಕಾರಿಗಳ ಬಾವಚಿತ್ರ ಮತ್ತು ಹೆಸರನ್ನು ಅಳವಡಿಸಿ ಪ್ರಚಾರ ಪಡಿಸದಂತೆ ನಿರ್ಬಂಧ ವಿಧಿಸಲಾಗಿರುತ್ತದೆ.
ಈ ಕುರಿತು ನ್ಯಾಯಲಯದ ಆದೇಶವನ್ನು ಉಲ್ಲಂಘನೆ ಮಾಡಿ ಬ್ಯಾನರ್ ಮತ್ತು ಫ್ಲೆಕ್ಸ್ ಅಳವಡಿಸಿದಲ್ಲಿ ಅಂತವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್. ದಾಖಲಿಸುವಂತೆ ಇದಕ್ಕೆ ತಪ್ಪಿದಲ್ಲಿ ಸಂಬಂಧ ಪಟ್ಟ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಜರುಗಿಸಲಾಗುವುದು ಎಂದು ಸರಕಾರ ಎಚ್ಚರಿಕೆ ನೀಡಿ ಎಲ್ಲಾ ಇಲಾಖೆಗೆ ಸುತ್ತೋಲೆ ಕಳುಹಿಸಿರುತ್ತದೆ ಹಾಗಿದ್ದರೂ ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ ಹಾಗೂ ತಾಲೂಕು ಪಂಚಾಯತ್ ಮತ್ತು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಪಂಚಾಯತ್ ಅಧ್ಯಕ್ಷರ ಮತ್ತು ಸದಸ್ಯರ, ನಗರ ಸಭಾ ಅಧ್ಯಕ್ಷರ ಮತ್ತು ಸದಸ್ಯರ, ಶಾಸಕರ, ಸಂಸದರ ಮತ್ತು ಸಚಿವರ ಹೆಸರು, ಹಾಗೂ ಭಾವಚಿತ್ರವನ್ನು ಮುದ್ರಿಸಿ ಈ ಕಾಮಗಾರಿಯನ್ನು ತಾವು ಮಂಜೂರು ಮಾಡಿಸಿದ್ದೇವೆ ಎಂದು ಪ್ರಚಾರ ಪಡಿಸುವ ಬ್ಯಾನರ್ ಮತ್ತು ಫ್ಲೆಕ್ಸ್ ಗಳನ್ನು ಪುತ್ತೂರು ನಗರ ಸಹಿತ ತಾಲೂಕಿನಾದ್ಯಂತ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅಳವಡಿಸಲಾಗಿದೆ.
ಇದು ಸರ್ವೋಚ್ಚ ನ್ಯಾಯಾಲಯ ಹಾಗೂ ರಾಜ್ಯ ಉಚ್ಛನ್ಯಾಯಲಯದ ಆದೇಶದ ಉಲ್ಲಂಘನೆಯಾಗಿರುತ್ತದೆ ಆದುದರಿಂದ ಕೂಡಲೇ ಇಂತಹ ಫ್ಲೆಕ್ಸ್ ಹಾಗೂ ಬ್ಯಾನರ್ ಗಳನ್ನು ತೆರವುಗೊಳಿಸುವಂತೆ ಮನವಿಯಲ್ಲಿ ತಿಳಿಸಲಾಗಿದೆ.


























