ಬೆಳ್ತಂಗಡಿ: ಬ್ಯಾನರ್ ಕಟ್ಟುತ್ತಿದ್ದ ವೇಳೆ ವಿದ್ಯುತ್ ಶಾಕ್ ತಗುಲಿ ಒಬ್ಬ ಮೃತಪಟ್ಟು, ಇನ್ನೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ.
ಗೂಡ್ಸ್ ಆಟೋ ಡ್ರೈವರ್ ಸಂಜಯ ನಗರ ನಿವಾಸಿ ಪ್ರಶಾಂತ್ ಆಚಾರ್ಯ ಮೃತ ದುರ್ದೈವಿಯಾಗಿದ್ದಾರೆ.
ಕಾರ್ಮಿಕ ಸಂಘದ ವತಿಯಿಂದ ಮಂಗಳೂರಿನಲ್ಲಿ ನಡೆಯಲಿರುವ ಕಾರ್ಯಕ್ರಮದ ಅಂಗವಾಗಿ ಬೆಳ್ತಂಗಡಿ ಬಸ್ ನಿಲ್ದಾಣದ ಪಕ್ಕದ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ಬ್ಯಾನರ್ ಕಟ್ಟುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ.
ಬೆಳ್ತಂಗಡಿಯ ಖಾಸಗಿ ಪ್ರಿಂಟರ್ಸ್ ಒಂದಕ್ಕೆ ಕಾರ್ಯಕ್ರಮದ ಬ್ಯಾನರ್ ಅಳವಡಿಸಲು ಸಂಘದವರು ಕಾಂಟ್ರಾಕ್ಟ್ ನೀಡಿದ್ದು ಅದರಂತೆ ಪ್ರಶಾಂತ್ ಆಚಾರ್ಯ ಹಾಗೂ ಮತ್ತೊಬ್ಬರು ಗೂಡ್ಸ್ ಆಟೋದಲ್ಲಿ ಬ್ಯಾನರ್ ತಂದು ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ಇಂದು ಸಂಜೆ ಅಳವಡಿಸುತ್ತಿದ್ದರು.
ಈ ಕಾರ್ಯದ ವೇಳೆ ಬ್ಯಾನರ್ ನ ಕಬ್ಬಿಣ ರಾಡ್ ವಿದ್ಯುತ್ ಲೈನ್ ನ ತಂತಿಗೆ ತಾಗಿದ್ದು, ಈ ವೇಳೆ ಕೆಲಸದ ಇಬ್ಬರು ಯುವಕರಿಗೆ ವಿದ್ಯುತ್ ಶಾಕ್ ಹೊಡೆದು ನೆಲಕ್ಕೆ ಎಸೆಯಲ್ಪಟ್ಟಿದ್ದಾರೆ. ಕೂಡಲೇ ಸ್ಥಳೀಯರ ಸಹಕಾರದಿಂದ ಇಬ್ಬರನ್ನೂ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದ್ದು, ಅದಾಗಲೇ ಪ್ರಶಾಂತ್ ಆಚಾರ್ಯ ಮೃತಪಟ್ಟಿದ್ದಾರೆ ಎನ್ನಲಾಗಿದೆ.


























