ಪುತ್ತೂರು: ಕೆದಂಬಾಡಿ ಗ್ರಾಮ ಪಂಚಾಯತ್ ಕಾರ್ಯದರ್ಶಿ ಸುನಂದಾ ರೈ (54 ವ.) ಅವರು ಅಲ್ಪಕಾಲದ ಅಸೌಖ್ಯದಿಂದ ಜೂನ್ 18ರಂದು ಬೆಳಿಗ್ಗೆ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು.
ಬೆಳ್ಳಾರೆ ನಿವಾಸಿಯಾಗಿದ್ದ ಇವರು, ಅನಾರೋಗ್ಯ ಕಾರಣದಿಂದ ಕೆಲ ಸಮಯಗಳಿಂದ ತಿಂಗಳಾಡಿ ಬಳಿ ವಾಸವಾಗಿದ್ದರು.
ಮೃತರು ಪತಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ.
ಮಧ್ಯಾಹ್ನ 3 ಗಂಟೆ ಸುಮಾರಿಗೆ ಪುತ್ತೂರು ತಾಲೂಕು ಪಂಚಾಯತ್ ಆವರಣದಲ್ಲಿ ಮೃತರ ಅಂತಿಮ ನಮನಕ್ಕೆ ವ್ಯವಸ್ಥೆ ಮಾಡಿದ್ದು, ಬಳಿಕ ಕೆದಂಬಾಡಿ ಗ್ರಾಪಂ ಆವರಣದಲ್ಲಿ ಅಂತಿಮ ನಮನ ನಡೆಯಲಿದೆ ಎಂದು ತಿಳಿದುಬಂದಿದೆ.
ಸುನಂದ ರೈ ಅವರು ಆರಂಭದಲ್ಲಿ ಬಳ್ಪ ಗ್ರಾಮ ಪಂಚಾಯತ್ನಲ್ಲಿ ಸೇವೆಯನ್ನು ಪ್ರಾರಂಭಿಸಿ ಬಳಿಕ ಬೆಳ್ಳಾರೆ ಪಂಚಾಯತ್ನಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಬಳಿಕ ಗ್ರೇಡ್-1 ಕಾರ್ಯದರ್ಶಿಯಾಗಿ ಭಡ್ತಿ ಪಡೆದು ಕೆದಂಬಾಡಿ ಗ್ರಾಪಂಗೆ ವರ್ಗಾವಣೆಗೊಂಡಿದ್ದರು.
ಇವರು ಶಾಲಾ ದಿನಗಳಲ್ಲೇ ಕ್ರೀಡೆಯಲ್ಲಿ ಗುರುತಿಸಿಕೊಂಡಿದ್ದು, ಗ್ರಾಮ ಪಂಚಾಯತ್ ಕಾರ್ಯದರ್ಶಿಯಾದ ಬಳಿಕವೂ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು. ಓಟ ಹಾಗೂ ರಿಲೇಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡು ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದರು.