ಪಟ್ಟೆ ಬಡಗನ್ನೂರು:- ದಿನಾಂಕ – 24-06-2025 ನೇ ಮಂಗಳವಾರದಂದು ಶ್ರೀ ಕೃಷ್ಣ ವಿದ್ಯಾ ಸಂಸ್ಥೆ ಪಟ್ಟೆ ಇಲ್ಲಿನ ವಿದ್ಯಾರ್ಥಿಗಳಿಗೆ ಉಚಿತ ಸಾಂಸ್ಕೃತಿಕ ಚಟುವಟಿಕೆ ತರಬೇತಿಯನ್ನು ಶ್ರೀ ಗೋಪಾಲಕೃಷ್ಣ ಭಟ್ಟ ಅಧ್ಯಕ್ಷರು ಶ್ರೀ ಕೃಷ್ಣ ವಿದ್ಯಾಸಂಸ್ಥೆಗಳು ಪಟ್ಟೆ ಇವರು ದೀಪ ಬೆಳಗಿಸಿ ಉದ್ಘಾಟಿಸಿ ಕಲೆ ಮತ್ತು ವಿದ್ಯೆಯನ್ನು ಒಟ್ಟಿಗೆ ಕಲಿತಾಗ ವಿದ್ಯಾರ್ಥಿ ಯಶಸ್ಸು ಗಳಿಸಲು ಸಾಧ್ಯ ಎಲ್ಲಾ ವಿದ್ಯಾರ್ಥಿ ಯಾವುದಾದರೂ ಒಂದು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಬೇಕಾಗಿ ತಿಳಿಯಪಡಿಸಿದರು.
ಸಪ್ತಕಲಾ ಕಾರ್ಯಕ್ರಮಗಳ ಕಡತವನ್ನು ಬಿಡುಗಡೆ ಮಾಡುವ ಮೂಲಕ ಉಚಿತ ಸಾಂಸ್ಕೃತಿಕ ಚಟುವಟಿಕೆಗಳ ತರಬೇತಿಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಎಸ್.ಜಿ.ಎಂ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕರಾದ ಶ್ರೀಯುತ ಶ್ರೀನಿವಾಸ್ ಎಚ್.ಬಿ ಅವರು ಆರೋಗ್ಯವಂತ ದೇಹದಲ್ಲಿ ಆರೋಗ್ಯವಂತ ಮನಸ್ಸು ಇರುತ್ತದೆ ಎನ್ನುತ್ತಾ ಸಾಂಸ್ಕೃತಿಕ ಚಟುವಟಿಕೆಗಳ ಮಹತ್ವವನ್ನು ತಿಳಿಯಪಡಿಸಿದರು.
ಭರತನಾಟ್ಯ ತರಬೇತುದಾರರಾದ ವಿದ್ವಾನ್ ದೀಪಕ್ ಕುಮಾರ್ ಅವರು ಮಾತನಾಡಿ ಭರತನಾಟ್ಯ ಕಲೆಯು ನಮ್ಮ ಸಂಸ್ಕೃತಿ, ವಿನಯ, ಧಾರ್ಮಿಕ ಪ್ರಜ್ಞೆ ಹಾಗೂ ಮೌಲ್ಯವನ್ನು ನೀಡುವುದು ಎಂದರು.
ಶಾಲಾ ಸಂಚಾಲಕರಾದ ಶ್ರೀಯುತ ವಿಘ್ನೇಶ್ ಹಿರಣ್ಯ ಇವರು ಮಾತನಾಡಿ ಈ ಸಾಂಸ್ಕೃತಿಕ ತರಬೇತಿಯು ವರ್ಷವಿಡಿ ನಡೆಯಲಿದ್ದು ಇದರಲ್ಲಿ ಕರಾಟೆ, ಭರತನಾಟ್ಯ, ಸಂಗೀತ, ಯೋಗ, ಯಕ್ಷಗಾನ, ರಂಗಕಲೆ ಹಾಗೂ ನೈತಿಕ ಶಿಕ್ಷಣವು ಇದರ ಭಾಗವಾಗಿರಲಿದೆ. ಎಲ್ಲಾ ವಿದ್ಯಾರ್ಥಿಗಳು ಈ ತರಬೇತಿಯ ಪ್ರಯೋಜನವನ್ನು ಪಡೆಯಿರಿ ಎಂದು ತಿಳಿಸಿದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಸಂಗೀತ ತರಬೇತುದಾರರಾದ ಶ್ರೀಮತಿ ಶೋಭಾ ಕುರಿಯ, ಕರಾಟೆ ತರಬೇತುದಾರರಾದ ಶ್ರೀಯುತ ಶೇಖರ್ ಮಾಡಾವು, ಯಕ್ಷಗಾನ ತರಬೇತುದಾರರಾದ ಶ್ರೀಯುತ ಚಂದ್ರಶೇಖರ್ ಉಪಸ್ಥಿತರಿದ್ದರು.
ಶ್ರೀಕೃಷ್ಣ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಗುರುಗಳಾದ ಶ್ರೀಮಾನ್ ರಾಜಗೋಪಾಲ ಎನ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಪ್ರತಿಭಾ ಪ್ರೌಢಶಾಲೆಯ ಮುಖ್ಯ ಗುರುಗಳಾದ ಮಾತಾಜಿ ಶ್ರೀಮತಿ ಸುಮನಾ ಬಿ ಇವರು ವಂದಿಸಿದರು. ಪ್ರೌಢಶಾಲಾ ಶಿಕ್ಷಕರಾದ ಶ್ರೀಯುತ ವಿಶ್ವನಾಥ್ ಬಿ ಇವರು ಕಾರ್ಯಕ್ರಮ ನಿರೂಪಣೆ ಮಾಡಿದರು. ಶ್ರೀ ಕೃಷ್ಣ ವಿದ್ಯಾಸಂಸ್ಥೆಗಳ ಎಲ್ಲಾ ಶಿಕ್ಷಕ ವೃಂದದವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.