ಬಂಟ್ವಾಳ ತಾಲೂಕು ಇಡ್ಕಿದು ಗ್ರಾಮ ಪಂಚಾಯತ್ ಕಛೇರಿಯ ಸಭಾಂಗಣದಲ್ಲಿ ದಿನಾಂಕ: 23.06.2025ರಂದು ರಾಜಕೀಯ ಸಭೆ ನಡೆಸಿರುವುದು ಕಂಡು ಬಂದ ಹಿನ್ನಲೆ ಪಂಚಾಯತ್ ಪಿಡಿಒ ಗೋಕುಲ ದಾಸ್ ಭಕ್ತ ರನ್ನು ಅಮಾನತು ಮಾಡಲಾಗಿದೆ.
ಸರಕಾರಿ ಕಛೇರಿಗಳಲ್ಲಿ ಈ ರೀತಿಯ ರಾಜಕೀಯಕ್ಕೆ ಸಂಬಂಧಿಸಿದ ಸಭೆಗಳನ್ನು ನಡೆಸಲು ಅವಕಾಶ ಇಲ್ಲದಿದ್ದರೂ, ಕಛೇರಿ ಸಭಾಂಗಣದಲ್ಲಿ ರಾಜಕೀಯ ಪಕ್ಷದಿಂದ ಆಯೋಜನೆಗೊಂಡ ಸಭೆಯನ್ನು ನಡೆಸಲು ಅವಕಾಶ ಕಲ್ಪಿಸಿಕೊಟ್ಟು, ಕರ್ನಾಟಕ ನಾಗರೀಕ ಸೇವಾ ನಡತೆ ನಿಯಮವನ್ನು ಉಲ್ಲಂಘಿಸಿ ಕರ್ತವ್ಯದಲ್ಲಿ ನಿರ್ಲಕ್ಷತೆಯನ್ನು ತೋರಿರುವ ಹಿನ್ನೆಲೆಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಇಡ್ಕಿದು ಗ್ರಾಮ ಪಂಚಾಯತ್, ಬಂಟ್ವಾಳ ತಾಲೂಕು ಇವರಿಗೆ ಕಾರ್ಯನಿರ್ವಾಹಕ ಅಧಿಕಾರಿ, ತಾಲೂಕು ಪಂಚಾಯತ್ ಬಂಟ್ವಾಳ ಇವರು ಕಾರಣ ಕೇಳುವ ನೋಟಿಸು ನೀಡಿದ್ದು, ಸದರಿ ನೋಟಿಸಿಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರು ಗ್ರಾಮ ಪಂಚಾಯತ್ ಕಛೇರಿ ಸಭಾಂಗಣದಲ್ಲಿ ರಾಜಕೀಯ ಸಭೆ ನಡೆಸಿರುವುದು ತನ್ನ ಗಮನಕ್ಕೆ ಬಂದಿರುವುದಿಲ್ಲ ಎಂಬುದಾಗಿ ಸಮಜಾಯಿಷಿಯನ್ನು ನೀಡಿರುತ್ತಾರೆ.
ಸಮಜಾಯಿಷಿಕೆಯನ್ನು ಪರಿಶೀಲಿಸಿದ್ದು, ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರು ನೀಡಿರುವ ಸಮಜಾಯಿಷಿಕೆಯು ಒಪ್ಪತಕ್ಕದ್ದಲ್ಲ. ಸರ್ಕಾರಿ ಕಛೇರಿಯಲ್ಲಿ ಯಾವುದೇ ರಾಜಕೀಯ ಪಕ್ಷಗಳ ಸಭೆ ಸಮಾರಂಭಗಳಿಗೆ ಅವಕಾಶ ನೀಡುವುದು ಸಮಂಜಸವಲ್ಲ.
ಇದಕ್ಕೆ ಅವಕಾಶ ನೀಡಿದ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರು ಕರ್ತವ್ಯಲೋಪ ಎಸಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಉಲ್ಲೇಖದಂತೆ, ಕಾರ್ಯನಿರ್ವಾಹಕ ಅಧಿಕಾರಿ, ತಾಲೂಕು ಪಂಚಾಯತ್ ಬಂಟ್ವಾಳ ಇವರು ವರದಿಯನ್ನು ಸಲ್ಲಿಸಿರುತ್ತಾರೆ.
ಸದರಿ ವರದಿಯನುಸಾರ ಗೋಕುಲ್ದಾಸ್ ಭಕ್ತ, ಪಂಚಾಯತ್ ಅಭಿವೃದ್ಧಿ ಅಧಿಕಾರಿ. ಇಡ್ಲಿದು ಗ್ರಾಮ ಪಂಚಾಯತ್, ಬಂಟ್ವಾಳ ತಾಲೂಕು ಇವರನ್ನು ಕರ್ನಾಟಕ ಸರಕಾರಿ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಅಪೀಲು) ನಿಯಮಗಳು, 1957ರ 10ನೇ ನಿಯಮದ (1)(ಡಿ) ಉಪನಿಯಮದಂತೆ ಸೇವೆಯಿಂದ ಅಮಾನತುಗೊಳಿಸುವುದು ಸೂಕ್ತವೆಂದು ಶಿಸ್ತು ಪ್ರಾಧಿಕಾರಿಯು ತೀರ್ಮಾನಿಸಿ ಆದೇಶಿಸಿದೆ.