ಹಾಸನ: ಹೃದಯಾಘಾತಕ್ಕೆ ಯುವತಿಯೊಬ್ಬಳು ಬಲಿಯಾದ ಘಟನೆ ಬ್ಯಾಟರಾಯನಪುರದಲ್ಲಿ ನಡೆದಿದೆ. ಹೊಳೆನರಸೀಪುರ ತಾಲೂಕಿನ, ಕಟ್ಟಳ್ಳಿ ಗ್ರಾಮದ ಸುಪ್ರಿಯಾ (22) ಹೃದಯಾಘಾತದಿಂದ ನಿಧನರಾಗಿದ್ದಾರೆ.
ಮೃತ ಸುಪ್ರಿತಾ ಕೃಷ್ಣಮೂರ್ತಿ ಹಾಗೂ ರೂಪ ದಂಪತಿ ಮಗಳು. ಬೆಂಗಳೂರಿನ ಬ್ಯಾಟರಾಯನಪುರದಲ್ಲಿ ಈ ಕುಟುಂಬ ವಾಸವಿತ್ತು. ಸುಪ್ರಿತಾ ಮುಕ್ತ ವಿವಿಯಲ್ಲಿ ಪದವಿ ಓದುತ್ತಿದ್ದಳು. ವಿದ್ಯಾಭ್ಯಾಸದ ಜೊತೆಗೆ ಕೆಲಸ ಕೂಡ ಮಾಡುತ್ತಿದ್ದಳು. ನಿನ್ನೆ ಮನೆಯಲ್ಲಿದ್ದ ವೇಳೆ ಸುಪ್ರಿತಾಗೆ ಏಕಾಏಕಿ ಎದೆನೋವು ಕಾಣಿಸಿಕೊಂಡಿದೆ. ಆ ಕೂಡಲೇ ಪೋಷಕರ ಮುಂದೆಯೇ ಎದೆನೋವು ಎಂದು ಹೇಳಿ ಸುಪ್ರಿತಾ ಕುಸಿದು ಬಿದ್ದಿದ್ದಾಳೆ.
ಆಗ ಪೋಷಕರು ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಷ್ಟರಲ್ಲಿ ಸುಪ್ರಿತಾ ಹೃದಯಾಘಾತದಿಂದ ಉಸಿರು ನಿಲ್ಲಿಸಿದ್ದಳು. ಕಳೆದ ಒಂದು ತಿಂಗಳ ಅವಧಿಯಲ್ಲಿ ಹಾಸನ ಜಿಲ್ಲೆಯಲ್ಲೇ 14 ಮಂದಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಹೀಗಾಗಿ ಹಾಸನ ಮೂಲದ ಯುವ ಜನರ ಹಠಾತ್ ಸಾವುಗಳು ಬೆಚ್ಚಿ ಬೀಳಿಸುತ್ತಿವೆ.