ಸುಳ್ಯ ಕಸಬಾ ಗ್ರಾಮದ ವಿವೇಕಾನಂದ ಸರ್ಕಲ್ ಬಳಿ ಅಂಬಡೆಡ್ಕ ಎಂಬಲ್ಲಿ ಶ್ರಿ ತತ್ವಮಸಿ ಚಾರಿಟೇಬಲ್ ಟ್ರಸ್ಟ್(ರಿ) ಮತ್ತು ಶ್ರೀ ತತ್ವಮಸಿ ಎಂಟರ್ ಪ್ರೈಸಸ್ (ರಿ) ಎಂಬ ಹೆಸರಿನಲ್ಲಿ ಸಂಸ್ಥೆ ಹೆಸರಿನಲ್ಲಿ ಬೆನಿಫಿಟ್ ಸ್ಕೀಂ ಪ್ರಾರಂಭಿಸಿ, ಏಜೆಂಟರುಗಳ ಮೂಲಕ ಸಾರ್ವಜನಿಕರಿಂದ ಕಂತುಗಳ ಮೂಲಕ ಹಣಸಂಗ್ರಹ ಮಾಡಿ, 4115 ಸದಸ್ಯರಿಗೆ ಹಣವನ್ನಾಗಲೀ ಯಾವುದೇ ವಸ್ತುವನ್ನಾಗಾಲಿ ನೀಡದೇ ರೂ ₹3,08,62,500/- (ಮೂರು ಕೋಟಿ ಎಂಟು ಲಕ್ಷದ ಅರವತ್ತೇರಡು ಸಾವಿರದ ಐನೂರು) ವಂಚನೆಗೆ ಸಂಬಂಧಿಸಿದಂತೆ, ಆರೋಪಿಗಳಾದ 1) ಶಿವಪ್ರಕಾಶ್, 2) ಕೆ.ಪಿ. ಗಣೇಶ್, 3) ಕೆ.ಪಿ. ಕೃಷ್ಣಪ್ಪ ಗೌಡ, 4) ಗೀತಾ ಕೆ.ಎಸ್., 5) ಭಾರತಿ, 6) ಗೀತಾ ಗಣೇಶ್, 7) ಎನ್.ಇ. ವೈ. ಕಮಲಾಕ್ಷ, 8) ಕೆ. ನಾಗೇಶ ಎಂಬವರುಗಳ ವಿರುದ್ಧ ಸುಳ್ಯ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಅಕ್ರ: 248/2014 ಪ್ರಕರಣದ ತನಿಖೆ ನಡೆಸಿದ ಆಗಿನ ಸುಳ್ಯ ಪೊಲೀಸ್ ಠಾಣಾಧಿಕಾರಿಗಳಾದ ಬ್ರಿಜೇಶ್ ಮಥ್ಯೂರವರು ಪ್ರಕರಣದ ಭಾಗಶಃ ತನಿಖೆಯನ್ನು ನಡೆಸಿದ್ದು, ಚಂದ್ರಶೇಖರ್ ಹೆಚ್ ವಿ ರವರು ತನಿಖೆಯನ್ನು ಪೂರ್ಣಗೊಳಿಸಿ ಮಾನ್ಯ ಎಸ್ ಸಿ ಜೆ ಮತ್ತು ಜೆ ಎಮ್ ಎಫ್ ಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿರುತ್ತಾರೆ.
ಸದ್ರಿ ಪ್ರಕರಣದ ವಿಚಾರಣೆಯು ಹಿರಿಯ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯದಲ್ಲಿ ನ್ಯಾಯಾಧೀಶರಾದ ಬಿ. ಮೋಹನ್ ಬಾಬು ರವರ ಸಮಕ್ಷಮ ನಡೆದು 30:10:2025 ರಂದು ಈ ಆರೋಪಿಗಳಲ್ಲಿ ಆರೋಪಿ 2, 4 ಮತ್ತು 5 ರವರುಗಳ ಅಪರಾಧ ಸಾಬೀತಾಗಿ ಅವರುಗಳನ್ನು ದೋಷಿ ಎಂದು ತೀರ್ಮಾನಿಸಿ ಉಳಿದ ಆರೋಪಿ 3, 6, 7 ಮತ್ತು 8 ರವರುಗಳ ಅಪರಾಧ ಸಾಬೀತಾಗದೆ ಅವರುಗಳನ್ನು ಬಿಡುಗಡೆಮಾಡಿ ತೀರ್ಪು ನೀಡಿರುತ್ತಾರೆ. 1ನೇ ಆರೋಪಿಯು ಮರಣಹೊಂದಿರುವುದರಿಂದ ಅವರ ಮೇಲಿನ ಪ್ರಕರಣ ಸ್ಥಗಿತಗೊಳಿಸಲಾಗಿರುತ್ತದೆ.
ದಿನಾಂಕ: 03:11:2025 ರಂದು ಶಿಕ್ಷೆಯ ಪ್ರಮಾಣಕ್ಕಾಗಿ ವಾದಮಂಡಿಸಲು ಅವಕಾಶ ನೀಡಿ, ಮಾನ್ಯ ನ್ಯಾಯಾಧೀಶರು ಈ ಕೆಳಕಂಡಂತೆ ಶಿಕ್ಷೆ ಪ್ರಕಟಿಸಿರುತ್ತಾರೆ.
ಆರೋಪಿಗಳಾದ 2, 4 ಮತ್ತು 5 ರವರುಗಳಿಗೆ ಕಲಂ 406 ಸಹವಾಚಕ 149 ರಡಿಯಲ್ಲಿ 3 ವರ್ಷಗಳ ಸಾದಾ ಕಾರಾಗೃಹ ವಾಸ, ಕಲಂ 409 ಮತ್ತು 420 ರಡಿಯಲ್ಲಿ ಸಹವಾಚಕ 149 ರೊಂದಿಗೆ ಎರಡೂ ಕಲಂಗಳಿಗೆ ಆರೋಪಿಗಳಿಗೆ ಪ್ರತ್ಯೇಕವಾಗಿ 3 ವರ್ಷಗಳ ಕಾಲ ಸಾದಾ ಕಾರಾಗೃಹ ವಾಸ ಮತ್ತು ₹10,000/- ದಂಡ, ದಂಡ ಕಟ್ಟಲು ತಪ್ಪಿದ್ದಲ್ಲಿ 6 ತಿಂಗಳ ಹೆಚ್ಚುವರಿ ಸಾದಾ ಕಾರಾಗೃಹ ವಾಸ ವಿಧಿಸಲಾಗಿದೆ. ಈ ಮೇಲಿನ ಎಲ್ಲಾ ಶಿಕ್ಷೆಗಳು ಏಕಕಾಲಕ್ಕೆ ಜಾರಿಗೊಳಿಸುವಂತೆ ಆದೇಶಿಸಲಾಗಿದೆ.
ಸರ್ಕಾರದ ಪರವಾಗಿ ಪ್ರಕರಣವನ್ನು ಸಹಾಯಕ ಸರ್ಕಾರಿ ಅಭಿಯೋಜಕರಾದ ರಮೇಶ್ ರವರು ವಾದ ಮಂಡಿಸಿರುತ್ತಾರೆ.



























