ಪತಿಯ ಅತಿಯಾದ ಅನುಮಾನ ಮತ್ತು ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಯುವತಿಯೋರ್ವಳು ಚಿಕಿತ್ಸೆ ಫಲಿಸದೆ ಮೃತಪಟ್ಟಿರುವ ಘಟನೆ ಹಾಸನದಲ್ಲಿ ನಡೆದಿದೆ.
ಎಚ್. ಎಲ್. ಇಂದ್ರ (24) ಮೃತರಾಗಿದ್ದು, ಹೆಚ್. ಮೈಲಳ್ಳಿ ಗ್ರಾಮದಲ್ಲಿನ ಪತಿ ಮನೆಯಲ್ಲಿ ಇವರು ಆತ್ಮಹತ್ಯೆಗೆ ಯತ್ನಿಸಿದ್ದರು. ಚಿಕಿತ್ಸೆಗಾಗಿ ಹಾಸನದ ಹಿಮ್ಸ್ಗೆ ದಾಖಲಿಸಲಾಗಿತ್ತಾದರೂ ದೇಹ ಸ್ಪಂದಿಸದ ಕಾರಣ ಅಂತಿಮವಾಗಿ ಯುವತಿ ಕೊನೆಯುಸಿರೆಳೆದಿದ್ದಾರೆ.
ಕಳೆದ ನಾಲ್ಕು ವರ್ಷಗಳ ಹಿಂದೆ ಹೆಚ್. ಮೈಲಳ್ಳಿ ಗ್ರಾಮದ ಎಂ.ಎಚ್. ಸ್ವಾಮಿ ಜೊತೆ ಇಂದ್ರ ಅವರ ವಿವಾಹವಾಗಿತ್ತು. ಮದುವೆ ಸಮಯದಲ್ಲಿ ಪತ್ನಿ ಮನೆಯವರು ಹಣ, ಒಡವೆ ನೀಡಿದ್ದರೂ ಸ್ವಾಮಿ ವರದಕ್ಷಿಣೆಗಾಗಿ ಪೀಡಿಸುತ್ತಿದ್ದ ಎನ್ನಲಾಗಿದೆ. ತಾನು ನಡೆಸುತ್ತಿದ್ದ ಬೇಕರಿ ವ್ಯವಹಾದಲ್ಲಿಯೂ ನಷ್ಟ ಉಂಟಾದ ಬಳಿಕ ಪತಿ ಕಿರುಕುಳ ಹೆಚ್ಚಾಗಿದೆ. ಇದೇ ವಿಚಾರವಾಗಿ ಒಂದೆರಡು ಬಾರಿ ರಾಜಿ ಪಂಚಾಯ್ತಿ ಕೂಡ ನಡೆದಿತ್ತು. ಆದರೂ ಬದಲಾಗದ ಸ್ವಾಮಿ, ಕಿರುಕುಳ ಮುಂದುವರಿಸಿದ್ದ ಎಂದು ದೂರಲಾಗಿದೆ. ಘಟನೆ ಬೆನ್ನಲ್ಲೇ ಮೃತ ಇಂದ್ರ ಪತಿ ಸ್ವಾಮಿ, ಅತ್ತೆ ಶಂಕ್ರಮ್ಮ, ಅತ್ತಿಗೆ ಪುಟ್ಟಿ ವಿರುದ್ದ ಪೊಲೀಸ್ ದೂರು ದಾಖಲಾಗಿದೆ.
ಇನ್ನು ಪತಿ ಸ್ವಾಮಿ ವರದಕ್ಷಿಣೆ ರೂಪದಲ್ಲಿ ಹಣಕ್ಕಾಗಿ ಬೇಡಿಕೆ ಇಟ್ಟ ಹಿನ್ನೆಲೆ 1.3 ಲಕ್ಷ ಹಣವನ್ನು ಮಗಳು ತನ್ನ ತಾಯಿಯಿಂದ ಪಡೆದು ಪತಿಗೆ ನೀಡಿದ್ದಳು. ಬಡ್ಡಿ ಸಾಲ ಮಾಡಿ ಆ ಹಣವನ್ನು ಇಂದ್ರ ತಾಯಿ ಗೌರಮ್ಮ ನೀಡಿದ್ದರು. ಆತ್ಮಹತ್ಯೆ ಯತ್ನಕ್ಕೂ ಮುನ್ನ ತಾಯಿಗೆ ಕರೆ ಮಾಡಿದ್ದ ಇಂದ್ರ, ಕಿರುಕುಳ ಸಹಿಸಲು ಸಾಧ್ಯವಾಗುತ್ತಿಲ್ಲ. ತನ್ನನ್ನು ಬಂದು ಕರೆದುಕೊಂಡು ಹೋಗುವಂತೆ ಬೇಡಿಕೊಂಡಿದ್ದಳು. ರಾತ್ರಿ ಸಮಯವಾಗಿದ್ದರಿಂದ ತಕ್ಷಣ ತೆರಳಲು ಗೌರಮ್ಮಗೆ ಸಾಧ್ಯವಾಗಿರಲಿಲ್ಲ. ಆದ್ರೆ ಬೆಳಿಗ್ಗೆ ವೇಳೆಗೆ ಮಗಳು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರೋದು ಪೋಷಕರಿಗೆ ಗೊತ್ತಾಗಿದೆ ಎನ್ನಲಾಗಿದೆ.


























