ಸೋಶಿಯಲ್ ಮೀಡಿಯಾದಲ್ಲಿ ಒಂದಲ್ಲ ಒಂದು ವಿಚಾರಕ್ಕೆ ಈ ಹುಡುಗನ ವಿಡಿಯೋ ಸಖತ್ ವೈರಲ್ ಆಗುತ್ತಿತ್ತು. ಸಾಮಾಜಿಕ ಜಾಲತಾಣದಲ್ಲಿ ಚಿಕ್ಕ ವಿಷಯವು ದೊಡ್ಡದಾಗಿ ವೈರಲ್ ಆಗುತ್ತದೆ. ಎಲ್ಲ ಮೀಮ್ಸ್ಗಳಲ್ಲಿ ಈ ಹುಡುಗನ ವಿಡಿಯೋವನ್ನು ನೋಡಿರಬಹುದು. ಟೀ ಹಿಡಿದುಕೊಂಡು ನಗುವ ನಗು ಇದೀಗ ದೇಶದಲ್ಲಿ ದೊಡ್ಡ ಸದ್ದು ಮಾಡಿದೆ. ಅಷ್ಟಕ್ಕೂ ಈ ಹುಡುಗ ಯಾರು ಗೊತ್ತಾ? ಸೋಷಿಯಲ್ ಮೀಡಿಯಾದಲ್ಲಿ ಇಂದು ಪ್ರತಿಯೊಂದು ಮೀಮ್ ಅಥವಾ ಟ್ರೋಲ್ ವಿಡಿಯೋಗಳಲ್ಲಿ ಕಾಣಿಸಿಕೊಳ್ಳುವ ಆ ಪ್ರಸಿದ್ಧ ನಗುಮೊಗದ ಚಹಾ ಹುಡುಗನ ಕಥೆ ನಿಜಕ್ಕೂ ಸ್ಫೂರ್ತಿದಾಯಕ. ಆತನ ಬಗ್ಗೆ ಕುತೂಹಲಕಾರಿ ಮಾಹಿತಿಗಳು ಇಲ್ಲಿವೆ.
ಈ ವೈರಲ್ ಹುಡುಗನ ಹೆಸರು ಅರುಣ್. ಈತ ನಮ್ಮ ಪಕ್ಕದ ತೆಲಂಗಾಣ ರಾಜ್ಯದ ಜಯಶಂಕರ್ ಬೊಪ್ಪಳಪಲ್ಲಿ ಜಿಲ್ಲೆಯ ನಾಲಪ್ಪುಚಟುವಲ್ಲಿ ಗ್ರಾಮದವನು. ಅತ್ಯಂತ ಬಡತನದ ಕುಟುಂಬದಿಂದ ಬಂದ ಅರುಣ್, ಜೀವನೋಪಾಯಕ್ಕಾಗಿ ಲಾರಿಯಲ್ಲಿ ಕ್ಲೀನರ್ (ಸಹಾಯಕ) ಆಗಿ ಕೆಲಸ ಮಾಡುತ್ತಿದ್ದಾನೆ. ಈ ವಿಡಿಯೋ ಯಾವುದೇ ಪ್ಲಾನಿಂಗ್ ಮಾಡಿ ಮಾಡಿದ್ದಲ್ಲ, ಬದಲಾಗಿ ಅದೊಂದು ಆಕಸ್ಮಿಕ ಸುಂದರ ಕ್ಷಣ, ಲಾರಿ ಚಾಲಕ ನೆಹರು ಅವರು ಚಹಾ ಕುಡಿಯುವಾಗ ಒಂದು ಜೋಕ್ ಹೇಳುತ್ತಾರೆ. ಅದನ್ನು ಕೇಳಿ ಅರುಣ್ ತನ್ನ ಮುಗ್ಧತೆಯಿಂದ ಗಹಗಹಿಸಿ ನಗುತ್ತಾನೆ.
ಅರುಣ್ ನಗುವನ್ನು ನೆಹರು ತಮ್ಮ ಮೊಬೈಲ್ನಲ್ಲಿ ಸೆರೆಹಿಡಿದು ಜಾಲತಾಣದಲ್ಲಿ ಹಂಚಿಕೊಳ್ಳುತ್ತಾರೆ. ಅಪ್ಲೋಡ್ ಆದ ಕೇವಲ ಒಂದೂವರೆ ತಿಂಗಳಲ್ಲೇ ಈ ವಿಡಿಯೋ 40 ಮಿಲಿಯನ್ (4 ಕೋಟಿ) ವೀಕ್ಷಣೆಗಳನ್ನು ದಾಟಿ ದಾಖಲೆ ಬರೆಯಿತು. ಅರುಣ್ ಬಡತನದ ಕಾರಣದಿಂದ ಕೇವಲ 4ನೇ ತರಗತಿಗೆ ಶಾಲೆಯನ್ನು ಅರ್ಧಕ್ಕೆ ಬಿಟ್ಟಿದ್ದನು. ಆದರೆ, ಈ ವಿಡಿಯೋ ವೈರಲ್ ಆದ ನಂತರ ಚಾಲಕ ನೆಹರು ಅವರ ಬೆಂಬಲದಿಂದ ಅರುಣ್ ಮತ್ತೆ ಓದಿನತ್ತ ಮುಖ ಮಾಡಿದ್ದಾನೆ. ಇತ್ತೀಚಿನ ವರದಿಗಳ ಪ್ರಕಾರ, ಅರುಣ್ 10ನೇ ತರಗತಿ ಪರೀಕ್ಷೆ ಬರೆದು ಉತ್ತೀರ್ಣನಾಗಿದ್ದಾನೆ. ರಾತ್ರೋರಾತ್ರಿ ಪ್ರಸಿದ್ಧಿ ಪಡೆದ ಅರುಣ್ ಈಗ ತೆಲಂಗಾಣದಲ್ಲಿ ಸೆಲೆಬ್ರಿಟಿ. ಅನೇಕ ದೊಡ್ಡ ದೊಡ್ಡ ಯೂಟ್ಯೂಬ್ ಚಾನೆಲ್ಗಳು ಈತನನ್ನು ಸಂದರ್ಶನ ಮಾಡಿವೆ.
ಈಗ ಅರುಣ್ ತಾನೇ ಒಂದು ಇನ್ಸ್ಟಾಗ್ರಾಂ ಖಾತೆ ತೆರೆದು ಕಾಮಿಡಿ ವಿಡಿಯೋಗಳನ್ನು ಮಾಡುತ್ತಾ ಸಾವಿರಾರು ಫಾಲೋವರ್ಸ್ ಹೊಂದಿದ್ದಾನೆ. ನಗುವಿಗೆ ಜಾತಿ, ಧರ್ಮ ಅಥವಾ ಭಾಷೆಯ ಹಂಗಿಲ್ಲ ಎಂಬುದು ಅರುಣ್ ವಿಷಯದಲ್ಲಿ ಸಾಬೀತಾಗಿದೆ. ಆತನ ಮುಗ್ಧ ನಗು ಎಂತಹ ಒತ್ತಡದಲ್ಲಿರುವವರಿಗೂ ಒಂದು ಕ್ಷಣ ನಗು ತರಿಸುತ್ತದೆ. ಅದಕ್ಕಾಗಿಯೇ ಇಂದಿಗೂ ಟ್ರೋಲಿಗರು ಯಾವುದೇ ಕಾಮಿಡಿ ವಿಡಿಯೋ ಎಡಿಟ್ ಮಾಡುವಾಗ ಅರುಣ್ ನಗುವಿನ ಕ್ಲಿಪ್ ಇಲ್ಲದೆ ಪೂರ್ಣಗೊಳಿಸುವುದಿಲ್ಲ. ಈ ಬಗ್ಗೆ ಸಂದರ್ಶನವೊಂದರಲ್ಲಿ ಅರುಣ್ ಹೀಗೆ ಹೇಳಿದ್ದಾನೆ. ಅರುಣ್ ಹೇಳುವಂತೆ, ಆತ ನಗುವಾಗ ಆತನಿಗೆ ತಾನು ಒಬ್ಬ ಬಡ ಲಾರಿ ಕ್ಲೀನರ್ ಎಂಬ ನೆನಪೇ ಇರಲಿಲ್ಲ. “ನನ್ನ ನಗು ಇಷ್ಟೊಂದು ಜನರಿಗೆ ಇಷ್ಟವಾಗುತ್ತದೆ ಎಂದು ನಾನು ಕನಸಿನಲ್ಲೂ ಅಂದುಕೊಂಡಿರಲಿಲ್ಲ. ಬಡತನದ ನೋವಿನ ನಡುವೆಯೂ ಆ ಒಂದು ಕ್ಷಣದ ನಗು ನನ್ನ ಜೀವನವನ್ನೇ ಬದಲಿಸಿತು” ಎಂದು ಭಾವುಕನಾಗಿ ಹೇಳಿದ್ದಾನೆ.
ನನ್ನ ಜೀವನದಲ್ಲಿ ನೆಹರು ಅಣ್ಣ (ಲಾರಿ ಡ್ರೈವರ್) ದೇವರಿಗಿಂತ ಕಡಿಮೆ ಇಲ್ಲ. ಅವರು ಆ ವಿಡಿಯೋ ಮಾಡದಿದ್ದರೆ. ನಾನು ಓದಬೇಕು ಎಂದು ಹಠ ಹಿಡಿಯದಿದ್ದರೆ ನಾನು ಇಂದಿಗೂ ಕೇವಲ ಕ್ಲೀನರ್ ಆಗಿಯೇ ಇರುತ್ತಿದ್ದೆ. ನಾನು 10ನೇ ತರಗತಿ ಓದಲು ಅವರೇ ಕಾರಣ. ವೈರಲ್ ಆದ ಮೇಲೆ ದೊಡ್ಡ ದೊಡ್ಡ ತೆಲುಗು ನಟರು ಮತ್ತು ಯೂಟ್ಯೂಬರ್ಗಳು ತನ್ನನ್ನು ಗುರುತಿಸಿ ಮಾತನಾಡಿಸಿದಾಗ ಆರಂಭದಲ್ಲಿ ತುಂಬಾ ಭಯವಾಗಿತ್ತು ಎಂದು ಅರುಣ್ ನೆನಪಿಸಿಕೊಂಡಿದ್ದಾನೆ. “ಈಗ ಜನರು ನನ್ನ ಜೊತೆ ಸೆಲ್ಫಿ ಕೇಳಿದಾಗ ವಿಚಿತ್ರ ಎನಿಸಿದರೂ ಖುಷಿಯಾಗುತ್ತದೆ. ಕೇವಲ ವಿಡಿಯೋ ಮಾಡುವುದು ಮಾತ್ರವಲ್ಲ, ಚೆನ್ನಾಗಿ ಓದಿ ಗೌರವಯುತವಾದ ಕೆಲಸ ಮಾಡಬೇಕು ಮತ್ತು ತನ್ನಂತೆಯೇ ಬಡತನದಲ್ಲಿರುವ ಮಕ್ಕಳಿಗೆ ಸಹಾಯ ಮಾಡಬೇಕು ಎಂದು ಹೇಳಿದರು.


























