ಚಿಕ್ಕಬಳ್ಳಾಪುರ: ಚಾಕುವಿನಿಂದ ಇರಿದು ವಿವಾಹಿತ ಪ್ರಿಯತಮೆಯನ್ನ ಪ್ರಿಯಕರ ಕೊಲೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಆದ್ರೆ ಆಕೆಯ ಇಬ್ಬರು ಮಕ್ಕಳು ಈಗ ಅನಾಥರಾಗಿದ್ದು ಮನಕಲಕುವ ಘಟನೆಗೆ ಸಾಕ್ಷಿಯಾಗಿದೆ.
ಚಿಕ್ಕಬಳ್ಳಾಪುರ ನಗರದ ತೇಜಸ್ವೀನಿ ಎಂಬಾಕೆ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಗಂಡನನ್ನ ಬಿಟ್ಟು ತನ್ನಿಬ್ಬರು ಪುಟ್ಟ ಮಕ್ಕಳೊಂದಿಗೆ ಏಕಾಂಗಿಯಾಗಿ ಜೀವನ ನಡೆಸುತಿದ್ದಳು.
ಹೋಟೆಲ್ ವೊಂದರಲ್ಲಿ ಕೆಲಸ ಮಾಡಿಕೊಂಡು ಹೋಟೆಲ್ ನವರೇ ಕೊಟ್ಟಿದ್ದ 1 ರೂಮಿನಲ್ಲಿ ಮಕ್ಕಳನ್ನ ಸಾಕಿ ಸಲುಹಿಕೊಂಡು ಜೀವನ ದೂಡುತ್ತಿದ್ದಳು. ಆದ್ರೆ ಅಲ್ಲಿ ಆಕೆಗೆ ಪರಿಚಯವಾದ ಸಂದೀಪ್ ಎಂಬ ಯುವಕನೊರ್ವ ಆಕೆಯ ಜೊತೆ ಅಕ್ರಮ ಸಂಬಂಧ ಬೆಳೆಸಿದ್ದಾನೆ.
ಅವರಿಬ್ಬರ ನಡುವೆ ನಡೆದ ಜಗಳದಲ್ಲಿ ಆಕೆ ಕೊಲೆಯಾಗಿ ಹೋಗಿದ್ದಾಳೆ. ಇದ್ರಿಂದ ಲೋಕದ ಅರಿವೇ ಇಲ್ಲದ ಆಕೆಯ ಇಬ್ಬರು ಪುಟ್ಟ ಮಕ್ಕಳು ಅನಾಥರಾಗಿದ್ದಾರೆ. ಮಕ್ಕಳ ಪರಿಸ್ಥಿತಿ ನೋಡಿದ್ರೆ ಎಂತಹವರಿಗೂ ಕರುಳು ಚುರುಕ್ ಎನ್ನುವಂತಾಗಿದೆ.
ಅಂದಹಾಗೆ ಹೋಟಲ್ನಲ್ಲಿ ಕೆಲಸ ಮಾಡಿಕೊಂಡಿದ್ದ ತೇಜಸ್ವಿನಿಗೆ ಸಂದೀಪ್ನ ಪರಿಚಯವಾಗಿದೆ. ಕಳೆದ 1 ತಿಂಗಳ ಹಿಂದೆ ತೇಜಸ್ವಿನಿ ಹಾಗೂ ಸಂದೀಪ್ ಇಬ್ಬರು ಸೇರಿ ಬೇರೆ ಮನೆ ಮಾಡಿ ಹೊಸ ಜೀವನ ಶುರು ಮಾಡಿದ್ದರು. ಆದ್ರೆ ಇವರಿಬ್ಬರು ಕಳೆದ 2 ದಿನಗಳ ಹಿಂದೆ ತೇಜಸ್ವೀನಿ ಸ್ನೇಹಿತೆ ಅರುಣಾ ಅವರ ಮನೆಯಲ್ಲಿ ಉಳಿದುಕೊಂಡಿದ್ದಾಗ. ಅಲ್ಲಿ ಕುಡಿದು ಗಲಾಟೆ ಮಾಡಿಕೊಂಡಿದ್ದಾರಂತೆ. ಆಗ ಕುಡಿದ ಅಮಲಿನಲ್ಲಿ ಪ್ರಿಯಕರ ಸಂದೀಪ್ ಮೇಲೆ ತೇಜಸ್ವಿನಿ ಹಲ್ಲೆ ಮಾಡಿದ್ದು. ಆಗ ಸಂದೀಪ್ ಮದ್ಯದ ಪಾಕೆಟ್ ಕಟ್ ಮಾಡಲು ಇಟ್ಟುಕೊಂಡಿದ್ದ ಚಾಕುವಿನಿಂದ ತೇಜಸ್ವಿನಿ ಹೊಟ್ಟೆ ಕಡೆ ಬೀಸಿದ್ದಾನೆ. ಆಗ ಗಾಯವಾಗಿ ತೀವ್ರ ರಕ್ತಸ್ರಾವವೂ ಆಗಿದೆ. ಕೂಡಲೇ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದು ಹೊಲಿಗೆ ಸಹ ಹಾಕಿಸಿಕೊಂಡಿದ್ದಾರೆ.
ಮತ್ತೆ ಮನೆಗೆ ಬಂದ ತೇಜಸ್ವಿನಿ ಮಾತ್ರೆ ಔಷಧಿ ತಗೊಳ್ಳೋ ಬದಲು ಮದ್ಯ ಸೇವಿಸಿ ಮಲಗಿ ಬಿಟ್ಟಿದ್ದಾಳಂತೆ. ಇದ್ರಿಂದ ಗಾಯ ಸೆಫ್ಟಿಕ್ ಆಗಿ ಹೊಟ್ಟೆಯೆಲ್ಲಾ ಇನ್ಫೆಕ್ಷನ್ ಆಗಿದೆ. ಇದ್ರಿಂದ ಆರೋಗ್ಯ ಸ್ಥಿತಿ ಗಂಭೀರ ಆಗಿ ಮರಳಿ ಬೆಳಗ್ಗೆ ಆಸ್ಪತ್ರೆಗೆ ದಾಖಲಿಸಿದ್ರೂ ಚಿಕಿತ್ಸೆ ಫಲಕಾರಿಯಾಗದೇ ಅಂಗಾಗ ವೈಫಲ್ಯದಿಂದ ಮೃತಪಟ್ಟಿದ್ದಾಳೆ.
ಇನ್ನೂ ಪ್ರಕರಣ ಸಂಬಂಧ ಚಿಕ್ಕಬಳ್ಳಾಪುರ ಪೊಲೀಸರು ಪ್ರಿಯಕರ ಸಂದೀಪ್ ನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ನಡೆದ ಘಟನೆಯನ್ನ ಬಾಯ್ಬಿಟ್ಟಿದ್ದು, ತೇಜಸ್ವಿನಿ ಹಣ ಹಾಗೂ ಮದ್ಯಕ್ಕಾಗಿ ಪೀಡಿಸುತ್ತಿದ್ದಳು. ಇದೇ ವಿಚಾರಕ್ಕೆ ಗಲಾಟೆಯಾಗಿ ಆಕಸ್ಮಿಕವಾಗಿ ಚಾಕು ತಗುಲಿದೆ ಅಂತ ಪೊಲೀಸರ ಮುಂದೆ ಹೇಳಿಕೊಂಡಿದ್ದಾನೆ.

























