ಬಂಟ್ವಾಳ: ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಚಿನ್ನಾಭರಣ ಕಳ್ಳತನ ಪ್ರಕರಣವನ್ನು ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದು, ಮಧ್ಯಪ್ರದೇಶ ಮೂಲದ ಆರೋಪಿಯನ್ನು ಬಂಧಿಸಿ ಸುಮಾರು 20 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಟ್ವಾಳ ನಗರ ಪೊಲೀಸ್ ಠಾಣಾ ಅ.ಕ್ರ. 132/2025, ಕಲಂ 303(2) BNS ಅನ್ವಯ ದಾಖಲಾಗಿದ್ದ ಪ್ರಕರಣವು 19.11.2025 ರಂದು ಬಂಟ್ವಾಳ ತಾಲೂಕಿನ ಬಾಳ್ತಿಲ ಗ್ರಾಮದ ಸಮುದ್ರ ಹೋಟೆಲ್ ಸಮೀಪ ಸಂಭವಿಸಿತ್ತು. ಬ್ರಹ್ಮಾವರ ಮೂಲದ ದಂಪತಿಗಳು ಶ್ರೀ ದುರ್ಗಾಂಬಾ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಅವರ ಬ್ಯಾಗ್ನಲ್ಲಿ ಇರಿಸಿದ್ದ ಸುಮಾರು 170 ರಿಂದ 180 ಗ್ರಾಂ ತೂಕದ ಚಿನ್ನಾಭರಣಗಳನ್ನು ಕಳ್ಳತನ ಮಾಡಲಾಗಿತ್ತು.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತನಿಖೆ ನಡೆಸಿ ಮಧ್ಯಪ್ರದೇಶ ರಾಜ್ಯದ ಧಾರ್ ಜಿಲ್ಲೆಯ ಧರಂಪುರಿ ತಾಲೂಕಿನ ಆಜಾದ್ ಮಾರ್ಗ, ವಾರ್ಡ್ ನಂ.2 ನಿವಾಸಿ ಸಮದ್ ಖಾನ್ (37), ತಂದೆ ಮಹಮ್ಮದ್ ಆದಿಲ್ ಖಾನ್ ಎಂಬ ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತನಿಂದ ಸುಮಾರು 174 ಗ್ರಾಂ ತೂಕದ, ಅಂದಾಜು 20 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದು, ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ. ಅರುಣ್ ಕೆ., ಐಪಿಎಸ್ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಅನಿಲ್ ಕುಮಾರ್ ಭೂಮರೆಡ್ಡಿ ಅವರ ಮಾರ್ಗದರ್ಶನದಲ್ಲಿ, ಸಹಾಯಕ ಪೊಲೀಸ್ ಅಧೀಕ್ಷಕರಾದ ಯಶ್ ಕುಮಾರ್ ಶರ್ಮಾ ಅವರ ನಿರ್ದೇಶನದಂತೆ ಈ ಕಾರ್ಯಾಚರಣೆ ನಡೆಸಲಾಯಿತು.
ಇದಲ್ಲದೆ ಮಧ್ಯಪ್ರದೇಶದ ಧಾರ್ ಜಿಲ್ಲೆಯ ಪೊಲೀಸ್ ಅಧೀಕ್ಷಕರಾದ ಮಯಾಂಕ್ ಅವಸ್ತಿ, ಐಪಿಎಸ್, ಧಾರ್ ನಗರ ಪೊಲೀಸ್ ಅಧೀಕ್ಷಕರಾದ ಸುಜಾವಲಾ ಜಗ್ಗ, ಐಪಿಎಸ್, ಧಾರ್ ಸೈಬರ್ ಕ್ರೈಂ ಪಿಎಸ್ಐ ಪ್ರಶಾಂತ್ ಮತ್ತು ಸಿಬ್ಬಂದಿಗಳ ಸಹಕಾರವೂ ಲಭ್ಯವಾಯಿತು.
ಪ್ರಕರಣದ ತನಿಖಾಧಿಕಾರಿಯಾಗಿರುವ ಬಂಟ್ವಾಳ ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಅನಂತ ಪದ್ಮನಾಭ ಕೆ.ವಿ ಅವರ ನೇತೃತ್ವದಲ್ಲಿ, ಪೊಲೀಸ್ ಉಪ ನಿರೀಕ್ಷಕ ಸಂದೀಪ್ ಕುಮಾರ್ ಶೆಟ್ಟಿ ಹಾಗೂ ಠಾಣೆಯ ಸಿಬ್ಬಂದಿಗಳು ಆರೋಪಿಯನ್ನು ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಕಾರ್ಯಾಚರಣೆಯಲ್ಲಿ ಹೆಡ್ ಕಾನ್ಸ್ಟೇಬಲ್ ವಿಜಯ್ ಕುಮಾರ್, ರಾಜೇಶ್, ಇರ್ಷಾದ್, ಪಿ.ಸಿ ಬಸವರಾಜ್, ಹೆಚ್.ಸಿ ಸುರೇಶ್ ಕುಮಾರ್, ಸಿ.ಪಿ.ಸಿ ವಿಜಯ್ ಕುಮಾರ್ ಹಾಗೂ ಮಪಿಸಿ ರೇವತಿ ಭಾಗವಹಿಸಿದ್ದರು.
ಇದಲ್ಲದೆ ದ.ಕ ಜಿಲ್ಲೆ ಡಿಎಸ್ ಘಟಕದ ಪೊಲೀಸ್ ನಿರೀಕ್ಷಕರಾದ ನಂದ ಕುಮಾರ್ ಹಾಗೂ ಗಣಕ ಯಂತ್ರ ಘಟಕದ ಸಿಬ್ಬಂದಿಗಳಾದ ಸಂಪತ್ ಕುಮಾರ್ ಮತ್ತು ದಿವಾಕರ್ ಅವರುಗಳು ಕಾರ್ಯಾಚರಣೆಗೆ ಸಹಕರಿಸಿದ್ದಾರೆ.

























