ಎ.10 ಮತ್ತು 11 : ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದಲ್ಲಿ ಪ್ರತಿಷ್ಠಾ ವರ್ಧಂತಿ, ಚಂಡಿಕಾ ಹೋಮ, ಮೂಡಪ್ಪ ಸೇವೆ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮ
ಪ್ರತಿ ಮನೆಗೆ ಆಮಂತ್ರಣ ಪತ್ರಿಕೆ ಜತೆಗೆ ಪೂಜಾ ರಶೀದಿ : ವಿತರಣೆಗೆ ಭಕ್ತಾಧಿಗಳ ನೇತೃತ್ವದ ತಂಡಗಳ ರಚನೆ
ಕ್ಷೇತ್ರದ ಆದಾಯ ವೃದ್ದಿಗೆ ಕಲ್ಯಾಣ ಮಂಟಪ ನಿರ್ಮಾಣದ ಯೋಜನೆ : ಸುನಿಲ್ ಕುಮಾರ್ ರೈ ಪೆರುವಾಜೆಗುತ್ತು
ಪೆರುವಾಜೆ : ಸುಳ್ಯ, ಪುತ್ತೂರು, ಕಡಬ ತಾಲೂಕಿನ ಇಪ್ಪತ್ತೆರಡು ಗ್ರಾಮಗಳಿಗೆ ಒಳಪಟ್ಟಿರುವ ಮಾಗಣೆ ಕ್ಷೇತ್ರ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದಲ್ಲಿ ಎ.10 ಮತ್ತು 11 ರಂದು ಪ್ರತಿಷ್ಠಾ ವರ್ಧಂತಿ, ಚಂಡಿಕಾ ಹೋಮ, 108 ನಾಳಿಕೇರ ಗಣಪತಿ ಹವನ, ಮೂಡಪ್ಪ ಸೇವೆ ಶ್ರೀ ಸತ್ಯನಾರಾಯಣ ಪೂಜೆ ನಡೆಯಲಿದ್ದು ವ್ಯವಸ್ಥಿತ ರೀತಿಯಲ್ಲಿ ಕಾರ್ಯಕ್ರಮ ನಡೆಸುವ ನಿಟ್ಟಿನಲ್ಲಿ ಭಕ್ತಾದಿಗಳ ಸಭೆಯು ಮಾ.29 ರಂದು ಶ್ರೀ ಕ್ಷೇತ್ರದಲ್ಲಿ ನಡೆಯಿತು.
ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸುನಿಲ್ ಕುಮಾರ್ ರೈ ಪೆರುವಾಜೆಗುತ್ತು ಮಾತನಾಡಿ, ಮಾಗಣೆ ಕ್ಷೇತ್ರದ ಪ್ರತಿ ಗ್ರಾಮಕ್ಕೂ ಆಮಂತ್ರಣ ಪತ್ರಿಕೆ ತಲುಪಿಸುವ ಪ್ರಯತ್ನ ನಡೆಸಲಾಗುವುದು. ಮುಂದಿನ ದಿನಗಳಲ್ಲಿ ಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಪ್ರತಿ ಮನೆಯಿಂದಲೂ ಬರುವಂತಾಗಬೇಕು. ಹೀಗಾಗಿ ಆಮಂತ್ರಣ ಪತ್ರಿಕೆಯನ್ನು ಮನೆ ಮನೆಗೆ ಹಂಚಲು ಭಕ್ತವೃಂದದ ಸಹಕಾರ ಅತ್ಯಗತ್ಯ ಎಂದರು.
ಮನೆ ಮನೆಗೆ
ಪೂಜಾ ರಶೀದಿ
ಪ್ರತಿಷ್ಠಾ ವರ್ಧಂತಿ, ಚಂಡಿಕಾ ಹೋಮ, 108 ನಾಳಿಕೇರ ಗಣಪತಿ ಹವನ, ಮೂಡಪ್ಪ ಸೇವೆ ಶ್ರೀ ಸತ್ಯನಾರಾಯಣ ಪೂಜೆಯ ಆಮಂತ್ರಣದ ಜತೆಗೆ ಪೂಜಾ ರಶೀದಿಯನ್ನು ಪ್ರತಿ ಮನೆ ಮನೆಗೆ ತಲುಪಿಸಲು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು. ಪ್ರತಿ ಮನೆಯವರು 350 ರೂ.ಮೊತ್ತದ ಪೂಜಾ ರಶೀದಿ ಮಾಡುವ ಮೂಲಕ ಸಹಕಾರ ನೀಡುವಂತೆ ವಿನಂತಿಸಲು ನಿರ್ಧರಿಸಲಾಯಿತು.
ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಪದ್ಮನಾಭ ಶೆಟ್ಟಿ ಪೆರುವಾಜೆ ಮಾತನಾಡಿ, ರಶೀದಿ ಪುಸ್ತಕವನ್ನು ಪ್ರತಿಯೊಬ್ಬರು ಪಡೆದುಕೊಂಡು ಬೇರೆ ಬೇರೆ ಭಾಗಗಳಲ್ಲಿ ವಿತರಿಸಲು ಯೋಜನೆ ರೂಪಿಸಬೇಕು. ಆಮಂತ್ರಣ ಪತ್ರಿಕೆ ವಿತರಣೆಗೆ ತಂಡ ರಚಿಸಿದರೆ ಆ ಕಾರ್ಯ ಸುಲಭವಾಗಿ ಮಾಡಬಹುದು. ಮುಖ್ಯವಾಗಿ ಪೂಜಾ ರಶೀದಿ ಪ್ರತಿ ಮನೆಗೆ ತಲುಪಲು ಆದ್ಯತೆ ನೀಡುವ ಅಗತ್ಯ ಇದೆ ಎಂದರು.
ಕಲ್ಯಾಣ ಮಂಟಪ
ಕ್ಷೇತ್ರದ ಆದಾಯ ವೃದ್ದಿಯ ದೃಷ್ಟಿಯಿಂದ ಕಲ್ಯಾಣ ಮಂಟಪ ನಿರ್ಮಾಣದ ಯೋಜನೆಯ ಬಗ್ಗೆ ವಿವರಿಸಿದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸುನಿಲ್ ಕುಮಾರ್ ರೈ, ವಾರ್ಷಿಕ ಖರ್ಚು ವೆಚ್ಚ, ಆದಾಯದ ವಿವರಗಳನ್ನು ಸಭೆಯ ಮುಂದಿಟ್ಟರು. ಕಲ್ಯಾಣ ಮಂಟಪದ ಕುರಿತಂತೆ ಬೇರೆ ಬೇರೆ ಕಡೆಗಳಲ್ಲಿ ಪರಿಶೀಲಿಸಲಾಗಿದೆ. ಎಲ್ಲರ ಸಹಕಾರ ಪಡೆದು ಈ ಯೋಜನೆ ಕಾರ್ಯಗತಗೊಳಿಸುವ ವಿಶ್ವಾಸ ಹೊಂದಿದ್ದೇವೆ ಎಂದರು.
ಸಭೆಯಲ್ಲಿ ವ್ಯವಸ್ಥಾಪನ ಸಮಿತಿ ಸದಸ್ಯರಾದ ದೀಪಕ್ ಶೆಟ್ಟಿ, ಪಿ.ಅಜಯ್ ಶೆಟ್ಟಿ, ಶೇಷಪ್ಪ ನಾಯ್ಕ, ನಿರ್ಮಲಾ ರೈ, ಮಾಜಿ ಸದಸ್ಯರಾದ ನಾರಾಯಣ ಕೊಂಡೆಪ್ಪಾಡಿ, ಸುಜಾತ ರೈ ಪೆರುವಾಜೆ, ಪ್ರಮುಖರಾದ ಜಗದೀಶ್ ರೈ ಪೆರುವಾಜೆ, ಪ್ರೀತಂ ರೈ ಪೆರುವಾಜೆ, ಜಯಚಂದ್ರ ಪೆರುವಾಜೆ, ಪೂರ್ಣಿಮಾ ಉಮೇಶ್, ಶಿವಪ್ರಕಾಶ್ ಆಚಾರ್ಯ ಪೆರುವಾಜೆ, ಜಯಂತ ಗೌಡ ಕುಂಡಡ್ಕ, ಪೂರ್ಣಿಮಾ ಎನ್ ಕೆ., ರೂಪ ಸಾರಕರೆ, ದಿವ್ಯ,ವೇದಿತ್ ರೈ, ವಸಂತ ಪೆರುವಾಜೆ ಮೊದಲಾದವರು ಉಪಸ್ಥಿತರಿದ್ದರು.



























