ಉಪ್ಪಿನಂಗಡಿ: ಕೊಪ್ಪಳ ಹಾಗೂ ಸುತ್ತಮುತ್ತಲಿನ ಪರಿಸರದ ನಾಲ್ಕು ಮನೆಗಳಿಗೆ ಕಳ್ಳರು ನುಗ್ಗಿದ ಘಟನೆ ಸೆ.21ರ ರಾತ್ರಿ ನಡೆದಿದೆ. 2 ಮನೆಯಲ್ಲಿ ಕಳ್ಳತನಕ್ಕೆ ವಿಫಲ ಯತ್ನ ನಡೆಸಿದ್ದು , ಉಳಿದೆರಡು ಮನೆಯಲ್ಲಿ ಅಲ್ಪ ಪ್ರಮಾಣದ ನಗದು ದೋಚುವಲ್ಲಿ ಕಳ್ಳರ ತಂಡ ಸಫಲರಾಗಿದ್ದಾರೆ.

ಉಪ್ಪಿನಂಗಡಿ ಗ್ರಾಮದ ಕೊಪ್ಪಳ ಎಂಬಲ್ಲಿ ಅಬ್ದುಲ್ ರಹಿಮಾನ್ ಎಂಬವರ ಮನೆಯ ಬೀಗ ಮುರಿದು ಒಳ ನುಗ್ಗಿರುವ ಕಳ್ಳರು 200 ರೂಪಾಯಿ ಹಣವನ್ನು ಕಳವುಗೈದಿದ್ದಾರೆ. ಸಮೀಪದ ವಿನೋದಾ ಎಂಬವರ ಮನೆಗೂ ಕಳ್ಳರು ನುಗ್ಗಿದ್ದು ಅಲ್ಲಿಂದ 600 ರೂಪಾಯಿ ಎಗರಿಸಿದ್ದಾರೆ.

ಕೈಸ್ ಎಂಬವರ ಮನೆಯ ಬಾಗಿಲು ಮುರಿಯಲು ಯತ್ನಿಸಿದಾಗ ಮನೆ ಮಂದಿ ಎಚ್ಚರಗೊಂಡ ಹಿನ್ನಲೆಯಲ್ಲಿ ಕವಿತಾ ಎಂಬವರ ಮನೆಯ ಅಂಗಳದ ಬಳಿ ಕಳ್ಳರು ಬಂದಿದ್ದು ಅಲ್ಲಿ ಮನೆ ಮಂದಿ ಗಮನಿಸಿದ್ದರಿಂದ ಕಳ್ಳರು ಪರಾರಿಯಾಗಿದ್ದಾರೆಂದು ಹೇಳಲಾಗಿದೆ.

ಘಟನಾ ಸ್ಥಳಕ್ಕೆ ಡಿವೈಎಸ್ಪಿ. ಗಾನಾ ಪಿ. ಕುಮಾರ್, ಉಪ್ಪಿನಂಗಡಿ ಎಸ್.ಐ. ಕುಮಾರ್ ಕಾಂಬ್ಳೆ, ಬೆರಳಚ್ಚು ತಜ್ಞರು, ಶ್ವಾನ ದಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
























