ಪುತ್ತೂರು: ಇತ್ತಂಡಗಳು ಹೊಡೆದಾಡಿಕೊಂಡು ಪೊಲೀಸರು ಆಗಮಿಸಿ ತಂಡವನ್ನು ಚದುರಿಸಿದ ಘಟನೆ ಅ 22 ರಂದು ಸಂಜೆ ಕುಂಬ್ರ ಪೇಟೆಯಲ್ಲಿ ನಡೆದಿದ್ದು, ಘಟನೆಯಿಂದಾಗಿ ಇತ್ತಂಡಗಳ ಇಬ್ಬರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ.
ಕಾಂಗ್ರೆಸ್ ಹಾಗೂ ಎಸ್ಡಿಪಿಐ ಪಕ್ಷದ ಕುಂಬ್ರ ಪರಿಸರದ ಕಾರ್ಯಕರ್ತರು ಹೊಡೆದಾಡಿಕೊಂಡಿದ್ದು, ಘಟನೆಯಿಂದಾಗಿ ಗಾಯಗೊಂಡ ಇಬ್ಬರು ಕಾರ್ಯಕರ್ತರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆಸ್ಪತ್ರೆಗೆ ದಾಖಲಾದವರನ್ನು ಕಾಂಗ್ರೆಸ್ ಕಾರ್ಯಕರ್ತ ಶಾಕೀರ್ ಮತ್ತು ಎಸ್.ಡಿ.ಪಿ.ಐ. ಕಾರ್ಯಕರ್ತ ಸರ್ಫರಾಝ್ ಎಂದು ಗುರುತಿಸಲಾಗಿದೆ.
ಅ. 20 ರಂದು ಎರಡು ತಂಡಗಳ ನಡುವೆ ಹೊಡೆದಾಟ ನಡೆದು ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ಕುಂಬ್ರದ ವಾಟ್ಸಾಪ್ ಗ್ರೂಪಿನಲ್ಲಿ ಇಂದು ಬೆಳಿಗ್ಗೆಯಿಂದಲೇ ಎರಡು ಗುಂಪುಗಳ ನಡುವೆ ಬಿಸಿಬಿಸಿ ಚರ್ಚೆ ನಡೆದಿತ್ತು ಎನ್ನಲಾಗಿದೆ. ಇಂದು ಮಧ್ಯಾಹ್ನ ಈ ಚರ್ಚೆ ತಾರಕಕ್ಕೇರಿತ್ತು, ಇದರ ಮುಂದಿನ ಬೆಳವಣಿಗೆಯಾಗಿ ಈ ಎರಡು ತಂಡಗಳ ಮಧ್ಯೆ ಮಾರಾಮಾರಿ ನಡೆದಿದೆ ಎನ್ನಲಾಗಿದೆ.