ಕಡಬ: ಅನಾರೋಗ್ಯದಿಂದ ಬಳಲುತ್ತಿರುವ ಹಿಂದೂ ಮಹಿಳೆಯೊಬ್ಬರ ಕಾಯಿಲೆಯನ್ನು ಮಂತ್ರವಾದದಿಂದ ಸರಿಪಡಿಸಲೆಂದು ಬಂದ ಅನ್ಯಕೋಮಿನ ವ್ಯಕ್ತಿಯೊಬ್ಬ ಮನೆಯಲ್ಲಿರುವುದನ್ನು ಗಮನಿಸಿದ ಹಿಂದೂ ಸಂಘಟನೆ ಕಾರ್ಯಕರ್ತರು ದಾಳಿ ನಡೆಸಿ, ಪೊಲೀಸರಿಗೆ ಮಾಹಿತಿ ಮತ್ತು ಪೊಲೀಸರು ಮಂತ್ರವಾದಿಯನ್ನು ವಶಕ್ಕೆ ಪಡೆದುಕೊಂಡು ಮುಚ್ಚಳಿಕೆ ಬರೆಸಿಕೊಂಡು ಬಿಡುಗಡೆಗೊಳಿಸಿದ ಘಟನೆ ಕಡಬದಲ್ಲಿ ನ.2ರಂದು ಸಂಜೆ ನಡೆದಿದೆ.
ನ.02 ರಂದು ಕೊಂಬಾರು ಗ್ರಾಮದ ಮನೆಯೊಂದರಲ್ಲಿ ಮಹಿಳೆಯೊಬ್ಬರು ಹಲವಾರು ಸಮಯದಿಂದ ಕಾಯಿಲೆಯಿಂದ ಬಳಲುತ್ತಿದ್ದು, ಈ ಕಾಯಿಲೆಯನ್ನು ಮಂತ್ರವಾದದಿಂದ ಗುಣಪಡಿಸಲೆಂದು ಮೂಲತಃ ಬಂಟ್ವಾಳ ತಾಲೂಕು ವಗ್ಗ ನಿವಾಸಿ, ಪ್ರಸ್ತುತ ಬೆಂಗಳೂರಿನ ಚಿಂತಾಮಣಿ ಭಾಗದ ದರ್ಗಾವೊಂದರಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆಬೀದ್ ಎಂಬವರು ಈ ಹಿಂದೆಯೂ ಆ ಮನೆಗೆ ಬಂದಿದ್ದು, ಅಂತೆಯೇ ಇಂದು ಕೂಡ ಬಂದು, ಲಿಂಬೆ ಹುಳಿಯಲ್ಲಿ ಏನೋ ಕ್ರಿಯೆಗಳನ್ನು ಮಾಡುತ್ತಿದ್ದರು ಎನ್ನಲಾಗಿದೆ.
ಈ ಬಗ್ಗೆ ಸ್ಥಳೀಯರು ಕಡಬ ವಿ.ಹಿಂ.ಪ ಕಾರ್ಯದರ್ಶಿ ಪ್ರಮೋದ್ ರೈಯವರಿಗೆ ಮಾಹಿತಿ ನೀಡಿದ್ದು, ಕೂಡಲೇ ಅವರು ಹಾಗೂ ಕೊಂಬಾರಿನ ಹಲವಾರು ಮಂದಿ ಮನೆಗೆ ಭೇಟಿ ನೀಡಿ ವಿಚಾರಿಸಿದ್ದು, ಆತ ಕಪಟ ಮಂತ್ರವಾದಿ ಏನೋ ದುರುದ್ದೇಶದಿಂದ ಅನಾರೋಗ್ಯ ಪೀಡಿತ ಕುಟುಂಬವನ್ನು ತಪ್ಪು ದಾರಿಗೆ ಎಳೆಯುತ್ತಿದ್ದ ಎಂದು ಆಪಾದಿಸಿ ಕಡಬ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಪೊಲೀಸರು ಆಗಮಿಸಿ ಮಂತ್ರವಾದಿ ಎನ್ನಲಾದ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಂಡು ಬಳಿಕ ಮುಚ್ಚಳಿಕೆ ಪಡೆದುಕೊಂಡು ಬಿಡುಗಡೆಗೊಳಿಸಿದ್ದಾರೆ.
ಅನ್ಯಮತಿಯ ವ್ಯಕ್ತಿಯೋರ್ವ ಕೆಲವು ದಿನಗಳಿಂದ ಆ ಮನೆಗೆ ಭೇಟಿ ಕೊಡುತ್ತಿದ್ದ, ಅಲ್ಲದೆ ಇಂದು ಕೂಡ ಮನೆಯೊಳಗಡೆ ಇದ್ದಾನೆ ಎನ್ನುವ ಸ್ಥಳೀಯರ ಮಾಹಿತಿ ಯನ್ವಯ ಹಿಂದೂ ಸಂಘಟನೆಯ ನೇತೃತ್ವದಲ್ಲಿ ಆ ಮನೆಗೆ ಭೇಟಿ ನೀಡಿದ ವೇಳೆ ಮನೆಯಲ್ಲಿ ಇಬ್ಬರು ಮಹಿಳೆಯರು ಮತ್ತು ಅವರ ಗಂಡಂದಿರು, ಮನೆ ಮಂದಿ ಇದ್ದರು. ಮನೆಗೆ ಭೇಟಿ ನೀಡುತ್ತಿದ್ದಂತೆ ಇಬ್ಬರು ಮಹಿಳೆಯರೂ ತಮಗೆ ಏನೋ ದೆವ್ವ ಬಂದಂತೆ ವರ್ತಿ ಬಂದವರನ್ನು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡ ಘಟನೆಯೂ ನಡೆಯಿತು.
ಈ ವೇಳೆ ಮನೆಯ ಪುರುಷರು ಕೂಡ ಕಾರ್ಯಕರ್ತರೊಂದಿಗೆ ಮಾತಿನ ಚಕಮಕಿ ನಡೆಸಿ, ಈಗಾಗಲೇ ಆ ವ್ಯಕ್ತಿಯಿಂದ ಇವರ ಅರ್ಧ ಕಾಯಿಲೆ ಗುಣವಾಗಿದೆ, ಅವರ ಮೈಗೆ ಯಾವೋದೋ ದೈವಿ ಶಕ್ತಿ ಆವರಿಸಿದೆ ಅದನ್ನು ಈ ಮಂತ್ರವಾದಿಯವರು ಸರಿ ಮಾಡುತ್ತಾರೆ, ಇನ್ನು ನೀವೇ ಸರಿ ಮಾಡಿ ನೋಡೋಣ ಎಂದು ಸವಾಲು ಹಾಕಿದರು. ಬಳಿಕ ಪೊಲೀಸರು ಬಂದಾಗಲೂ ಆ ಮಹಿಳೆಯರು ಅವರನ್ನು ತರಾಟೆಗೆ ತೆಗೆದುಕೊಂಡರು.
ಈ ವೇಳೆ ಮಂತ್ರವಾದಿ ಸಮಾಧಾನ ಹೇಳುತ್ತಿದ್ದುದು ಕಂಡು ಬಂತು. ಠಾಣೆಯಲ್ಲಿ ಮಂತ್ರವಾದಿ ಎನ್ನಲಾದ ಆಬೀದ್ ಅವರನ್ನು ವಿಚಾರಿಸಲಾಗಿ ಆತ ಮೂಲತಃ ಬಂಟ್ವಾಳ ನಿವಾಸಿಯಾಗಿದ್ದು ಪ್ರಸ್ತುತ ಬೆಂಗಳೂರಿನ ಚಿಂತಾಮಣಿಯಲ್ಲಿ ದರ್ಗಾ ವೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಅವರು ಈ ಹಿಂದೆ ಕೊಂಬಾರು ಭಾಗದಲ್ಲಿ ಮಹಿಳೆಯೊಬ್ಬರ ಪ್ರೇತ ಭಾದೆಯನ್ನು ಬಿಡಿಸಿದ್ದರು, ಅಲ್ಲಿ ಬಂದಾಗ ಈ ಮನೆಯವರಿಗೆ ಸಂಪರ್ಕವಾಗಿ ಈ ಹಿಂದೆ ಮೂರು ನಾಲ್ಕು ಬಾರಿ ಬಂದಿದ್ದರು ಎಂದು ತಿಳಿದು ಬಂತು. ಬಳಿಕ ಪೊಲೀಸರು ಮುಚ್ಚಳಿಕೆ ಬರೆದುಕೊಂಡು ಅನಾರೋಗ್ಯ ಪೀಡಿತರನ್ನು ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ನೀಡಿ, ಮಾಟ ಮಂತ್ರವಾದಗಳಿಗೆ ಹೆಚ್ಚು ಬಲಿ ಬೀಳಬೇಡಿ ಎಂದು ಸಲಹೆ ನೀಡಿ ಕಳುಹಿದ್ದಾರೆ ಎಂದು ತಿಳಿದು ಬಂದಿದೆ.



























