ನೆಲ್ಯಾಡಿ: ಚಲಿಸುತ್ತಿದ್ದ ಬೈಕ್ ನ ಮೇಲೆ ಮರ ಬಿದ್ದ ಪರಿಣಾಮ ಸವಾರ ಗಾಯಗಳೊಂದಿಗೆ ಪಾರಾದ ಘಟನೆ ಗುಂಡ್ಯ ಸಮೀಪದ ಅಡ್ಡಹೊಳೆ ಎಂಬಲ್ಲಿ ಜ.17 ರಂದು ಬೆಳಗ್ಗೆ ನಡೆದಿದೆ.
ಗಾಯಗೊಂಡ ಸವಾರನನ್ನು ಕಾಸರಗೋಡು ನಿವಾಸಿ ಪವನ್ ಎನ್ನಲಾಗಿದೆ.
ಹಾಸನದ ಖಾಸಗಿ ಕಂಪನಿಯೊಂದರಲ್ಲಿ ಮೆನೇಜರ್ ಆಗಿದ್ದ ಪವನ್, ಇಂದು ಬೆಳಗ್ಗೆ ಕಾಸರಗೋಡಿನಿಂದ ಹಾಸನಕ್ಕೆ ತೆರಳುತ್ತಿದ್ದ ವೇಳೆ ಅಡ್ಡಹೊಳೆ ತಲುಪುತ್ತಿದ್ದಂತೆಯೇ ಬೃಹತ್ ಗಾತ್ರದ ಮರವೊಂದು ಬೈಕಿನ ಹಿಂಬದಿಗೆ ಬಿದ್ದಿದೆ. ಪರಿಣಾಮ ಬೈಕ್ ಪಲ್ಟಿಯಾಗಿ ಸುಮಾರು ದೂರಕ್ಕೆ ಜಾರಿ ಬಿದ್ದು ಸವಾರ ರಸ್ತೆಗೆಸೆಯಲ್ಪಟ್ಟು ಗಾಯಗೊಂಡಿದ್ದು, ತಕ್ಷಣವೇ ಗಾಯಾಳುವನ್ನು ಸ್ಥಳೀಯರ ನೆರವಿನಿಂದ ಶಿರಾಡಿ ಪ್ರಾಥಮಿಕ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಇದೇ ರಸ್ತೆಯಲ್ಲಿ ಕೆಲ ದಿನಗಳ ಹಿಂದೆ ಮರವೊಂದು ಕಾರಿನ ಮೇಲೆ ಬಿದ್ದು ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದರು.




























