ಪುತ್ತೂರು: ಪಡುವನ್ನೂರು ಗ್ರಾಮದ ಅಂಬಟೆಮೂಲೆಯ ಪರಿಶಿಷ್ಟ ಪಂಗಡದ ನಾಲ್ಕು ಮನೆಗಳ ಕುಟುಂಬಸ್ಥರು ಮನೆಗಳಿಗೆ ಅನಾದಿಕಾಲದಿಂದಲೂ ಓಡಾಡುವ 6 ಅಡಿ ಅಗಲದ ರಸ್ತೆಯನ್ನು ಸ್ಥಳೀಯರೊಬ್ಬರು ಹೊಂಡ ತೆಗೆದು ರಸ್ತೆ ಬಂದ್ ಮಾಡಿ, ಕುಡಿಯುವ ನೀರಿಗೂ ತೊಂದರೆ ನೀಡಿದ್ದಾರೆ. ನಮಗೆ ನಡೆದು ಹೋಗಲು ರಸ್ತೆ ಕೊಡಿ, ಕುಡಿಯಲು ನೀರು ಕೊಡಿ ಎಂದು ಆಗ್ರಹಿಸಿ ಪರಿಶಿಷ್ಟ ಪಂಗಡದ ನಾಲ್ಕು ಮನೆಗಳ ಕುಟುಂಬಸ್ಥರು ಪುತ್ತೂರು ತಾಲೂಕು ಆಡಳಿತ ಸೌಧದ ಎದುರು ಧರಣಿ ಕುಳಿತುಕೊಂಡಿದ್ದಾರೆ.
ಪಡುವನ್ನೂರು ಗ್ರಾಮದ ಪರಿಶಿಷ್ಟ ಪಂಗಡಕ್ಕೆ ಸೇರಿದ ನಾಲ್ಕು ಮನೆಗಳಿಗೆ ಹೋಗಲು ಅಂಬಟೆಮೂಲೆ ಮುಖ್ಯ ರಸ್ತೆಯಿಂದ ಸುಮಾರು 100 ಅಡಿ ಉದ್ದಕ್ಕೆ ಪರಮೇಶ್ವರಿ ನಾಯ್ಕ ಎಂಬವರಿಗೆ ಸೇರಿದ ಅಕ್ರಮ ಸಕ್ರಮದಲ್ಲಿ ಮಂಜೂರಾದ ಜಮೀನಿನಲ್ಲಿ ಅನಾದಿಕಾಲದಿಂದಲೂ ಆರು ಅಡಿ ಅಗಲದ ರಸ್ತೆಯಿದ್ದು, ಆದರೇ ಈ ರಸ್ತೆಯನ್ನು ಈಗ ಪರಮೇಶ್ವರಿ ಮತ್ತು ಅವರ ಮಕ್ಕಳು ಸೇರಿ ಬಂದ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಅಷ್ಟೇ ಅಲ್ಲದೇ ರಸ್ತೆ ಇರುವ ಪರಿಸರದಲ್ಲಿ ಕುಪ್ಪಿ ಚೂರು ಹಾಕಿ ತೊಂದರೆ ನೀಡಿದ್ದು, ಇದರಿಂದಾಗಿ ಆ ಭಾಗದ ನಾಲ್ಕು ಮನೆಗಳಿಗೆ ತೊಂದರೆ ಉಂಟಾಗಿದ್ದು, ಈ ಕುರಿತು ಸಂಪ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದು, ತಹಶೀಲ್ದಾರ್ ಮತ್ತು ಜಿಲ್ಲಾಧಿಕಾರಿವರಿಗೂ ದೂರು ನೀಡಿದರೂ ಯಾವುದೇ ಪ್ರಯೋಜವಾಗಿಲ್ಲ. ನಮಗೆ ನ್ಯಾಯ ಕೊಡಿ ಎಂದು ನೊಂದ ನಾಲ್ಕು ಮನೆಗಳ ಕುಟುಂಬಸ್ಥರು ಪುತ್ತೂರು ತಾಲೂಕು ಆಡಳಿತ ಸೌಧದ ಎದುರು ಧರಣಿ ಕೈಗೊಂಡಿದ್ದಾರೆ.
ಈ ವೇಳೆ ಪಡುವನ್ನೂರು ಗ್ರಾಮದ ಅಂಬಟೆಮೂಲೆ ನಿವಾಸಿಗಳಾದ ಯುವರಾಜ್, ಸಂಧ್ಯಾ, ಸಂತೋಷ್, ಚಿತ್ರಾ, ಸಂದೀಪ್, ಹೇಮವಾತಿ, ಚಂದ್ರಹಾಸ, ಗಿರೀಶ್ ಧರಣಿಯಲ್ಲಿ ನಿರತರಾಗಿದ್ದರು. ಮರಾಠಿ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಅಶೋಕ್ ನಾಯ್ಕ ಈಶ್ವರಮಂಗಲದ ಕೊರಗಪ್ಪ, ನ್ಯಾಯವಾದಿ ಪಡ್ಡಂಬೈಲು, ಶೇಷಪ್ಪ ನೆಕ್ಕಿಲು ಉಪಸ್ಥಿತರಿದ್ದರು.




























