ಮಂಗಳೂರು: ರಥಬೀದಿಯಲ್ಲಿರುವ ಸರಕಾರಿ ಕಾಲೇಜಿನಲ್ಲಿ ನಡೆದ ಹಿಜಾಬ್ ಗಲಾಟೆಗೆ ಸಂಬಂಧಿಸಿದಂತೆ 15 ಮಂದಿ ವಿದ್ಯಾರ್ಥಿಗಳ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನಗರದ ರಥಬೀದಿಯ ದಯಾನಂದ ಪೈ-ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ಹಿಜಾಬ್ ಧರಿಸಿ ತೆರಳಿದ್ದ ಮತ್ತು ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿನಿಗೆ ದೈಹಿಕ ಹಲ್ಲೆ ನಡೆಸಿ, ಮಾನಸಿಕ ಹಿಂಸೆ ನೀಡಿ ಧಾರ್ಮಿಕವಾಗಿ ನಿಂದಿಸಿದ್ದಾರೆನ್ನಲಾದ ಆರೋಪದ ಮೇಲೆ ಸಾಯಿ ಸಂದೇಶ್ ಹಾಗೂ ಇತರರ ಮೇಲೆ ಬಂದರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನಗರದ ರಥಬೀದಿಯ ದಯಾನಂದ ಪೈ- ಸತೀಶ್ ಪೈ ಪ್ರಥಮ ದರ್ಜೆ ಕಾಲೇಜಿನ ಕೆಲವು ವಿಧ್ಯಾರ್ಥಿಗಳು ಸೇರಿದಂತೆ ಇತರೆ 15 ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಸರಕಾರಿ ಕಾಲೇಜಿನಲ್ಲಿ ಹಿಜಾಬ್ ಧರಿಸಿ ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿನಿಯರ ಎದುರು ಕೆಲವು ವಿದ್ಯಾರ್ಥಿಗಳು ಗಲಾಟೆ ನಡೆಸಿದ್ದರು. ಈ ಘಟನೆ ಕುರಿತು ವಿದ್ಯಾರ್ಥಿನಿ ಹಿಬಾ ಶೇಖ್ ಬಂದರು ಠಾಣೆಗೆ ದೂರು ನೀಡಿದ್ದರು. ಅದರಂತೆ ಪೊಲೀಸರು ನ್ಯಾಯಾಲಯದ ಅನುಮತಿ ಪಡೆದು ನಾಲ್ವರು ಪ್ರಮುಖ ವಿದ್ಯಾರ್ಥಿಗಳಲ್ಲದೆ ಇತರ 15 ಮಂದಿಯ ವಿರುದ್ಧ ಐಪಿಸಿ ಸೆಕ್ಷನ್ 323, 504ರಡಿ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

























