ಮಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ದಿನಕ್ಕೊಂದು ಸುದ್ದಿ ಹರಿದಾಡುತ್ತಿದ್ದು, ಕೆಲವೊಂದು ವಿಚಾರಗಳು ಭಾರೀ ವೈರಲ್ ಆಗುತ್ತವೆ., ಅದೇ ರೀತಿ ಕಳೆದ ಕೆಲ ಸಮಯಗಳ ಹಿಂದೆ ಮುಸ್ಲಿಂ ಸಮಾವೇಶವೊಂದರಲ್ಲಿ ‘ತಾಂಟ್ ರೇ ಬಾ ತಾಂಟ್’ ಎಂದು ಹೇಳುವುದರ ಮೂಲಕ ಭಾರೀ ಸುದ್ದಿಯಾಗಿದ್ದ ರಿಯಾಜ್ ಫರಂಗಿಪೇಟೆ ಇದೀಗ ಮತ್ತೊಮ್ಮೆ ಕೆ.ಜಿ. ಎಫ್.-2 ಸಿನಿಮಾ ಡೈಲಾಗ್ ಅನ್ನು ಸಮಾವೇಶದಲ್ಲಿ ಹೇಳುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.
ಮೇ.27 ರಂದು ಮಂಗಳೂರಿನ ಕಣ್ಣೂರಿನಲ್ಲಿ ಎಸ್. ಡಿ. ಪಿ. ಐ. ವತಿಯಿಂದ ನಡೆದ ಜನಾಧಿಕರ ಸಮಾವೇಶದಲ್ಲಿ ಪಾಲ್ಗೊಂಡ ರಿಯಾಜ್ ಫರಂಗಿಪೇಟೆ, ಬಿಜೆಪಿ ಹಾಗೂ ಸಂಘಪರಿವಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ದಕ್ಷಿಣ ಕನ್ನಡ ಜಿಲ್ಲೆ ಎಂದರೆ ಅದು ಎಸ್. ಡಿ. ಪಿ.ಐಯ ಶಕ್ತಿಕೇಂದ್ರವಾಗಿದೆ. ಮಳಲಿಯ ಮಸೀದಿಯನ್ನು ಅತಿಕ್ರಮಣ ಮಾಡುವಂತಹ ಕಾರ್ಯಗಳು ನಡೆಯುತ್ತಿದೆ, ಆದರೇ ಯಾವುದೇ ಕಾರಣಕ್ಕೂ ನಾವು ಬಿಟ್ಟು ಕೊಡುವುದಿಲ್ಲ, ಮಸೀದಿಯ ಒಂದು ಇಟ್ಟಿಗೆಯನ್ನು ಬಿಟ್ಟು ಕೊಡುವುದಿಲ್ಲ, ನಮ್ಮ ಜೀವವನ್ನು ಬಲಿ ಅರ್ಪಿಸಿಯಾದರು ಕೂಡ ನಮ್ಮ ಜಿಲ್ಲೆಯ ಈ ಮಸೀದಿಯನ್ನು ಉಳಿಸಿಕೊಳ್ಳುತ್ತೇವೆ ಎಂದರು.

ಸಮುದಾಯದ ಮಧ್ಯೆ ದಾರಿ ತಪ್ಪಿಸುವ ಕೆಲಸಗಳನ್ನು ಬಿಜೆಪಿ ಮತ್ತು ಸಂಘ ಪರಿವಾರದವರು ಮಾಡುತ್ತಿದ್ದು, ಈ ಬಗ್ಗೆ ಹೋರಾಟ ಮಾಡಿದರೆ ನಮ್ಮ ನಾಯಕರ ಮೇಲೆ ಕೇಸು ದಾಖಲಿಸಲಾಗುತ್ತದೆ, ಅವರನ್ನು ಬಂಧಿಸಲಾಗುತ್ತದೆ ಎಂದು ಕಿಡಿಕಾರಿದರು. ಇದೇ ವೇಳೆ ನಾವು ಖಂಡಿತವಾಗಿಯೂ ಗಲಭೆ ಪ್ರಿಯರಲ್ಲ, ನಮಗೆ ಗಲಭೆಗಳು, ಪ್ರತಿಕಾರಗಳು ಕೊಲೆಗಳು ಇಷ್ಟವಿಲ್ಲ, ಉತ್ತಮ ಭವಿಷ್ಯವನ್ನು ಕಟ್ಟಿಕೊಳ್ಳಲು ಎಸ್. ಡಿ. ಪಿ. ಐ. ಕಾಯುತ್ತಿದೆ. ಅದೇ ರೀತಿ ಸಂಘ ಪರಿವಾರದ ಜೊತೆ, ರಾಜಕೀಯ ಪಕ್ಷದೊಂದಿಗೆ ಎಸ್. ಡಿ. ಪಿ. ಐ. ಹೇಳುವುದೆನೆಂದರೇ “violence..violence..violence, we don’t like it, we avoid, But violence likes us.. We can’t Avoid” ಎಂದು ಹೇಳಿದ್ದರು.
ಅಧ್ಯಕ್ಷೀಯ ಭಾಷಣ ಮಾಡಿದ ಎಸ್ ಡಿ ಪಿ ಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಖಾನ್ ಅವರು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರಕಾರ ಧರ್ಮ ವಿಚಾರದಲ್ಲಿ ಸಮಾಜವನ್ನು ಇಬ್ಬಾಗ ಮಾಡಲು ಹೊರಟಿದೆ. ಮಳಲಿ ಮಸೀದಿ ಬಗ್ಗೆ ಮಾತನಾಡುವ ಭಜರಂಗಿಗಳು ತಮ್ಮದೇ ಪಕ್ಷದ ಜನಾರ್ದನ ರೆಡ್ಡಿ ದೇವಸ್ಥಾನವನ್ನು ಧ್ವಂಸ ಮಾಡಿದಾಗ ಎಲ್ಲಿದ್ದೀರಿ..? ಮಳಿಲಿಯಿಂದ ಮರಳು ಕೂಡಾ ನಿಮಗೆ ನೀಡಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ ಸರಕಾರದ ಸಚಿವರು ಮೊಟ್ಟೆ, ಸಮವಸ್ತ್ರ ಮತ್ತು ಪಿಎಸೈ ಹಗರಣದಲ್ಲಿ ಕೋಟಿ ಕೋಟಿ ಕೊಳ್ಳೆ ಹೊಡೆದಿದ್ದಾರೆ. ಸಂಘಪರಿವಾರದ ಕುತಂತ್ರಕ್ಕೆ ಕಾಂಗ್ರೆಸ್ ನವರು ಹೆದರಬಹುದು, ಆದರೆ ಎಸ್ ಡಿ ಪಿ ಐ ಯವರು ಎಂದಿಗೂ ಹೆದರಲ್ಲ ಎಂದರು.

ಇಲ್ಯಾಸ್ ತುಂಬೆ ಮಾತನಾಡಿ, ಶಾಂತಿಯ ಬೀಡಾಗಿದ್ದ ಕರ್ನಾಟಕ ಇಂದು ಅಶಾಂತಿಯ ನಾಡಾಗಿ ಮಾರ್ಪಟ್ಟಿದೆ. ಮಸೀದಿ- ಚರ್ಚ್ ಗಳ ಮೇಲೆ ದಾಳಿ, ದಲಿತರು, ಅಲ್ಪಸಂಖ್ಯಾತರ ಮೇಲಿನ ದಾಳಿ ಇಲ್ಲಿ ಸಾಮಾನ್ಯವೆಂಬಂತಾಗಿದೆ. ಮುತಾಲಿಕ್, ಈಶ್ವರಪ್ಪರಂತಹ ಸಂಘಪರಿವಾರದ ನಾಯಕರು ಎಗ್ಗಿಲ್ಲದೆ ನಾಲಗೆ ಹರಿಯಬಿಡುತ್ತಿದ್ದಾರೆ. ಸಂಘಪರಿವಾರದ ನಾಯಕರ ಈ ಕೃತ್ಯಕ್ಕೆ ಸ್ವತಃ ಮುಖ್ಯಮಂತ್ರಿಯವರೇ ಅಭಯ ನೀಡುತ್ತಿದ್ದಾರೆ. ಇದರಿಂದ ಪ್ರೇರಣೆಗೊಂಡ ಸಂಘಪರಿವಾರದ ಕಾರ್ಯಕರ್ತರು ದುಷ್ಕೃತ್ಯದಲ್ಲಿ ತೊಡಗಿದ್ದಾರೆ. ಸಚಿವ ಸಂಪುಟದ ಸದಸ್ಯರು ಕೂಡ ನರಮೇಧ, ಹತ್ಯಾಕಾಂಡದ ಬಗ್ಗೆ ಬಹಿರಂಗವಾಗಿ ಮಾತನಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಅಭಿವೃದ್ಧಿ ವಿಷಯವನ್ನು ಮುಂದಿಟ್ಟು ಮತ ಕೇಳಿದರೆ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಗೆದ್ದು ಬರುವುದಿಲ್ಲ ಎಂಬ ವಾಸ್ತವದ ಅರಿವು ಬಿಜೆಪಿಗೆ ಇದೆ. ಈ ಹಿನ್ನೆಲೆಯಲ್ಲಿ ಹಿಂದೂ, ಮುಸ್ಲಿಮ್ ಎಂಬ ಕೋಮು ವಿಷಯವನ್ನು ಮುಂದಿಟ್ಟು ಸಮಾಜ ವಿಭಜನೆಯಲ್ಲಿ ತೊಡಗಿದೆ ಎಂದು ಟೀಕಿಸಿದ ಅವರು, ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ದೇಶವನ್ನು ಲೂಟಿ ಮಾಡುತ್ತಿದ್ದಾರೆ. ಬಿಜೆಪಿಗೆ ಮುಂದಿನ ಚುನಾವಣೆಯಲ್ಲಿ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.
ರಾಜ್ಯ ಸಮಿತಿ ಸದಸ್ಯ ಅಥಾವುಲ್ಲಾ ಜೋಕಟ್ಟೆ, ಎಸ್ ಡಿಪಿಐ ಇಂದು ದೇಶದಲ್ಲಿ ಪರ್ಯಾಯ ರಾಜಕೀಯ ಶಕ್ತಿ ಬೆಳೆಯುತ್ತಿದೆ. ಜನಪರ ಹೋರಾಟ, ಪಾರದರ್ಶಕ ನಾಯಕತ್ವದಿಂದ ಪಕ್ಷ ಇಂದು ಜನಮನ್ನಣೆ ಗಳಿಸಿದೆ. ಮುಂದಿನ ದಿನಗಳಲ್ಲಿ ಪಕ್ಷ ಇನ್ನಷ್ಟು ಶಕ್ತಿಶಾಲಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಿದರು.


























