ಅಯೋಧ್ಯೆ: ಉತ್ತರಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರದ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ಜೂನ್ 1ರಂದು ಗರ್ಭಗುಡಿಗೆ ಶಂಕುಸ್ಥಾಪನೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಗರ್ಭಗುಡಿಯನ್ನು ಕೆಂಪುಕಲ್ಲುಗಳಿಂದ ನಿರ್ಮಿಸಲಾಗುತ್ತಿದೆ.
2024ರ ಸಂಕ್ರಾಂತಿ ವೇಳೆಗೆ ಗರ್ಭಗುಡಿಯಲ್ಲಿ ರಾಮನ ವಿಗ್ರಹ ಪ್ರತಿಷ್ಠಾಪನೆಯಾಗಲಿದ್ದು, ನಂತರದ ದಿನಗಳಲ್ಲಿ ಭಕ್ತರು ಅಯೋಧ್ಯೆಯಲ್ಲಿ ಪ್ರಾರ್ಥನೆ ಸಲ್ಲಿಸಬಹುದಾಗಿದೆ. 2020ರ ಆಗಸ್ಟ್ 5ರಂದು ರಾಮಮಂದಿರ ನಿರ್ಮಾಣಕ್ಕೆ ಮೋದಿ ಶಂಕುಸ್ಥಾಪನೆ ಮಾಡಿದ್ದರು.
ಗರ್ಭಗುಡಿಗೆ ಶಂಕುಸ್ಥಾಪನೆ ನೆರವೇರಿಸುವ ಕಾರ್ಯಕ್ರಮ ನಿಗದಿಯಾಗಿರುವುದನ್ನು ದೃಢಪಡಿಸಿರುವ ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಪದಾಧಿಕಾರಿಯೊಬ್ಬರು, ಗರ್ಭಗುಡಿಯಲ್ಲಿ ರಾಮ ಲಲ್ಲಾ ಮತ್ತು ರಾಮನ ಮೂವರು ಸೋದರರ ಪ್ರತಿಮೆಗಳನ್ನು ಸ್ಥಾಪಿಸಲಾಗುವುದು ಎಂದು ಹೇಳಿದ್ದರು.
ರಾಮಮಂದಿರ ನಿರ್ಮಾಣಕ್ಕಾಗಿ ತಳಹದಿ (ಪಾಯ, ಕಂಬಗಳ ಬುಡ) ಪೂರ್ಣಗೊಂಡಿದೆ. ಇದೀಗ ಗರ್ಭಗುಡಿಯ ಕೆಲಸಗಳು ಆರಂಭವಾಗಬೇಕಿವೆ. ಜೂನ್ 1 ಒಳ್ಳೆಯ ದಿನ. ಅಂದು ಸರ್ವತ್ರ ಸಿದ್ಧಿ ಯೋಗವಿದೆ. 11 ಪುರೋಹಿತರು ಬೆಳಿಗ್ಗೆ 9ರಿಂದ 11 ಗಂಟೆಯವರೆಗೆ ವಿವಿಧ ಧಾರ್ಮಿಕ ವಿಧಿಗಳನ್ನು ನೆರವೇರಿಸಲಿದ್ದಾರೆ ಎಂದು ಸಮಿತಿಯ ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸಮಿತಿಯ ಅಧ್ಯಕ್ಷರಾಗಿ ನಿವೃತ್ತ ಅಧಿಕಾರಿ ನೃಪೇಂದ್ರ ಮಿಶ್ರಾ ಸೇವೆ ಸಲ್ಲಿಸುತ್ತಿದ್ದಾರೆ. ಈ ಮೊದಲು ಡಿಸೆಂಬರ್ 2023ರಲ್ಲಿ ಗರ್ಭಗುಡಿಯ ಕೆಲಸಗಳು ಪೂರ್ಣಗೊಳ್ಳಲಿವೆ ಎಂದು ಘೋಷಿಸಿಸಿದ್ದರು. 2024ರ ಲೋಕಸಭಾ ಚುನಾವಣೆಗೆ ಮೊದಲು ಅಯೋಧ್ಯೆಯಲ್ಲಿ ರಾಮನ ಪೂಜೆಗೆ ಅವಕಾಶ ಮಾಡಿಕೊಡುವುದು ಬಿಜೆಪಿಯ ಉದ್ದೇಶ. ರಾಮ ಮಂದಿರವನ್ನು ಬಿಜೆಪಿ ಚುನಾವಣೆ ಪ್ರಚಾರದಲ್ಲಿ ಬಳಸಿಕೊಳ್ಳಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಗರ್ಭಗೃಹ ನಿರ್ಮಾಣವಾಗಬೇಕಿರುವ ಸ್ಥಳದಲ್ಲಿ ಎಂಜಿನಿಯರ್ ಮತ್ತು ಕಾರ್ಮಿಕರು ಹಗಲಿರುಳು ಕೆಲಸ ಮಾಡುತ್ತಿದ್ದಾರೆ. ಈ ಪ್ರದೇಶದಲ್ಲಿ ಭದ್ರತಾ ಸಿಬ್ಬಂದಿ ಹದ್ದಿನಕಣ್ಣು ಇರಿಸಿದ್ದಾರೆ. ಇಡೀ ಗರ್ಭಗುಡಿಯನ್ನು ರಾಜಸ್ಥಾನದ ಮರ್ಕಾನಾ (ಮಾರ್ಬಲ್) ಬಳಸಿ ಕಟ್ಟಲಾಗುವುದು. ರಾಮ ಮಂದಿರದ ಮುಖ್ಯ ಕಟ್ಟಡಕ್ಕೆ 4.7 ಲಕ್ಷ ಕ್ಯೂಬಿಕ್ ಮೀಟರ್ಗಳಷ್ಟು ಕಲ್ಲುಗಳು ಬಳಕೆಯಾಗಲಿವೆ.
1990ರಲ್ಲಿ ದೇಶದ 3.5 ಲಕ್ಷ ಗ್ರಾಮಗಳಿಂದ ಸಂಗ್ರಹಿಸಿದ್ದ ಇಟ್ಟಿಗೆಗಳನ್ನೂ ರಾಮಮಂದಿರಕ್ಕೆ ಬಳಸಲಾಗುವುದು. ರಾಮ್ ಘಾಟ್ ಕಾರ್ಯಾಗಾರದಲ್ಲಿ ಸಂಗ್ರಹಿಸಿದ್ದ ‘ರಾಮ ಶಿಲೆ’ಗಳನ್ನು ಈಗಾಗಲೇ ಕಟ್ಟಡ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ವರ್ಗಾಯಿಸಲಾಗಿದೆ. ವಾಸ್ತುಶಾಸ್ತ್ರಕ್ಕೆ ಅನುಗುಣವಾಗಿ ನಿರ್ಮಿಸುವ ಈಶಾನ್ಯ ಕೋನದಲ್ಲಿ ಈ ಶಿಲೆಗಳನ್ನು ಬಳಸಲಾಗುವುದು ಎಂದು ಮೂಲಗಳು ಹೇಳಿವೆ.


























