ಲಕ್ನೋ: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರಕ್ಕೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬುಧವಾರ ಅಭಿಜಿತ್ ಮುಹೂರ್ತ, ಮೃಗಶಿರ ನಕ್ಷತ್ರ, ಆನಂದ ಯೋಗದಲ್ಲಿ ಗರ್ಭಗುಡಿಗೆ ಶಿಲಾನ್ಯಾಸ ನೆರವೇರಿಸಿದರು.

ಶಿಲಾನ್ಯಾಸದ ಬಳಿಕ ಮಾತನಾಡಿದ ಯುಪಿ ಸಿಎಂ, ರಾಮಮಂದಿರ ಭಾರತದ ರಾಷ್ಟ್ರೀಯ ದೇವಾಲಯವಾಗಲಿದೆ. ಜನರು ಈ ದಿನಕ್ಕಾಗಿ ಬಹಳ ಸಮಯದಿಂದ ಕಾಯುತ್ತಿದ್ದರು. ಈ ರಾಮಮಂದಿರ ಭಾರತದ ಏಕತೆಯ ಸಂಕೇತವಾಗಲಿದೆ ಎಂದು ತಿಳಿಸಿದರು.
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯವನ್ನು ಪ್ರಧಾನಿ ನರೇಂದ್ರ ಮೋದಿ 2 ವರ್ಷಗಳ ಹಿಂದೆ ಪ್ರಾರಂಭಿಸಿದರು. ನಿರ್ಮಾಣಕಾರ್ಯ ಯಶಸ್ವಿಯಾಗಿ ಮುಂದುವರಿಯುತ್ತಿದ್ದು, ಇಂದು ಗರ್ಭಗುಡಿಯಲ್ಲಿ ಶಿಲಾರಾಧನೆ ನಡೆಸುತ್ತಿರುವುದು ನಮ್ಮ ಅದೃಷ್ಟ ಎಂದು ಯೋಗಿ ನುಡಿದರು.
ಗರ್ಭಗುಡಿ ನಿರ್ಮಾಣಕ್ಕೆ ಪೂರ್ವಭಾವಿಯಾಗಿ ರಾಮಮಾರ್ಚ, ದುರ್ಗಾ ಸಪ್ತಶತಿ, ರುದ್ರಾಭಿಷೇಕ, ರಾಮರಕ್ಷಾ ಸ್ತೋತ್ರ, ವಿಷ್ಣು ಸಹಸ್ರನಾಮ, ಹನುಮಾನ್ ಚಾಲೀಸ, ಸುಂದರಕಾಂಡ ಪಾರಾಯಣ ನಡೆಯಿತು. ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಯೋಗಿ ಆದಿತ್ಯನಾಥ್ ಅವರು ಗರ್ಭಗುಡಿಗಾಗಿ ಕೆತ್ತಿದ ಮೊದಲ ಶಿಲೆಯನ್ನು ಇಟ್ಟು, ನಿರ್ಮಾಣ ಕಾರ್ಯಕ್ಕೆ ಅನುವು ಮಾಡಿಕೊಟ್ಟರು. ರಾಮಮಂದಿರದ ಗರ್ಭಗುಡಿ 2023ರ ಡಿಸೆಂಬರ್ ಒಳಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದು ದೇವಾಲಯದ ಉಸ್ತುವಾರಿ ವಹಿಸಿರುವ ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ತಿಳಿಸಿದೆ.


























