ಮಂಗಳೂರು: ನಂತೂರು ಸರ್ಕಲ್ ಬಳಿ ಅಪ್ರಾಪ್ತ ವಯಸ್ಸಿನ ಮಕ್ಕಳು ಭಿಕ್ಷಾಟನೆ ನಡೆಸುತ್ತಾ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದಾರೆ ಎಂಬುದಾಗಿ ಸಾರ್ವಜನಿಕರಿಂದ ಚೈಲ್ಡ್ ಲೈನ್ -1098 ಕ್ಕೆ ಮಾಹಿತಿ ಬಂದ ಹಿನ್ನೆಲೆ, ಚೈಲ್ಡ್ ಲೈನ್ ತಂಡವು ನಂತೂರಿನ ಸ್ಥಳಕ್ಕೆ ತೆರಳಿ ಭಿಕ್ಷಾಟನೆಯಲ್ಲಿ ತೊಡಗಿಕೊಂಡಿದ್ದ ಬೆಂಗಳೂರಿನ ತಾವರೆಕೆರೆಯ ಮಹಿಳೆ ಹಾಗೂ ಆಕೆಯ ಬಳಿಯಿದ್ದ 1 ವರ್ಷದ ಹೆಣ್ಣುಮಗುವನ್ನು ರಕ್ಷಿಸಿ ಮಕ್ಕಳ ಕಲ್ಯಾಣ ಸಮಿತಿಯ ಆದೇಶದಂತೆ ಮಹಿಳಾ ಘಟಕದಲ್ಲಿ ಪುನರ್ವಸತಿ ಕಲ್ಪಿಸಿದರು.

ಈ ಸಂದರ್ಭದಲ್ಲಿ ಚೈಲ್ಡ್ ಲೈನ್ ನ ಕೇಂದ್ರ ಸಂಯೋಜಕರಾದ ದೀಕ್ಷಿತ್ ಅಚ್ರಪ್ಪಾಡಿ, ಸಿಬ್ಬಂದಿಗಳಾದ ಆಶಾಲತ ಕುಂಪಲ, ಹಾಗೂ ಜಯಂತಿ ಸ್ವಯಂ ಸೇವಕರಾದ ಕವನ್ ಕಬಕ ಉಪಸ್ಥಿತರಿದ್ದರು.
ನಗರದ ನಂತೂರನ್ನೇ ಕೇಂದ್ರ ಬಿಂದುವನ್ನಾಗಿರಿಸಿ ವಲಸೆ ಕುಟುಂಬಗಳು ಮಕ್ಕಳನ್ನು ಭಿಕ್ಷಾಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಹಾಗೂ ಅವರದೇ ಮಗುವೆನ್ನುವುದಕ್ಕೆ ಸ್ಪಷ್ಟ ದಾಖಲೆಗಳು ಇವರುಗಳ ಬಳಿ ಇಲ್ಲದಿರುವುದು ಕಂಡು ಬಂದಿದೆ. ಆದ್ದರಿಂದ ಭಿಕ್ಷಾಟನೆ ನಿರತ ಮಕ್ಕಳು ನಗರದಲ್ಲಿ ಕಂಡುಬಂದಲ್ಲಿ ದಯವಿಟ್ಟು ಹಣದ ರೂಪದಲ್ಲಿ ಭಿಕ್ಷೆ ನೀಡಬೇಡಿ, ಕೂಡಲೇ ಚೈಲ್ಡ್ ಲೈನ್ -1098 ಕ್ಕೆ ಕರೆಮಾಡಿ ಮಾಹಿತಿ ನೀಡುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


























