ಉಡುಪಿ: ಕೊಲೆ ಬೆದರಿಕೆ ಹಿನ್ನೆಲೆ ಉಡುಪಿ ಸರಕಾರಿ ಮಹಿಳಾ ಪಿಯು ಕಾಲೇಜು ಉಪಾಧ್ಯಕ್ಷ ಯಶ್ಪಾಲ್ ಸುವರ್ಣ ಅವರಿಗೆ ಗನ್ ಮ್ಯಾನ್ ಪಡೆದುಕೊಳ್ಳುವಂತೆ ಉಡುಪಿ ಪೊಲೀಸ್ ಇಲಾಖೆ ಸಲಹೆ ನೀಡಿದೆ.
ಹಿಜಾಬ್ ವಿವಾದ ಪ್ರಕರಣದ ಹಿನ್ನೆಲೆ ನಿರಂತರ ಕೊಲೆ ಬೆದರಿಕೆ ಎದುರಿಸುತ್ತಿರುವ ಯಶ್ಪಾಲ್ ಸುವರ್ಣ ಅವರಿಗೆ ಕಾನೂನನ್ನು ಗೌರವಿಸುವ ಮೂಲಕ ಗನ್ಮ್ಯಾನ್ ಪಡೆದುಕೊಳ್ಳುವಂತೆ ಉಡುಪಿ ಎಸ್ಪಿ ವಿಷ್ಣುವರ್ಧನ್ ಸಲಹೆ ನೀಡಿದ್ದಾರೆ.
ಗನ್ಮ್ಯಾನ್ ಪಡೆಯುವಂತೆ ಪೊಲೀಸ್ ಇಲಾಖೆ ನೀಡಿದ ಸಲಹೆ ಬಗ್ಗೆ ಉಡುಪಿಯಲ್ಲಿ ಮಾತನಾಡಿದ ಯಶ್ಪಾಲ್ ಸುವರ್ಣ, ಪೊಲೀಸ್ ಇಲಾಖೆ ಇಂದು ಗನ್ಮ್ಯಾನ್ ಕಳುಹಿಸಿಕೊಟ್ಟಿದೆ. ನಾನು ಗನ್ ಮ್ಯಾನ್ ಸಂಸ್ಕೃತಿಯಲ್ಲಿ ಬೆಳೆದವ ಅಲ್ಲ. ಉಡುಪಿಯಲ್ಲಿ ಓಡಾಡುವಾಗ ಗನ್ ಮ್ಯಾನ್ ಬೇಡ ಎಂದಿದ್ದೇನೆ. ಈ ಬಗ್ಗೆ ಪಕ್ಷದ ಹಿರಿಯರ ಅಭಿಪ್ರಾಯ ಪಡೆಯುತ್ತೇನೆ. ಪೊಲೀಸ್ ಇಲಾಖೆ ಗನ್ ಮ್ಯಾನ್ ಪಡೆಯಲೇಬೇಕು ಎಂದು ಹೇಳಿದೆ. ಪೊಲೀಸ್ ಇಲಾಖೆ ತನ್ನ ಚೌಕಟ್ಟಿನಲ್ಲಿ ಕೆಲಸ ನಿರ್ವಹಿಸಬೇಕಾಗಿದೆ. ಆದರೆ ನಮಗೆಲ್ಲಾ ಭದ್ರತೆ ನೀಡಿದರೆ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ ಎಂದು ಹೇಳಿಕೆ ನೀಡಿದ್ದಾರೆ.
ಮಾರಿಗುಡಿ-6 ಪೇಜಿನಲ್ಲಿ ಯಶ್ಪಾಲ್ ಸುವರ್ಣಗೆ ಮತ್ತೆ ಬೆದರಿಕೆ ಹಾಕಲಾಗಿದ್ದು, ಶ್ರದ್ಧಾಂಜಲಿ ಬ್ಯಾನರ್ ರೆಡಿ ಮಾಡಲು ಹೇಳಿದ್ದಾರೆ. ಇಂಥ ಬೆದರಿಕೆಗಳಿಗೆ ನಾನು ಹೆದರುವುದಿಲ್ಲ. ಬೆದರಿಕೆ ಹಾಕುವವರ ಬಗ್ಗೆ ಪೊಲೀಸರು ಸೂಕ್ತ ತನಿಖೆ ನಡೆಸಬೇಕು. ಸರಿಯಾದ ದಾರಿಯಲ್ಲಿ ಬದುಕಲು ಕಲಿಯಿರಿ. ಅಡ್ಡದಾರಿ ಹಿಡಿದರೆ ಇಲಾಖೆ ಮತ್ತು ನಮ್ಮ ಕಾರ್ಯಕರ್ತರು ಪಾಠ ಕಲಿಸುತ್ತಾರೆ ಎಂದರು. ಯಾರೋ ಸ್ಥಳೀಯರು ಹೊರದೇಶದವರಿಂದ ಬೆದರಿಕೆ ಹಾಕಿಸುತ್ತಿದ್ದಾರೆ. ಮೂರೂರು, ಉಚ್ಚಿಲ ಭಾಗದವರು ಎಂಬ ಮಾಹಿತಿ ಇದೆ. ಸ್ಥಳೀಯ ಭಾಷೆಯನ್ನು ಕಾಮೆಂಟ್ನಲ್ಲಿ ಬಳಸುತ್ತಿದ್ದಾರೆ ಎಂದು ಹೇಳಿದ್ದಾರೆ.




























