ಪುತ್ತೂರು: ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಹಾಗೂ ಯೋಗ ಕೇಂದ್ರ ಪುತ್ತೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ಜೂ.21ರಂದು ವಿಶ್ವ ಯೋಗ ದಿನಾಚರಣೆ ಹಾಗೂ ಸರಳ ಯೋಗಾಭ್ಯಾಸವು ಪರಾಶರ ವಕೀಲ ಸಭಾ ಭವನದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ದೀಪ ಬೆಳಗಿಸಿ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಆರ್.ಓಂಕಾರಪ್ಪ ಉದ್ಘಾಟಿಸಿದರು.
ಮನುಷ್ಯ ಸದಾ ಚಟುವಟಿಕೆಯಲ್ಲಿರಬೇಕಾದರೆ ಆರೋಗ್ಯ ಮುಖ್ಯ. ನಿರಂತರವಾಗಿ ಯೋಗ ಮಾಡುವುದರಿಂದ ಮನುಷ್ಯ ಆರೋಗ್ಯ ಹಾಗೂ ಆಯುಷ್ಯ ವೃದ್ಧಿಯಾಗುತ್ತದೆ. ಸೊನ್ನೆಯ ಬೆಲೆಯನ್ನು ಜಗತ್ತಿಗೆ ಪರಿಚಯಿಸಿದಂತೆ ಯೋಗದ ಮಹತ್ವವನ್ನು ವಿಶ್ವಕ್ಕೆ ಪರಿಚಯಿಸಿರುವ ಭಾರತೀಯರಾದ ನಾವೆಲ್ಲಾ ಯೋಗದಲ್ಲಿ ತೊಡಗಿಸಿಕೊಂಡು ಆರೋಗ್ಯವನ್ನು ವೃದ್ಧಿಸಿಕೊಳ್ಳಬೇಕು ಎಂದರು.

ಗೌರವ ಉಪಸ್ಥಿತಿಯಿದ್ದ ಪ್ರಧಾನ ಹಿರಿಯ ವ್ಯವಹಾರಿಕ ನ್ಯಾಯಾಧೀಶ, ಹೆಚ್ಚುವರಿ ಮುಖ್ಯ ನ್ಯಾಯಿಕ ದಂಡಾಧಿಕಾರಿಯಾಗಿರುವ ಗೌಡ ಆರ್.ಪಿ ಮಾತನಾಡಿ, ಮಾನವನ ಮಾನಸಿಕ ಹಾಗೂ ದೈಹಿಕ ಸ್ಥಿತಿಯನ್ನು ಉತ್ತಮವಾಗಿಡುವಲ್ಲಿ ಯೋಗವು ಪ್ರಮುಖ ಪಾತ್ರವಹಿಸುತ್ತದೆ. ಹೀಗಾಗಿ ನಾವೆಲ್ಲಾ ನಿರಂತರವಾಗಿ ಯೋಗದಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಸಂಪನ್ಮೂಲ ವ್ಯಕ್ತಿಯಾಗಿದ್ದ ವಕೀಲರು, ಪುತ್ತೂರು ಯೋಗ ಕೇಂದ್ರದ ಅಧ್ಯಕ್ಷ ಗಿರೀಶ್ ಮಳಿ ಮಾತನಾಡಿ, ನಾವು ಲವಲವಿಕೆ, ಚಟುವಟಿಕೆಯಿಂದಿರಲು, ದೈಹಿಕ ಸಾಮರ್ಥ್ಯ ಹೆಚ್ಚಲು ಯೋಗವು ಸಹಕಾರಿ. ಇತರ ದಿನಗಳಿಗಿಂತ ಹೆಚ್ಚು ಜೂ.21ರಂದು ಸಮಯ ಹಗಲು ಇದ್ದು ಮನುಷ್ಯ ಹೆಚ್ಚ ಚಟುವಟಿಕೆಗಳಿಂದರಲು ಸಾಧ್ಯ. ಹಾಗಾಗಿ ಆ ದಿನವನ್ನು ಯೋಗ ದಿನವನ್ನಾಗಿ ಆಚರಿಸಲಾಗುತ್ತಿದೆ.

ಅಧ್ಯಕ್ಷತೆ ವಹಿಸಿದ್ದ ವಕೀಲರ ಸಂಘದ ಅಧ್ಯಕ್ಷ ಮನೋಹರ್ ಕೆ.ವಿ ಪ್ರಾಸ್ತಾವಿಕವಾಗಿ ಮಾತನಾಡಿ, ಯೋಗವು ಜನ್ಮದತ್ತವಾದ ಪ್ರಾಚೀನ ಕಲೆ. ಪ್ರಾಕೃತಿಕ ಸಮತೋಲನವನ್ನು ಕಾಪಾಡಿಕೊಳ್ಳಲು ಯೋಗವನ್ನು ಆಚರಿಸಲಾಗುತ್ತಿದೆ. ಮನುಷ್ಯನನ್ನು ಆತ್ಮದಿಂದ ಪರಮಾತ್ಮನ ಕಡೆಗೆ ಕೊಂಡೋಯ್ಯುವ ವಿಶಿಷ್ಟ ಕಲೆಯಾಗಿದೆ ಎಂದರು.
ವಕೀಲರ ಸಂಘದ ಉಪಾಧ್ಯಕ್ಷ ಕೃಷ್ಣಪ್ಪ ಗೌಡ ಕಕ್ವೆ, ಜತೆ ಕಾರ್ಯದರ್ಶಿ ಸೀಮಾ ನಾಗರಾಜ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಕೀಲರ ಸಂಘದ ಅಧ್ಯಕ್ಷ ಮನೋಹರ್ ಕೆ.ವಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಚಿನ್ಮಯ್ ರೈ ಯನ್ ವಂದಿಸಿದರು. ಖಜಾಂಚಿ ಶ್ಯಾಮ್ಪ್ರಸಾದ್ ಕೈಲಾರ್ ಕಾರ್ಯಕ್ರಮ ನಿರೂಪಿಸಿದರು.

ಸಭಾ ಕಾರ್ಯಕ್ರಮದ ಬಳಿಕ ಸರಳ ಯೋಗಾಭ್ಯಾಸ ನಡೆಯಿತು. ಗಿರೀಶ್ ಮಳಿ ಸರಳ ಯೋಗಾಭ್ಯಾಸದ ಪ್ರಾತ್ಯಕ್ಷಕಿ ನಡೆಸಿಕೊಟ್ಟರು. ನ್ಯಾಯಾದೀಶರಾದ ಆರ್ ಓಂಕಾರಪ್ಪ, ಗೌಡ ಆರ್.ಪಿ., ನ್ಯಾಯಾಲಯದ ಸಿಬಂದಿಗಳು ಹಾಗೂ ನ್ಯಾಯವಾದಿಗಳು ಯೋಗಾಭ್ಯಾಸದ್ದಲ್ಲಿ ಭಾಗವಹಿಸಿದ್ದರು.


























