ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿಯವರು ತುಂಬಾ ಮೃದು ಸ್ವಭಾವ ಹಾಗೂ ಎಲ್ಲರ ಜೊತೆ ಬಹಳ ಆತ್ಮೀಯತೆಯಿಂದ ಕೂಡಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಜಾರ್ಖಂಡ್ನ ಅತಿದೊಡ್ಡ ತೆರಿಗೆದಾರ ಮಹೇಂದ್ರ ಸಿಂಗ್ ಧೋನಿ ವಿಶ್ವದ ಯಾವುದೇ ಪ್ರಮುಖ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದು. ಆದರೆ ಇದೀಗ ಅವರು ಸ್ಥಳೀಯ ವೈದ್ಯರಿಂದ ತಮ್ಮ ಅನಾರೋಗ್ಯಕ್ಕೆ ಚಿಕಿತ್ಸೆ ಪಡೆಯುವ ಮೂಲಕ ಸುದ್ದಿಯಾಗಿದ್ದಾರೆ.
ಹೌದು. ಧೋನಿ ಅವರು ಕೆಲ ಸಮಯದಿಂದ ಎರಡೂ ಕಾಲುಗಳ ಮಂಡಿನೋವಿನಿಂದ ಬಳಲುತ್ತಿದ್ದಾರೆ. ಇದೀಗ ಅವರು ರಾಂಚಿಯ ಸ್ಥಳೀಯ ಹಳ್ಳಿ ವೈದ್ಯರ ಬಳಿ ಕಾಡಿನಲ್ಲಿ ಸಿಗುವ ಗಿಡಮೂಲಿಕೆಗಳಿಂದ ತಯಾರಿಸಿದ ಔಷಧ ಸೇವಿಸುತ್ತಿದ್ದಾರೆ. ಧೋನಿ ಲ್ಯಾಂಪಂಗ್ನ ಸ್ಥಳೀಯ ವೈದ್ಯ ವಂದನ್ ಸಿಂಗ್ ಖೇರ್ವಾರ್ ಅವರಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಾಹಿ ದೇಹದಲ್ಲಿ ಕ್ಯಾಲ್ಸಿಯಂ ಕೊರತೆಯಿದೆ ಎಂದು ವೈದ್ಯರು ಹೇಳಿದ್ದಾರೆ.
ಸ್ವತಃ ಎಂಎಸ್ ಧೋನಿ ಅವರೇ ಔಷಧಿ ತೆಗೆದುಕೊಂಡು ಬರಲು ರಾಂಚಿಯಿಂದ 70 ಕಿಲೋಮೀಟರ್ ಕಾರಿನಲ್ಲಿ ಕ್ರಮಿಸುತ್ತಾರೆ. ಅಲ್ಲದೆ ಅಲ್ಲಿ ಸಾಮಾನ್ಯನಂತೆ ಧೋನಿ ಮರದ ಕೆಳಗೆ ಕುಳಿತು ಔಷಧ ಸೇವಿಸುತ್ತಾರೆ. ಧೋನಿ ಇತ್ತೀಚೆಗೆ ಜೂನ್ 26 ರಂದು ಬಾಬಾ ಅವರ ಡೋಸ್ ಪಡೆಯಲು ಭೇಟಿ ನೀಡಿದ್ದರು. ಈ ವೇಳೆ ಎಂಎಸ್ ಧೋನಿ ಬಂದಿದ್ದಾರೆ ಎಂದು ತಿಳಿದ ತಕ್ಷಣ ಜನ ಅಲ್ಲಿ ನೆರೆದಿದ್ದರು.

ಇದಾದ ನಂತರ ಎಂಎಸ್ ಧೋನಿ ತಮ್ಮ ಅಭಿಮಾನಿಗಳೊಂದಿಗೆ ಹಲವು ಫೋಟೋಗಳನ್ನು ಕ್ಲಿಕ್ಕಿಸಿಕೊಂಡರು. ಮೊಣಕಾಲು ನೋವಿನ ಚಿಕಿತ್ಸೆಗಾಗಿ ಧೋನಿ ಅವರ ಪೋಷಕರು ಸಹ ಅವರ ಬಳಿಗೆ ಹೋಗಿದ್ದರು. ಮತ್ತು ಬಾಬಾ ಅವರು ನೀಡುವ ಔಷಧಿ ಅವರ ಕಾಯಿಲೆಯನ್ನು ಗುಣಪಡಿಸಿದೆ ಎಂದು ವೈದ್ಯರು ಹೇಳಿದರು. ಪೋಷಕರ ಯಶಸ್ವಿ ಚಿಕಿತ್ಸೆ ಬಳಿಕ ಧೋನಿ ಕೂಡ ಆ ವೈದ್ಯರ ಬಳಿಯಿಂದಲೇ ಔಷಧಿ ತೆಗೆದುಕೊಳ್ಳಲು ಆರಂಭಿಸಿದ್ದಾರೆ
ಎಂಎಸ್ ಧೋನಿ ಮೊದಲ ಬಾರಿಗೆ ಚಿಕಿತ್ಸೆಗಾಗಿ ತನ್ನ ಬಳಿಗೆ ಬಂದಾಗ ಅವರನ್ನು ಗುರುತಿಸಲು ಸಾಧ್ಯವಾಗಲಿಲ್ಲ. ಸಾಮಾನ್ಯ ವ್ಯಕ್ತಿಯಂತೆ ಧೋನಿ ಅವರ ಬಳಿ ಬಂದು ತಮ್ಮ ಸಮಸ್ಯೆ ಹೇಳಿಕೊಂಡರು. ಔಷಧಿಗೆ 40 ರೂಪಾಯಿ ತೆಗೆದುಕೊಂಡೆ. ಅವರ ಕಾರನ್ನು ನೋಡಿ ಇಲ್ಲಿನ ಹುಡುಗರು ಅವರು ಧೋನಿ ಎಂದು ಹೇಳಿದ್ದರಿಂದ ನನಗೆ ಗೊತ್ತಾಯಿತು ಎಂದು ವೈದ್ಯರು ಹೇಳಿದರು.




























