ವಿಟ್ಲ: ವಿಠ್ಠಲ್ ಜೇಸಿಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ 2022- 23ನೇ ಸಾಲಿನ ಶೈಕ್ಷಣಿಕ ವರ್ಷದ ಸಾಹಿತ್ಯ ಸಂಘವನ್ನು ಸಂಸ್ಥೆಯ ಆಡಳಿತಾಧಿಕಾರಿಯಾದ ರಾಧಾಕೃಷ್ಣ ಎ ರವರು ದೀಪ ಬೆಳಗಿಸಿ ಉದ್ಘಾಟಿಸಿದರು.

“ಭಾಷೆ ಯಾವುದಾದರೂ ಸರಿ, ಸಾಹಿತ್ಯ ರಚನೆಯಲ್ಲಿ ಮಕ್ಕಳು ತಮ್ಮನ್ನು ತಾವೇ ತೊಡಗಿಸಿಕೊಳ್ಳಬೇಕು. ಮಕ್ಕಳ ಪ್ರತಿಭೆ ಅನಾವರಣಕ್ಕೆ ಸಾಹಿತ್ಯ ಸಂಘ ಸರಿಯಾದ ವೇದಿಕೆ, ವಿದ್ಯಾರ್ಥಿಗಳ ಪ್ರತಿಭೆ ಹೊರಹೊಮ್ಮಲಿ” ಎಂದು ಹಾರೈಸಿದರು.

ಆಡಳಿತ ಮಂಡಳಿಯ ಅಧ್ಯಕ್ಷರಾದ ಎಲ್ ಎನ್ ಕೂಡೂರು ರವರು ಸಾಹಿತ್ಯ ಸಂಘದ ಆರಂಭಕ್ಕೆ ಶುಭ ಹಾರೈಸಿದರು.
ಆಡಳಿತ ಮಂಡಳಿಯ ನಿರ್ದೇಶಕರಾದ ಹಸನ್ ವಿಟ್ಲ ಮಾತನಾಡುತ್ತಾ, “ಮಕ್ಕಳು ತಮಗೆ ಅನಿಸಿದ್ದೆಲ್ಲಾ ಬರೆಯುತ್ತಾ ಹೋಗಬೇಕು ಮುಂದೆ ಅದುವೇ ಸಾಹಿತ್ಯವಾಗಬಲ್ಲದು” ಎಂದು ಸಲಹೆ ನೀಡಿ ‘ಹೊಸ ಹೊಸ ಪ್ರತಿಭೆ ಈ ಸಂಘದಿಂದ ಹೊರಬರಲಿ’ ಎಂದು ಹಾರೈಸಿದರು.

ಮಕ್ಕಳ ಸಾಹಿತ್ಯ ಸಂಘದ ಅಧ್ಯಕ್ಷೆ ಅಕ್ಷತಾ ಅನಿಸಿಕೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಸಾಹಿತ್ಯ ಸಂಘದ ಉಪಾಧ್ಯಕ್ಷೆ ವಿದ್ಯಾಶ್ರೀ ಪೈ, ಕಾರ್ಯದರ್ಶಿ ಅನನ್ಯ.ವಿ, ಶಿಕ್ಷಕ ವೃಂದ, ಸಾಹಿತ್ಯ ಸಂಘದ ಸದಸ್ಯರು, ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.


























