ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರು ಇಬ್ಬರು ಅಂತರ್ ರಾಜ್ಯ ಸರ ಕಳ್ಳರನ್ನು ಬಂಧಿಸಿದ್ದಾರೆ.
ಬಂಬ್ರಾಣ, ಕುಂಬ್ಳೆ ಕಾಸರಗೋಡು ನಿವಾಸಿ ಫೈಜಲ್(37), ರಾಜೀವ ಗಾಂಧಿ ಕಾಲೊನಿ, ಸೀತಾಂಗೋಳಿ ನಿವಾಸಿ ಅಬ್ದುಲ್ ನಿಝಾರ್ (19) ಬಂಧಿತ ಆರೋಪಿಗಳು.

ಪುತ್ತೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ನಿಡ್ಪಳ್ಳಿ ಗ್ರಾಮದ ಚೂರಿಪದವು ನಿವಾಸಿ ಮಹಿಳೆಯೋರ್ವರು ರೆಂಜಕ್ಕೆ ಬಂದು ವಾಪಾಸು ತನ್ನ ಮನೆಗೆ ಹೋಗುವ ವೇಳೆ ಬೆಟ್ಟಂಪಾಡಿ ಗ್ರಾಮದ ಕೋನಡ್ಕ ಎಂಬಲ್ಲಿಗೆ ತಲುಪಿದಾಗ ಇಬ್ಬರು ವ್ಯಕ್ತಿಗಳು ಬೈಕ್ ನಲ್ಲಿ ಬಂದು ಮಹಿಳೆಯ ಕುತ್ತಿಗೆಯಲ್ಲಿದ್ದ ಚಿನ್ನದ ಕರಿಮಣಿ ಸರವನ್ನು ಎಳೆದು ಬೈಕ್ ನಲ್ಲಿ ಪರಾರಿಯಾಗಿದ್ದು, ಈ ಬಗ್ಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಯ ಬಗ್ಗೆ ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕರಾದ ಉಮೇಶ್ ಉಪ್ಪಳಿಗೆ ಮತ್ತು ಪುತ್ತೂರು ಗ್ರಾಮಾಂತರ ಠಾಣಾ ಪಿಎಸ್ ಐ ಉದಯರವಿ.ಎಂ.ವೈ ರವರ ನೇತೃತ್ವದ ವಿಶೇಷ ತಂಡವು ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆರೋಪಿಗಳಿಂದ ಸುಲಿಗೆ ಮಾಡಿದ ರೂ 50,000/-ಮೌಲ್ಯದ ತುಂಡಾದ ಚಿನ್ನದ ಕರಿಮಣಿ ಸರ ಹಾಗೂ ಬದಿಯಡ್ಕ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ ಎಫ್ ಝಡ್ ಬೈಕ್ ಮತ್ತು ಪ್ರಕರಣಕ್ಕೆ ಉಪಯೋಗಿಸಿದ ಕೆಂಪು ಬಣ್ಣದ ರಾಯಲ್ ಎನ್ ಫೀಲ್ಡ್ ಬೈಕ್ ನ್ನು ವಶಕ್ಕೆ ಪಡೆಯಲಾಗಿದೆ.
ಆರೋಪಿತರನ್ನು ಹೆಚ್ಚಿನ ವಿಚಾರಣೆ ಮಾಡಿದಾಗ ಈ ಹಿಂದೆ 2019ರಲ್ಲಿ ವಿಟ್ಲ ಠಾಣಾ ವ್ಯಾಪ್ತಿಯ ಕುದ್ದುಪದವು ಜಗನ್ನಾಥ ಶೆಟ್ಟಿ ರವರ ಮಾಲಕತ್ವದ ಪೆಟ್ರೋಲ್ ಪಂಪ್ ಕಳ್ಳತನ ಪ್ರಕರಣ ಹಾಗೂ ವಿಟ್ಲ ಠಾಣಾ ವ್ಯಾಪ್ತಿಯ ಕಾಶಿಮಠ ಎಂಬಲ್ಲಿ ಗೂಡ್ಸ್ ಟೆಂಪೋ ಕಳ್ಳತನ ಪ್ರಕರಣ ಮತ್ತು ಪುತ್ತೂರು ನಗರ ಠಾಣಾ ವ್ಯಾಪ್ತಿಯ ಬೈಪಾಸ್ ರಸ್ತೆಯಲ್ಲಿ ಮಹಿಳೆಯ ಸರ ಕಳ್ಳತನ ನಡೆಸಿರುವುದಾಗಿ ಒಪ್ಪಿಕೊಂಡಿದ್ದಾರೆ.
ಫೈಜಲ್ ಎಂಬಾತನ ವಿರುದ್ಧ ಮಂಗಳೂರು ನಗರದ ಉಳ್ಳಾಲ, ಮಂಜೇಶ್ವರ, ಕುಂಬ್ಳೆ, ಬದಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಲವು ಕಳ್ಳತನ ಪ್ರಕರಣವು ದಾಖಲಾಗಿರುತ್ತದೆ.

ಕಾರ್ಯಾಚರಣೆಯಲ್ಲಿ ಪೊಲೀಸ್ಅಧೀಕ್ಷಕರಾದ ಋಷಿಕೇಶ್ ಸೋನಾವಣೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕುಮಾರ್ ಚಂದ್ರ ರವರ ಮಾರ್ಗದರ್ಶನದಲ್ಲಿ, ಪೊಲೀಸ್ ಉಪಾಧೀಕ್ಷಕರಾದ ಡಾ.ಗಾನಾ.ಪಿ.ಕುಮಾರ್ ಪುತ್ತೂರು ಉಪವಿಭಾಗ ರವರ ನೇತೃತ್ವದಲ್ಲಿ, ಉಮೇಶ್ ಯು. ಪೊಲೀಸ್ ವೃತ್ತ ನಿರೀಕ್ಷಕರು ಪುತ್ತೂರು ಗ್ರಾಮಾಂತರ ವೃತ್ತ, ಉದಯರವಿ.ಎಂ.ವೈ ಹಾಗೂ ರಾಮಕೃಷ್ಣ.ಜಿ.ಸಿ ಪೊಲೀಸ್ ಉಪನಿರೀಕ್ಷಕರು ಪುತ್ತೂರು ಗ್ರಾಮಾಂತರ ಠಾಣೆ ರವರ ವಿಶೇಷ ತಂಡದ ಸಿಬ್ಬಂದಿಗಳಾದ ದೇವರಾಜ್, ಧರ್ಣಪ್ಪ ಗೌಡ, ಅದ್ರಾಮ್, ಸತೀಶ್, ಪ್ರವೀಣ್.ರೈ, ವರ್ಗೀಸ್, ಜಗದೀಶ್, ಹರ್ಷಿತ್, ಚಾಲಕ ಸದ್ಧಾಂ ಮುಲ್ಲಾ ರವರು ಹಾಗೂ ಜಿಲ್ಲಾ ಗಣಕಯಂತ್ರದ ಸಿಬ್ಬಂದಿಗಳಾದ ಸಂಪತ್, ದಿವಾಕರ್ ರವರು ಭಾಗವಹಿಸಿದ್ದರು.


























