ಉಡುಪಿ: ಖಾಸಗಿ ವಾಹಿನಿ ಯಿಂದ ಯಕ್ಷಗಾನಕ್ಕೆ ಅವಮಾನ ಉಂಟಾಗಿದ್ದು, ಕರಾವಳಿಯಾದ್ಯಂತ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಆರಂಭವಾಗಿದೆ.
ಸಾಂಪ್ರದಾಯಿಕ ಆರಾಧನಾ ಕಲೆಯ ಬಗ್ಗೆ ಖಾಸಗಿ ವಾಹಿನಿಯಿಂದ ಯಕ್ಷಗಾನವನ್ನುಅಶ್ಲೀಲವಾಗಿ ಬಿಂಬಿಸಿದ ಆರೋಪವಿದೆ. ಕರಾವಳಿ ಭಾಗದಲ್ಲಿ ದೇವರ ಆರಾಧನೆಯ ಭಾಗವಾಗಿ ಯಕ್ಷಗಾನ ನಡೆಯುತ್ತಿದೆ. ಆದರೆ ವಾಹಿನಿಯಲ್ಲಿ ಪ್ರಸಾರವಾದ ನೃತ್ಯದಲ್ಲಿ ಯಕ್ಷಗಾನದ ವೇಷ ಧರಿಸಿ ಅಶ್ಲೀಲವಾಗಿ ನೃತ್ಯ ಮಾಡಿದ್ದಾರೆ ಎಂಬ ಆರೋಪವಿದೆ.

ಖಾಸಗಿ ವಾಹಿನಿಯಿಂದ ಸತತ ಮೂರನೇ ಬಾರಿ ಯಕ್ಷಗಾನಕ್ಕೆ ಅವಮಾನ..!!??
ಕರಾವಳಿಯ ಯಕ್ಷಗಾನ ಅಭಿಮಾನಿಗಳಿಂದ ಅಭಿಯಾನ ಆರಂಭವಾಗಿದ್ದು, ಯಾವುದೇ ಖಾಸಗಿ ವಾಹಿನಿಯಲ್ಲೂ ಯಕ್ಷಗಾನಕ್ಕೆ ಅವಮಾನವಾಗಬಾರದು, ಈ ಬಗ್ಗೆ ಪರೀಕ್ಷಿಸಲು ಸಮಿತಿ ರಚನೆ ಮಾಡಬೇಕು ಎಂದು ಕನ್ನಡ ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಗೆ ಯಕ್ಷಗಾನ ಅಭಿಮಾನಿಗಳಿಂದ ದೂರು ನೀಡಿದ್ದಾರೆ. ಈ ಬಗ್ಗೆ ಪರಿಶೀಲಿಸುವುದಾಗಿ ಸಚಿವರು ಭರವಸೆ ನೀಡಿದ್ದಾರೆ.
ಕರಾವಳಿ ಭಾಗದಲ್ಲಿ ಹರಕೆ ಹೊತ್ತು ಯಕ್ಷಗಾನ ನಡೆಸುತ್ತಾರೆ, ದೇವಾಲಯಗಳು ಯಕ್ಷಗಾನ ಮೇಳ ನಡೆಸುತ್ತವೆ. ಇಲ್ಲಿ ಯಕ್ಷಗಾನ ವೇಷಧಾರಿಗಳಿಗೆ ಸಿನಿಮಾ ನಟರಂತೆ ಅಭಿಮಾನಿಗಳಿದ್ದಾರೆ. ಯಕ್ಷಗಾನ ಕರಾವಳಿಯ ಸಾಂಪ್ರದಾಯಿಕ ಕಲೆಯಾಗಿದ್ದು, ಇನ್ನು ಮುಂದೆ ಯಕ್ಷಗಾನಕ್ಕೆ ಅವಮಾನವಾದರೆ ಸಹಿಸಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಕೋಪ ಹೊರ ಹಾಕುತ್ತಿದ್ದಾರೆ.
ನೋವುಂಟು ಮಾಡಿದವರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ. ಅದೇ ಕಾರ್ಯಕ್ರಮದಲ್ಲಿ ವಾಹಿನಿಯ ಮುಖ್ಯಸ್ಥರು ಮತ್ತು ನೃತ್ಯ ಸಂಯೋಜಕರು ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ. ಈ ಬಗ್ಗೆ ಯಕ್ಷಗಾನ ಪ್ರೇಮಿಗಳಿಂದ ಕೋಟ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಕ್ಷಮೆಯಾಚಿಸಿದ ಜೀ ಕನ್ನಡ..!!
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಅನೇಕ ಪ್ರತಿಭೆಗಳಿಗೆ ವೇದಿಕೆ ಆಗಿದೆ. ಆದರೆ, ಕಳೆದ ವಾರದ ಎಪಿಸೋಡ್ನಲ್ಲಿ ಯಕ್ಷಗಾನಕ್ಕೆ ಅವಮಾನ ಮಾಡಲಾಗಿದೆ ಎನ್ನುವ ಆರೋಪ ಕೇಳಿ ಬಂತು. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಆಂದೋಲನಗಳೂ ಆದವು. ಕ್ಷಮೆಯಾಚಿಸಲು ಯಕ್ಷಗಾನ ಪ್ರಿಯರು ಪಟ್ಟು ಹಿಡಿದರು. ಇದಕ್ಕೆ ಜೀ ಕನ್ನಡ ವಾಹಿನಿ ಮಣಿದಿದೆ. ಕ್ಷಮೆ ಕೇಳಿ ಪೋಸ್ಟ್ ಹಾಕಿದೆ.
‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ 6’ ವೇದಿಕೆ ಮೇಲೆ ಕಳೆದ ವಾರ ಯಕ್ಷಗಾನ ಮಾಡಲಾಗಿತ್ತು. ಈ ವೇಳೆ ಯಕ್ಷಗಾನಕ್ಕೆ ಅವಮಾನ ಆಗಿದೆ ಎನ್ನುವ ಆರೋಪಗಳು ಕೇಳಿ ಬಂದವು. ಈಗ ಇದಕ್ಕೆ ಜೀ ಕನ್ನಡ ವಾಹಿನಿ ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆ ಕೇಳಿದೆ.
‘ಜೀ ಕನ್ನಡ ವಾಹಿನಿಯು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವೇದಿಕೆಯ ಮೂಲಕ ಅನೇಕ ಕಲಾ ಪ್ರಕಾರಗಳನ್ನು ಗೌರವಿಸುತ್ತ, ನಾಡಿನ ಜನತೆಗೆ ಪರಿಚಯಿಸುತ್ತಲೇ ಬಂದಿದೆ. ನಮ್ಮ ವೇದಿಕೆಯಲ್ಲಿ ಯಕ್ಷಗಾನಕ್ಕೂ ಸಹ ಪ್ರಾಮುಖ್ಯತೆ ನೀಡಿದ್ದು, ನೃತ್ಯಾಭಿಮಾನಿಗಳ ಪ್ರಶಂಸೆ ಪಡೆದಿದ್ದೇವೆ’ ಎಂದು ಪೋಸ್ಟ್ ಆರಂಭಿಸಲಾಗಿದೆ.
‘ಕಳೆದ ವಾರ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮದಲ್ಲಿ ಪ್ರಸಾರವಾದ ಯಕ್ಷಗಾನ ಕೆಲವರ ಭಾವನೆಗೆ ಧಕ್ಕೆಯಾಗಿದ್ದು ನಮ್ಮ ಗಮನಕ್ಕೆ ಬಂದಿದೆ. ಇದು ಉದ್ದೇಶಪೂರ್ವಕವಾಗಿ ಆಗಿದ್ದಲ್ಲವೆಂದು ವಾಹಿನಿ ಸ್ಪಷ್ಟಿಕರಿಸಲು ಬಯಸುತ್ತದೆ ಮತ್ತು ಈ ಮೂಲಕ ಕ್ಷಮೆಯಾಚಿಸುತ್ತೇವೆ. ನಮ್ಮ ಅತ್ಯುತ್ತಮ ಕೆಲಸಗಳಿಗೆ ನೀವು ಕೊಟ್ಟ ಗೌರವ ಹಾಗೂ ನಾವು ಎಡವಿದಾಗ ನೀವು ಕೊಡುವ ಸಲಹೆಯನ್ನು ನಾವು ಸ್ವೀಕರಿಸುತ್ತೇವೆ. ಇಲ್ಲಿವರೆಗೂ ನೀವು ಕೊಟ್ಟ ಪ್ರೋತ್ಸಾಹ, ಬೆಂಬಲ ಹಾಗೆಯೇ ಮುಂದುವರಿಯಲಿ ಎಂದು ಜೀ ಕನ್ನಡ ವಾಹಿನಿ ಆಶಿಸುತ್ತದೆ’ ಎಂದು ಪೋಸ್ಟ್ ಪೂರ್ಣಗೊಳಿಸಲಾಗಿದೆ.
ಈ ಕ್ಷಮೆಯಿಂದ ಯಕ್ಷಗಾನ ಪ್ರಿಯರ ಕೋಪ ಕಡಿಮೆ ಆಗಿಲ್ಲ. ‘ಅವಮಾನ ಮಾಡಿದ ಎಲ್ಲರೂ ಕ್ಷಮೆ ಕೇಳಬೇಕು. ಅದನ್ನು ಯಾವ ಕಾರಣಕ್ಕೂ ಮರು ಪ್ರಸಾರ ಮಾಡಬಾರದು. ಅದರ ವಿಡಿಯೋ ಜೀ 5 ಆ್ಯಪ್ನಿಂದ ಅಳಿಸಬೇಕು. ಇನ್ನಿತರ ಜೀ ಸೋಶಿಯಲ್ ಮೀಡಿಯಾ ಪೇಜ್ಗಳಿಂದ ಡಿಲಿಟ್ ಮಾಡಬೇಕು’ ಎಂದು ಕೆಲವರು ಆಗ್ರಹಿಸಿದ್ದಾರೆ. ಇನ್ನೂ ಕೆಲವರು ‘ಅವಮಾನ ಆಗಿದ್ದು ಡಿಕೆಡಿ ವೇದಿಕೆಯಲ್ಲಿ. ಅದೇ ವೇದಿಕೆಯಲ್ಲಿ ಕ್ಷಮೆ ಕೇಳಿ’ ಎಂದು ಆಗ್ರಹಿಸಿದ್ದಾರೆ.




























