ಪುತ್ತೂರು: ಬೆಳ್ಳಾರೆಯ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರ್ ಹತ್ಯೆಯ ನಂತರ ಪಾರ್ಥಿವ ಶರೀರದ ಮೆರವಣಿಗೆ ಸಂದರ್ಭದಲ್ಲಿ ಲೋಕಸಭಾ ಸದಸ್ಯ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್, ಸುಳ್ಯ ಶಾಸಕ ಹಾಗೂ ಸಚಿವ ಎಸ್ ಅಂಗಾರ ರವರ ವಿರುದ್ಧ ತೀವ್ರ ಆಕ್ರೋಶಗೊಂಡ ಬಿಜೆಪಿ ಹಾಗೂ ಸಂಘ ಪರಿವಾರದ ಕಾರ್ಯಕರ್ತರು ಅವರ ವಿರುದ್ಧ ದಿಕ್ಕಾರ ಕೂಗಿ, ಕಾರಿನ ಮೇಲೆ ದಾಳಿ ನಡೆಸಿ, ಹೊಯ್ಡಾಟ ಬೈದಾಟ ನಡೆಸಿದ ಸಂದರ್ಭದಲ್ಲಿ ಕಾರ್ಯಕರ್ತರಿಂದ ತಮ್ಮನ್ನು ರಕ್ಷಿಸುವ ಸಲುವಾಗಿ ಪೊಲೀಸ್ ಲಾಠಿ ಚಾರ್ಜ್ ನಡೆಸಿ, ಲಾಠಿ ಚಾರ್ಜ್ ನಡೆಸಿದ ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡುವಂತಹ ಬಿಜೆಪಿಯವರ ನೀಚ ರಾಜಕೀಯವನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸುತ್ತದೆ ಎಂದು ನಗರ ಕಾಂಗ್ರೆಸ್ ಅಧ್ಯಕ್ಷ ಎಚ್ ಮಹಮ್ಮದ್ ಅಲಿ ಹೇಳಿದರು.
ಅವರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ, ಬಿಜೆಪಿಯವರ ಈ ನಡೆ ಇಡೀ ಪೊಲೀಸ್ ಇಲಾಖೆಯ ಆತ್ಮ ಸ್ಟೈರ್ಯವನ್ನು ಕುಂದಿಸುವ ಕೆಲಸವಾಗಿರುತ್ತದೆ ಎಂದು ಹೇಳಿದ ಅಲಿಯವರು ನಾಯಕರ ವಿರುದ್ಧ ತಮ್ಮದೇ ಪಕ್ಷದ ಕಾರ್ಯಕರ್ತರು ಈ ಪರಿ ಆಕ್ರೋಶಗೊಂಡಿದ್ದು ಇತಿಹಾಸದಲ್ಲೇ ಇದೇ ಮೊದಲು ಎಂದರು.
ಕಾರ್ಯಕರ್ತರ ಮನಸಿನಲ್ಲಿ ಕೋಮು ವಿಷ ಬೀಜ ಬಿತ್ತಿ, ಇದರಲ್ಲಿ ಸ್ವಾರ್ಥ ರಾಜಕೀಯ ಮಾಡುತ್ತಿರುವ ಬಿಜೆಪಿ ನಾಯಕರ ವಿರುದ್ಧ ಇಡೀ ಕಾರ್ಯಕರ್ತರ ಬಳಗವೇ ತಿರುಗಿ ಬಿದ್ದಿದೆ. ಮೊನ್ನೆ ನಡೆದ ಆಕ್ರೋಶ ಕೇವಲ ಹತ್ಯೆಗೆ ಮಾತ್ರ ಸಂಬಂಧ ಪಟ್ಟದ್ದಲ್ಲ, ಹಲವಾರು ಸಮಯಗಳಿಂದ ಮಡುಗಟ್ಟಿದ್ದ ಅಸಹನೆ, ನೋವು ಸಂಕಟಗಳೆನ್ನೆಲ್ಲ ಆಕ್ರೋಶದಿಂದ ಮೊನ್ನೆ ಒಮ್ಮೆಲೇ ಕಾರ್ಯಕರ್ತ ರು ಹೊರ ಹಾಕಿದ್ದಾರೆ, ಎಂದರು ಬಿಜೆಪಿ ಕಾರ್ಯಕರ್ತರ ಬೇಡಿಕೆಯಂತೆ ಪ್ರವೀಣ್ ರವರ ಮೃತದೇಹ ಇರುವ ಪುತ್ತೂರು ಆಸ್ಪತ್ರೆಗೆ ಮದ್ಯ ರಾತ್ರಿ ಹೊತ್ತಿನಲ್ಲಿ ಜಿಲ್ಲಾಧಿಕಾರಿಗಳು ಧಾವಿಸಿ ಬರುತ್ತಾರೆ, ಆದರೆ ತಮ್ಮ ಕಾರ್ಯಕರ್ತನ ಮೃತದೇಹ ನೋಡಲು ಯಾವ ಎಂಪಿಯಾಗಲಿ, ಸಚಿವ, ಎಂ ಎಲ್ ಎ ಗಳಾಗಲಿ ಬರುವುದಿಲ್ಲ, ಜಿಲ್ಲಾಧಿಕಾರಿಗಳಿಗೆ ಇದ್ದಷ್ಟು ಮಾನವೀಯತೆ ಇವರಿಗಿಲ್ಲವೇ…?, ಎಷ್ಟೇ ತುರ್ತು ರಾಜಕೀಯ ಕೆಲಸಗಳಿರಲಿ ಬೆಂಗಳೂರಿನಿಂದ ರಾತ್ರಿ ಒಂದು ಗಂಟೆಗೆ ಹೊರಟರೂ ಬೆಳಿಗ್ಗೆ 6 ಗಂಟೆಗೆ ಪುತ್ತೂರುಗೆ ತಲುಪ ಬಹುದಿತ್ತು, ಆದರೆ ಪ್ರವೀಣ್ ರವರ ಹತ್ಯೆಯಾದ ವಿಚಾರ ತಿಳಿದಿದ್ದರೂ ರಾತ್ರಿಯೇ ಹೊರಡದೆ ಬೆಂಗಳೂರಿನಲ್ಲಿ ಗಮತ್ತು ಮಾಡುತ್ತಾ ಕಾಲ ಕಳೆದಿರುವ ನಾಯಕರ ವಿಚಾರ ತಿಳಿದ ಪ್ರವೀಣ್ ರ ಕುಟುಂಬಸ್ಥರು ಹಾಗೂ ಕಾರ್ಯ ಕರ್ತರು ಈ ಪರಿ ಆಕ್ರೋಶಗೊಳ್ಳಲು ಕಾರಣವಾಗಿರುತ್ತದೆ. ಇದೀಗ ಆಕ್ರೋಶಗೊಂಡ ಕಾರ್ಯಕರ್ತರನ್ನು ಸಮಾಧಾನ ಪಡಿಸುವ ಸಲುವಾಗಿ ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡುವುದರ ಮೂಲಕ ಬಲಿ ಪಶು ಮಾಡಲಾಗಿರುತ್ತದೆ ಎಂದು ಆರೋಪಿಸಿದರು.
ಸ್ಥಳೀಯವಾಗಿ ಎಲ್ಲಾ ವಿಚಾರದ ಮಾಹಿತಿ ಇರುವ ಹತ್ಯೆ ನಡೆದ ಪೊಲೀಸ್ ಸ್ಟೇಷನ್ ವ್ಯಾಪ್ತಿಯ ಸಬ್ ಇನ್ಸ್ಪೆಕ್ಟರ್ ಗಳನ್ನೇ ವರ್ಗಾವಣೆ ಮಾಡುತ್ತೀರಿ ಅಂದರೆ.. ನಿಮ್ಮ ಆದ್ಯತೆ ಕೊಲೆ ಗಡುಕರನ್ನು, ಹಿಡಿಯುವುದೇ,,? ಆರೋಪಿಗಳನ್ನು ರಕ್ಷಿಸುವ ಉದ್ದೇಶವೇ ಎಂದು ಸರಕಾರವನ್ನು ಪ್ರಶ್ನಿಸಿದ ಮಹಮ್ಮದ್ ಅಲಿಯವರು, ಬಿಜೆಪಿ ಸರಕಾರ ಬಂದ ಬಳಿಕ ಪೊಲೀಸ್ ಇಲಾಖೆಯಲ್ಲಿ ಕೇಳು ಕಂಡರಿಯದಷ್ಟು ರಾಜಕೀಯ ಹಸ್ತ ಕ್ಷೇಪ ನಡೆಯುತ್ತಿದೆ. ರಾಜ್ಯದಲ್ಲಿ ಧಕ್ಷತೆಯಲ್ಲಿ ಕೆಲಸ ನಿರ್ವಹಿಸುವ ಪೊಲೀಸ್ ಅಧಿಕಾರಿಗಳಿಗೆ ಉಳಿಗಾಲ ಇಲ್ಲಂತಾಗಿದೆ,ಇದಕ್ಕೆ ಉದಾಹರಣೆ ಈ ಹಿಂದೆ ದುಶ್ಕರ್ಮಿ ಗಳ ವಿರುದ್ಧ ಕ್ರಮ ಕೈಗೊಂಡ ಬಜಪೆ ಪೊಲೀಸ್ ಅಧಿಕಾರಿಗಳ ಅಮಾನತುಮಾಡಿದ ಕ್ರಮ ವಾಗಿರುತ್ತದೆ, ಬಿಜೆಪಿ ಸರಕಾರ ಇಡೀ ಪೊಲೀಸ್ ಇಲಾಖೆಯನ್ನೇ ನಿಷ್ಕ್ರಿಯೆ ಗೊಳಿಸುವ ಕೆಲಸ ಮಾಡುತ್ತಿದೆ, ಮೊನ್ನೆ ಮಂಗಳೂರಿನಲ್ಲಿ ನಡೆದ ಪಬ್ ದಾಳಿ ಪ್ರಕರಣ ದಲ್ಲಿ ದಾಳಿ ಕೊರರ ವಿರುದ್ಧ ಕಾನೂನು ಕ್ರಮ ಕೈಗೊಳದಂತೆ ತಡೆದಿರುವುದು ಕೂಡ ಒಂದು ಉದಾಹರಣೆಯಾಗಿರುತ್ತದೆ ಎಂದು ಹೇಳಿದ ಅವರು ಕಳೆದ 35 ವರ್ಷಗಳಿಂದ ಮಂಗಳೂರು ಲೋಕ ಸಭಾ ಕ್ಷೇತ್ರದಲ್ಲಿ ಬಿಜೆಪಿ ಸಂಸದರಿದ್ದಾರೆ, ಹಲವಾರು ವರ್ಷಗಳಿಂದ ಬಿಜೆಪಿ ಶಾಸಕರಿದ್ದಾರೆ, ಬಿಜೆಪಿ ಸರಕಾರ ಇದೆ, ಆದರೆ ಏನೂ ಅಭಿವೃದ್ಧಿ ಆಗಿದೆ ಎಂದರೆ ಅದು ಶೂನ್ಯ, ಕಾರ್ಯಕರ್ತರಿಗೆ ಏನೂ ಸಹಾಯ ಆಗಿದೆ ಎಂದರೆ.. ಏನೂ ಆಗಿಲ್ಲ, ಬದಲು ನಾಯಕರ ಏಳಿಗೆಗಾಗಿ ಹಾಗೂ ಹಿಂದುತ್ವಕ್ಕಾಗಿ ದುಡಿದ ಹಲವಾರು ಕಾರ್ಯ ಕರ್ತರು ಕೋರ್ಟ್, ಕೇಸು ಅಂತ ಅಲೆದಾಡುತ್ತಿದ್ದಾರೆ, ಇನ್ನು ಕೆಲವರು ಜೈಲಿನಲ್ಲಿದ್ದಾರೆ, ನಾಯಕರು ಮಾತ್ರ ಅಧಿಕಾರ ಸ್ಥಾನದಲ್ಲಿ ಮೆರೆದಾಡುತ್ತಿದ್ದಾರೆ, ಒಂದು ಕಡೆ ಬಿಜೆಪಿ ನಾಯಕರು ಮುಸಲ್ಮಾನರ ವಿರುದ್ಧ ತಮ್ಮ ಕಾರ್ಯ ಕರ್ತರನ್ನು ಎತ್ತಿ ಕಟ್ಟುವುದು, ಬಳಿಕ ಅದೇ ಮುಸಲ್ಮಾನ ರೊಂದಿಗೆ ವ್ಯಾಪಾರ ಸಂಬಂಧ ಇಟ್ಟು ಕೊಂಡಿರುವುದು,ಈ ರೀತಿಯ ಬಿಜೆಪಿ ಹಾಗೂ ಸಂಘ ಪರಿವಾರದ ನಾಯಕರ ಡೋಂಗಿ ಹಿಂದುತ್ವದ ಕುರಿತು ಅರಿತ ಕಾರ್ಯಕರ್ತರು ಇದೀಗ ನಾಯಕರ ವಿರುದ್ಧ ತಿರುಗಿ ಬೀಳಲು ಕಾರಣವಾಗಿರುತ್ತದೆ ಎಂದು ಹೇಳಿದರು.
ಯಾವುದೇ ಘಟನೆ ನಡೆದಾಗ ನಿದ್ದೆಗೆಡುವುದು ಪೊಲೀಸ್ ಇಲಾಖೆಗೆ.ಮೊನ್ನೆಯಿಂದ ಜಿಲ್ಲೆಯ ಪೊಲೀಸ್ ಅಧಿಕಾರಿಗಳು ನಿದ್ದೆಗೆಟ್ಟು ಕಾನೂನು ಸುವ್ಯವಸ್ಥೆ ಕಾಪಾಡಲು ಶಕ್ತಿ ಮೀರಿ ಶ್ರಮಿಸುತ್ತಿದ್ದಾರೆ,ಇಂತಹ ಸಂದರ್ಭದಲ್ಲಿ ಪೊಲೀಸ್ ಇಲಾಖೆಗೆ ಬೆಂಬಲ ನೀಡುವ ಬದಲು ಪೊಲೀಸರ ಆತ್ಮಸ್ಟೈರ್ಯ ಕುಂದಿಸುವಂತಹ ಕೆಲಸ ಯಾರೂ ಮಾಡಬಾರದು, ಸುರತ್ಕಲ್ ನಲ್ಲಿ ನಡೆದ ಫಾಝಿಲ್ ಹತ್ಯೆ ಆರೋಪಿಗಳನ್ನು ಪತ್ತೆ ಹಚ್ಚಲು ಧಕ್ಷ ಪೊಲೀಸ್ ಕಮಿಷನರ್ ಆಗಿರುವ ಶಶಿ ಕುಮಾರ್ ರವರು ಶತ ಪ್ರಯತ್ನ ನಡೆಸುತ್ತಿರುವ ಈ ಸಂದರ್ಭದಲ್ಲಿ ಶಾಸಕ ಭರತ್ ಶೆಟ್ಟಿ ಅದಕ್ಕೆ ಅಡ್ಡಿ ಪಡಿಸುವ ಕೆಲಸ ಮಾಡುತ್ತಿದ್ದಾರೆ, ಪೊಲೀಸ್ ಸ್ಟೇಷನ್ ಎದುರು ಪ್ರಭಟನೆ ಮಾಡುತ್ತೇನೆ ಎಂದು ಬೆದರಿಸುವ ಕೆಲಸ ಮಾಡುತ್ತಿರುವುದು ಖಂಡನೀಯ ಎಂದರು. ಜಿಲ್ಲೆಯಲ್ಲಿ ಈ ರೀತಿ ಕೋಮು ಆಧಾರಿತ ಹತ್ಯೆ ನಡೆಯಲು ನೇರ ಕಾರಣ ಬಿಜೆಪಿ ಸರಕಾರ ಹಾಗೂ ಕೋಮು ಆಧಾರಿತವಾಗಿ ಕಾರ್ಯಾಚರಿಸುತ್ತಿರುವ ಸಂಘಟನೆಗಳು ಎಂದು ಹೇಳಿದ ಅಲಿಯವರು ಹತ್ಯೆ ಪ್ರಕರಣದಲ್ಲಿ ನಿಜವಾದ ಆರೋಪಿಗಳನ್ನು ಬಂದಿಸುವರೇ ಹಾಗೂ ಕೋಮು ದ್ವೇಷ ಭಾಷಣ ಮಾಡಿ ಕೋಮು ಗಲಭೆಗಳಿಗೆ ಕುಮ್ಮಕ್ಕು ಕೊಡುತ್ತಿರುವವರ ವಿರುದ್ಧ ಕ್ರಮ ಗೊಳ್ಳುವರೇ ಪೊಲೀಸರಿಗೆ ಫ್ರೀ ಹ್ಯಾಂಡ್ ಬಿಡಬೇಕು ಎಂದು ಸರಕಾರವನ್ನು ಆಗ್ರಹಿಸಿದ ಆಲಿಯವರು ಜಿಲ್ಲೆಯ, ರಾಜ್ಯದ ಜನರು ಭಯವಿಲ್ಲದೆ, ನೆಮ್ಮದಿಯ ಬದುಕು ಸಾಗಿಸಲು ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮಹಮ್ಮದ್ ಅಲಿ ಆಗ್ರಹಿಸಿದರು.



























