ಪುತ್ತೂರು: ಇಡ್ಕಿದು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಮಿತ್ತೂರು ನಿಂದ ಕಲ್ಲಸರ್ಪೆಗೆ ತೆರಳುವ ಎರಡೂ ರಸ್ತೆಗಳು ತೀವ್ರ ಹದಗೆಟ್ಟಿದ್ದು, ಈ ಪ್ರದೇಶದ ಜನರು ಏನೇ ಅವಶ್ಯಕತೆ ಇದ್ದರೂ ಒಂದು ಸ್ಕೂಟರ್ ನಲ್ಲೂ ತೆರಳದಂತಹ ಸ್ಥಿತಿ ನಿರ್ಮಾಣವಾಗಿದೆ.

ಅತ್ಯಗತ್ಯ ಸೇವೆಯಾಗಿರುವ ಆಂಬ್ಯುಲೆನ್ಸ್ ಕೂಡ ಹೋಗಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದ್ದು, ಈ ಕಾರಣದಿಂದಾಗಿ ಇತ್ತೀಚಿಗೆ ಅನಾರೋಗ್ಯಕ್ಕೀಡಾಗಿದ್ದ, ಈ ಪ್ರದೇಶದ ಓರ್ವರು ಆಂಬ್ಯುಲೆನ್ಸ್ ಬರಲು ಸಾಧ್ಯವಾಗದ ಪರಿಣಾಮ ಮೃತಪಟ್ಟಿದ್ದು, ಈ ಪ್ರದೇಶದ ಜನರ ಅಸಹಾಯಕತೆಯನ್ನು ಪ್ರತಿಬಿಂಬಿಸುವಂತಿದೆ.
ಈ ರಸ್ತೆಯ ಕಾಮಗಾರಿಗೆಂದು ಸರಕಾರದಿಂದ ಲಕ್ಷ ಲಕ್ಷ ಅನುದಾನ ಬಂದಿದ್ದರೂ, ಅದು ಕೇವಲ ಬ್ಯಾನರ್ ಗಳಿಗೆ ಸೀಮಿತವಾಗಿದ್ದು, ಯಾವುದೇ ಪ್ರಗತಿ ಕಾರ್ಯಗಳು ಆಗುವಂತೆ ಕಾಣುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕುಕ್ಕರೆಬೆಟ್ಟು – ಪಾಟ್ರಕೋಡಿ – ಕುದುಂಬ್ಲಾಡಿ – ಕಲ್ಲಸರ್ಪೆ ರಸ್ತೆ ದುರಸ್ಥಿಗೆ ಸರಕಾರದಿಂದ ಲಕ್ಷ ಲಕ್ಷ ಅನುದಾನ ಬಂದಿದೆ ಎಂದು ಸರಿಸುಮಾರು ಆರು ತಿಂಗಳ ಹಿಂದೆಯೇ ಬ್ಯಾನರ್ ಗಳನ್ನು ಹಾಕಲಾಗಿದ್ದು, ಆದರೇ ಅದು ಯಾವುದು ಕಾರ್ಯರೂಪಕ್ಕೆ ಬರುವಂತೆ ಕಾಣುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಆದಷ್ಟು ಶೀಘ್ರ ಈ ಪ್ರದೇಶದ ಜನರ ದುಸ್ಥಿತಿಯನ್ನು ಅರಿತು ಈ ರಸ್ತೆ ಕಾಮಗಾರಿಯನ್ನು ವಿಶೇಷ ಮುತುವರ್ಜಿ ವಹಿಸಿ, ಕಾರ್ಯಗತಿಗೆ ತರುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.


























