ಮಂಗಳೂರು: ರಸ್ತೆಯ ಗುಂಡಿ ತಪ್ಪಿಸಲು ಹೋಗಿ ರಸ್ತೆ ವಿಭಜಕಕ್ಕೆ ಸ್ಕೂಟರ್ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಮೃತಪಟ್ಟ ಘಟನೆ ಬಿಕರ್ನಕಟ್ಟೆ ಕಂಡೆಟ್ಟು ಕ್ರಾಸ್ ಬಳಿಯ ರಾಷ್ಟ್ರೀಯ ಹೆದ್ದಾರಿ 73ರಲ್ಲಿ ನಡೆದಿದೆ.
ಕೊಂಚಾಡಿ ನಿವಾಸಿ ಆತೀಶ್ (20) ಮೃತಪಟ್ಟವರು.
ಆತೀಶ್ ನಂತೂರು ಜಂಕ್ಷನ್ ಕಡೆಯಿಂದ ಬಿಕರ್ನಕಟ್ಟೆ ಕೈಕಂಬ ಕಡೆಗೆ ಹಾದು ಹೋಗಿರುವ ರಸ್ತೆಯಲ್ಲಿ ಸಂಚರಿಸುತ್ತಿದ್ದರು. ಮಳೆ ಜೋರಾಗಿ ಸುರಿಯುತ್ತಿದ್ದುದರಿಂದ ಬಿಕರ್ನಕಟ್ಟೆ ಕಂಡೆಟ್ಟು ಕ್ರಾಸ್ಗಿಂತ ಮೊದಲು ಡಿವೈಡರ್ ಪಕ್ಕದಲ್ಲಿದ್ದ ಹೊಂಡವನ್ನು ಅವರು ಗಮನಿಸಲಿಲ್ಲ. ಹೊಂಡದ ಸನಿಹಕ್ಕೆ ಬರುವಾಗ ಹೊಂಡ ಇರುವುದು ತಿಳಿದು, ಕೂಡಲೇ ಸ್ಕೂಟರ್ನ್ನು ಹೊಂಡ ತಪ್ಪಿಸಲೆಂದು ತಿರುಗಿಸಿದರು. ಈ ವೇಳೆ ಸ್ಕೂಟರ್ ನಿಯಂತ್ರಣ ಕಳೆದುಕೊಂಡು ಡಿವೈಡರ್ಗೆ ಢಿಕ್ಕಿ ಹೊಡೆದು ಸುಮಾರು 50 ಅಡಿ ದೂರದಲ್ಲಿ ಬಿದ್ದಿದೆ. ಈ ವೇಳೆ ಸ್ಕೂಟರ್ನಿಂದ ಬಿದ್ದ ಆತೀಶ್ ಅವರ ತಲೆ ಡಿವೈಡರ್ ಮಧ್ಯೆ ಅಳವಡಿಸಿದ ರಿಫ್ಲೆಕ್ಟರ್ ಕಬ್ಬಿಣದ ಕಂಬಕ್ಕೆ ಬಡಿದು ಗಂಭೀರವಾಗಿ ಗಾಯಗೊಂಡ ಅವರನ್ನು ಆಸ್ಪತ್ರೆಗೆ ಕರೆದೊಯ್ದದರೂ, ಅವರು ದಾರಿ ಮಧ್ಯೆ ಮೃತಪಟ್ಟಿದ್ದಾರೆ. ಸಂಚಾರ ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

























