ನಟಿ ರಮ್ಯಾ ಅವರು ಚಿತ್ರರಂಗದಲ್ಲಿ ಈಗ ಸಕ್ರಿಯರಾಗಿದ್ದಾರೆ. ರಾಜಕೀಯದಿಂದ ದೂರ ಉಳಿದುಕೊಂಡಿರುವ ಅವರು ಬಣ್ಣದ ಲೋಕದ ಕಡೆಗೆ ಮತ್ತೆ ಆಕರ್ಷಿತರಾಗಿದ್ದಾರೆ. ಕನ್ನಡ ಚಿತ್ರರಂಗಕ್ಕೆ ರಮ್ಯಾ ಅವರು ಕಮ್ಬ್ಯಾಕ್ ಮಾಡಿದ್ದಾರೆ. ನಿರ್ಮಾಪಕಿಯಾಗಿ ತಮ್ಮದೇ ನಿರ್ಮಾಣ ಸಂಸ್ಥೆ ಆರಂಭಿಸಿದ್ದಾರೆ. ಅವರ ಮೊದಲ ನಿರ್ಮಾಣದ ಸಿನಿಮಾಗೆ ಈಗ ಶೀರ್ಷಿಕೆ ಅನೌನ್ಸ್ ಆಗಿದೆ. ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಎಂದು ಟೈಟಲ್ ಇಡಲಾಗಿದೆ. ವಿಶೇಷ ಏನೆಂದರೆ, ಈ ಸಿನಿಮಾಗೆ ರಾಜ್ ಬಿ. ಶೆಟ್ಟಿ ಅವರು ನಿರ್ದೇಶನ ಮಾಡಲಿದ್ದಾರೆ.
ರಮ್ಯಾ ಅವರು ಮತ್ತೆ ದೊಡ್ಡ ಪರದೆಯಲ್ಲಿ ಕಾಣಿಸಿಕೊಳ್ಳಬೇಕು ಎಂಬುದು ಅಭಿಮಾನಿಗಳ ಆಸೆ ಆಗಿತ್ತು. ಆ ಆಸೆ ನೆರವೇರುವ ಕಾಲ ಈಗ ಹತ್ತಿರವಾಗುತ್ತಿದೆ. ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾಗೆ ರಮ್ಯಾ ಕೇವಲ ನಿರ್ಮಾಪಕಿ ಮಾತ್ರ ಅಲ್ಲ. ಈ ಚಿತ್ರದಲ್ಲಿ ಅವರು ಮುಖ್ಯ ಪಾತ್ರ ಕೂಡ ಮಾಡಲಿದ್ದಾರೆ. ಅವರ ಜೊತೆ ರಾಜ್ ಬಿ. ಶೆಟ್ಟಿ ನಟಿಸಲಿದ್ದಾರೆ. ಈ ವಿಷಯ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.
ನಟನೆ ಮತ್ತು ನಿರ್ದೇಶನದ ಮೂಲಕ ರಾಜ್ ಬಿ. ಶೆಟ್ಟಿ ಅವರು ತಮ್ಮ ಪ್ರತಿಭೆ ಏನೆಂಬುದನ್ನು ಈಗಾಗಲೇ ಸಾಬೀತು ಮಾಡಿದ್ದಾರೆ. ಅವರ ನಿರ್ದೇಶನದಲ್ಲಿ ಮೂಡಿಬಂದ ‘ಒಂದು ಮೊಟ್ಟೆಯ ಕಥೆ’ ಹಾಗೂ ‘ಗರುಡ ಗಮನ ವೃಷಭ ವಾಹನ’ ಸಿನಿಮಾಗಳು ಜನಮನ ಗೆದ್ದವು. ಈಗ ಅವರು ರಮ್ಯಾ ಜೊತೆಗಿನ ಸಿನಿಮಾದಲ್ಲಿ ಯಾವ ಕಥೆ ಹೇಳಲಿದ್ದಾರೆ ಎಂಬುದನ್ನು ತಿಳಿಯುವ ಕೌತುಕ ಮನೆ ಮಾಡಿದೆ.
ರಮ್ಯಾ ಒಡೆತನದ ‘ಆಪಲ್ ಬಾಕ್ಸ್ ಸ್ಟುಡಿಯೋಸ್’ ಮೂಲಕ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರ ನಿರ್ಮಾಣ ಆಗಲಿದೆ. ‘ಲೈಟರ್ ಬುದ್ಧ ಫಿಲ್ಮ್ಸ್’ ಸಂಸ್ಥೆ ಕೂಡ ನಿರ್ಮಾಣದಲ್ಲಿ ಕೈ ಜೋಡಿಸುತ್ತಿದೆ. ಸದ್ಯಕ್ಕೆ ಪ್ರೀ-ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಶೀಘ್ರದಲ್ಲೇ ಶೂಟಿಂಗ್ ಆರಂಭ ಆಗಲಿದೆ. ‘ಗರುಡ ಗಮನ ವೃಷಭ ವಾಹನ’ ಚಿತ್ರದಲ್ಲಿ ಕೆಲಸ ಮಾಡಿದ ಹಲವು ತಂತ್ರಜ್ಞರು ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾದಲ್ಲೂ ಮುಂದುವರಿಯಲಿದ್ದಾರೆ. ವಿಧುನ್ ಮುಕುಂದನ್ ಸಂಗೀತ ನಿರ್ದೇಶನ, ಪ್ರವೀಣ್ ಶ್ರಿಯಾನ್ ಛಾಯಾಗ್ರಹಣ ಮಾಡಲಿದ್ದಾರೆ.


























