ಪುತ್ತೂರು: ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿ ಇಲ್ಲಿನ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳು ಮತ್ತು ಬೆಟ್ಟಂಪಾಡಿ ಗ್ರಾಮ ಪಂಚಾಯತಿನ ಸಹಯೋಗದೊಂದಿಗೆ ಗಾಂಧಿ ಜಯಂತಿಯ ಪ್ರಯುಕ್ತ ಐತಿಹಾಸಿಕ ಸ್ಥಳವಾದ ಬೆಂದ್ರ್ ತೀರ್ಥ ಸ್ವಚ್ಛತಾ ಕಾರ್ಯಕ್ರಮವು ಜರುಗಿತು.

ಐತಿಹಾಸಿಕ – ಪಾರಂಪರಿಕ ಸ್ಥಳಗಳ ಸಂರಕ್ಷಣೆಯ ಉದ್ದೇಶವನ್ನು ಇಟ್ಟುಕೊಂಡಿರುವ ಈ ಕಾರ್ಯಕ್ರಮವು ಎನ್ಎಸ್ಎಸ್ ನ ಸಮುದಾಯ ಅಭಿವೃದ್ಧಿ ತಂಡದ ನೇತೃತ್ವದಲ್ಲಿ ಆಯೋಜನೆಗೊಂಡಿತು. ಬೆಂದ್ರ್ ತೀರ್ಥ ಘಟ್ಟದ ಶುಚಿತ್ವ ಮತ್ತು ಸುತ್ತಮುತ್ತಲಿನ ಪರಿಸರದ ಕಳೆ ತೆಗೆಯುವ ಕಾರ್ಯಕ್ರಮದಲ್ಲಿ ಜೋಡಿಸಿಕೊಂಡ ಸ್ವಯಂಸೇವಕರು ಪಾರಂಪರಿಕ ಸ್ಥಳಗಳ ಸಂರಕ್ಷಣೆಯಲ್ಲಿ ತಮ್ಮ ಜವಾಬ್ದಾರಿಯನ್ನು ಅರಿಯುವಂತಾಯಿತು. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಗಳಾದ ಹರಿಪ್ರಸಾದ್ ಎಸ್ ಇವರು ಉಪಸ್ಥಿತರಿದ್ದು, ಸ್ವಯಂಸೇವಕರಿಗೆ ಮಾರ್ಗದರ್ಶನ ನೀಡಿದರು.

ಈ ಕಾರ್ಯಕ್ರಮದಲ್ಲಿ ಬೆಟ್ಟಂಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಪವಿತ್ರ ಡಿ, ಉಪಾಧ್ಯಕ್ಷರಾದ ವಿನೋದ್ ರೈ, ಸದಸ್ಯರುಗಳಾದ ಪ್ರಕಾಶ್ ರೈ, ಪಾರ್ವತಿ ಮಿತ್ತಡ್ಕ, ಬೇಬಿ ಜಯರಾಮ ಪೂಜಾರಿ, ಚಂದ್ರಶೇಖರ ಮತ್ತು ಸ್ಥಳೀಯರು ಉಪಸ್ಥಿತರಿದ್ದು, ಸ್ವಯಂಸೇವಕರೊಂದಿಗೆ ಕೈ ಜೋಡಿಸಿದರು.


























