ಮಂಗಳೂರು: ಲ್ಯಾಪ್ಟಾಪ್ ನೀಡುವುದಾಗಿ ಹೇಳಿ ವ್ಯಕ್ತಿಯೋರ್ವರಿಗೆ 5.73 ಲ.ರೂ. ವಂಚಿಸಿರುವ ಬಗ್ಗೆ ಪ್ರಕರಣ ದಾಖಲಾಗಿದೆ.
ನಗರದ ಉದ್ಯಮಿಯೋರ್ವರು ಕಂಪ್ಯೂಟರ್, ಲ್ಯಾಪ್ಟಾಪ್ ಮೊದಲಾದ ಬಿಡಿಭಾಗಗಳನ್ನು ಮಾರಾಟ ಮಾಡುತ್ತಿದ್ದು, ಅವರಿಗೆ ಜೈಪುರ ವೈಶಾಲಿ ನಗರದ ಮಿರಾಕಲ್ ಟೆಕ್ನಾಲಜೀಸ್ನ ಮನೋಜ್ ಚೌರಾಸಿಯಾ ಎನ್ನುವಾತ ಕರೆ ಮಾಡಿ ಕಡಿಮೆ ದರದಲ್ಲಿ ಲ್ಯಾಪ್ಟಾಪ್ ನೀಡುವುದಾಗಿ ತಿಳಿಸಿದ್ದ. ಅದರಂತೆ ಆಗಸ್ಟ್ ತಿಂಗಳಿನಲ್ಲಿ ಆತನಿಂದ ಎರಡು ಲ್ಯಾಪ್ಟಾಪ್ ಗಳನ್ನು ಖರೀದಿಸಿದ್ದರು.
ಅನಂತರ ಮನೋಜ್ ಚೌರಾಸಿಯಾ ಹಾಗೂ ಆತನ ಸಹಾಯಕಿ ಸುರಕ್ಷಾ ಖಾಂಡೆಲ್ವಾಲ್ ಕರೆ ಮಾಡಿ ಕಡಿಮೆ ದರದಲ್ಲಿ ಇನ್ನಷ್ಟು ಲ್ಯಾಪ್ಟಾಪ್ ಖರೀದಿಸುವಂತೆ ಆಫರ್ ನೀಡಿದರು. ಅದರಂತೆ ನಗರದ ಉದ್ಯಮಿ 15 ಎಚ್ಪಿ ಲ್ಯಾಪ್ಟಾಪ್ ಮತ್ತು ಬ್ಯಾಗ್ಗಳನ್ನು ನೀಡುವಂತೆ ತಿಳಿಸಿದ್ದರು. ಅದಕ್ಕಾಗಿ 5, 73, 750 ರೂ.ಗಳನ್ನು ಪಾವತಿಸಿದ್ದರು. ಆದರೆ ಅವರಿಗೆ ಲ್ಯಾಪ್ ನೀಡದೆ ವಂಚಿಸಲಾಗಿದೆ.
ಮನೋಜ್ ಚೌರಾಸಿಯ ಬಗ್ಗೆ ವಿಚಾರಣೆ ನಡೆಸಿದಾಗ ಆತ ಇದೇ ರೀತಿ ಹಲವರಿಗೆ ಕಡಿಮೆ ದರದಲ್ಲಿ ಕಂಪ್ಯೂಟರ್ ನೀಡುವುದಾಗಿ ಹೇಳಿ ಹಣ ಪಡೆದು ಕಂಪ್ಯೂಟರ್ಗಳನ್ನು ಒದಗಿಸದೆ ಮೋಸ ಮಾಡಿರುವುದು ಬೆಳಕಿಗೆ ಬಂದಿದೆ ಎಂದು ನಗರದ ಉದ್ಯಮಿಯೊಬ್ಬರು ಮಂಗಳೂರು ಉತ್ತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
























