ನವದೆಹಲಿ: ದೆಹಲಿಯಲ್ಲಿ ನಡೆದಿರುವ ಶ್ರದ್ಧಾ ವಾಕರ್ ಹತ್ಯೆ ರಾಷ್ಟ್ರ ರಾಜಧಾನಿ ಜನತೆಯನ್ನ ಬೆಚ್ಚಿ ಬೀಳಿಸಿದೆ. ತನಿಖೆ ವೇಳೆ ದಿನಕ್ಕೊಂದು ಸ್ಫೋಟಕ ಮಾಹಿತಿಗಳು ಬೆಳಕಿಗೆ ಬರುತ್ತಿವೆ.
ಅಮೆರಿಕದ ‘ಡೆಕ್ಸ್ಟರ್’ (Dexter) ವೆಬ್ಸೀರಿಸ್ನಿಂದ ಪ್ರೇರಿತನಾದ ಹಂತಕ ಅಫ್ತಾಬ್ ಅಮೀನ್ ಪೂನಾವಾಲ ಶ್ರದ್ಧಾ ವಾಕರ್ನನ್ನು ಹತ್ಯೆ ಮಾಡಿದ 35 ಪೀಸ್ಗಳಾಗಿ ಕತ್ತರಿಸಿ ವಿವಿಧ ಕಾಡುಗಳಲ್ಲಿ ಎಸೆದು ಬಂದಿದ್ದ. ಇದು ವಿಕೃತಿಗೆ ಸಾಕ್ಷಿಯಾಗಿತ್ತು. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ರಾಷ್ಟ್ರವ್ಯಾಪಿಯಾಗಿ ಆಕ್ರೋಶ ವ್ಯಕ್ತವಾಯಿತು. ದೇಶವನ್ನೇ ಬೆಚ್ಚಿ ಬೀಳಿಸಿರುವ ಮುಂಬೈಯ ಶ್ರದ್ಧಾ ವಾಕರ್ ಹತ್ಯೆ ಪ್ರಕರಣದ ಕುರಿತು ಟ್ವೀಟ್ ಮಾಡಿದ್ದ ಸಿನಿ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಶ್ರದ್ಧಾಳನ್ನು ಹತ್ಯೆ ಮಾಡಿರುವ ಆರೋಪಿಗೆ ಅದಕ್ಕಿಂತ ಹೀನಾಯ ಸಾವು ಬರಲಿ ಎಂದು ಬರೆದುಕೊಂಡಿದ್ದರು. ಈ ಬೆನ್ನಲ್ಲೇ ನಿರ್ದೇಶಕರೊಬ್ಬರು ಈ ಘಟನೆ ಕುರಿತು ಸಿನಿಮಾವನ್ನೇ ನಿರ್ಮಿಸೋದಾಗಿ ಘೋಷಿಸಿದ್ದಾರೆ.
ಹೌದು.. ನಿರ್ದೇಶಕ ಹಾಗೂ ನಿರ್ಮಾಪಕ ಮನೀಶ್ ಸಿಂಗ್ ದೆಹಲಿಯಲ್ಲಿ ನಡೆದ ಶ್ರದ್ಧಾ ವಾಕರ್ ಹತ್ಯೆ ಪ್ರಕರಣದ ಕುರಿತು ಚಲನಚಿತ್ರ ತಯಾರಿಸುವುದಾಗಿ ಹೇಳಿದ್ದಾರೆ. ಅವರೇ ಹೇಳಿರುವಂತೆ ಈಗಾಗಲೇ ಚಿತ್ರಕಥೆ ಕೆಲಸವನ್ನೂ ಪ್ರಾರಂಭಿಸಿದ್ದಾರೆ ಎನ್ನಲಾಗಿದೆ.
ಚಿತ್ರದ ಕಥೆಯ ಬಗ್ಗೆ ಮಾತನಾಡಿರುವ ಮನೀಶ್ ಅವರು, ಈ ಚಿತ್ರವು ಸಂಪೂರ್ಣವಾಗಿ ಶ್ರದ್ಧಾ ವಾಕರ್ ಹತ್ಯೆ ಪ್ರಕರಣವನ್ನು ಆಧರಿಸಿದೆ. ಅದರ ಜೊತೆಗೆ ಚಿತ್ರದಲ್ಲಿ ‘ಲವ್ ಜಿಹಾದ್’ ಕುರಿತು ಹೇಳಲಾಗುವುದು. ಮದುವೆಯಾಗೋದಾಗಿ ನಟಿಸಿ ಹೆಣ್ಣುಮಕ್ಕಳ ಬದುಕನ್ನು ಸಂಕಷ್ಟಕ್ಕೆ ದೂಡುತ್ತಿರುವವರ ಕುರಿತು ಈ ಚಿತ್ರ ಬಯಲು ಮಾಡಲಿದೆ ಎಂದು ಹೇಳಿದ್ದಾರೆ.
ಟೈಟಲ್ ಕೂಡಾ ಫಿಕ್ಸ್..!!??
ವೃಂದಾವನ ಫಿಲಂಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರ ನಿರ್ಮಾಣವಾಗಲಿದೆ. ‘ಹು ಕಿಲ್ಡ್ ಶ್ರದ್ಧಾ ವಾಕರ್?’ (WHO KILLED SHRADDHA WALKER) ಎಂದು ಚಿತ್ರಕ್ಕೆ ಹೆಸರಿಡಲಾಗಿದೆ.
ಈ ಚಿತ್ರದ ಕೆಲಸಗಳು ವೇಗವಾಗಿ ನಡೆಯುತ್ತಿದ್ದು, ನಿರ್ಮಾಪಕರು ದೆಹಲಿಯ ಸುತ್ತಮುತ್ತಲಿನ ಕಾಡುಗಳ ವಿಡಿಯೋ ಕ್ಲಿಪ್ಗಳ ಮೇಲೆ ಸಂಶೋಧನೆ ಮಾಡಲು ತಂಡವನ್ನು ರಚಿಸಿದ್ದಾರೆ. ಇದರೊಂದಿಗೆ ಶೂಟಿಂಗ್ಗಾಗಿ ಲೊಕೇಶನ್ ಹುಡುಕಾಟವೂ ನಡೆಯುತ್ತಿದೆ ಎಂದು ಹೇಳಲಾಗಿದೆ.

























