ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಂಪ್ರದಾಯಿಕ ಮರುಳುಗಾರಿಕೆಗೆ ಅನುಮತಿ ನೀಡಿ ಜಿಲ್ಲಾಧಿಕಾರಿ ಎಂ.ಆರ್.ರವಿಕುಮಾರ್ ಆದೇಶ ಹೊರಡಿಸಿದ್ದಾರೆ.
ಕರಾವಳಿ ನಿಯಂತ್ರಣ ವಲಯ ವ್ಯಾಪ್ತಿಯ ನೇತ್ರಾವತಿ ನದಿ ಹಾಗೂ ಫಲ್ಗುಣಿ ನದಿಗಳಲ್ಲಿ ಮರಳುಗಾರಿಕೆಗೆ ನಡೆಸಲು ಷರತ್ತುಗಳೊಂದಿಗೆ ಸಮ್ಮತಿ ಸೂಚಿಸಲಾಗಿದೆ.
ಮರಳು ತೆಗೆಯಲು 202 ಜನರಿಗೆ ಅನುಮತಿ ನೀಡಿದ ಜಿಲ್ಲಾಧಿಕಾರಿ ರವಿಕುಮಾರ್, ಯಾವುದೇ ಯಂತ್ರ ಬಳಸದೆ ಮಾನವ ಶ್ರಮದ ಮೂಲಕ ಮರಳುಗಾರಿಕೆ ನಡೆಸುವಂತೆ ಆದೇಶಿಸಿದ್ದಾರೆ. ಗಣಿ ಮತ್ತು ಭೂವಿಜ್ಞಾನ ಇಲಾಖೆಯ 7 ಜನರ ಸಮಿತಿಯೊಂದಿಗೆ ನಡೆದ ಸಭೆಯಲ್ಲಿ ಕೈಗೊಂಡ ನಿರ್ಧಾರದಂತೆ ಈ ಆದೇಶ ಹೊರಡಿಸಲಾಗಿದ್ದು, ಮುಂದಿನ ವಾರದಿಂದ ಅಧಿಕೃತವಾಗಿ ಮರಳು ಪೂರೈಕೆ ಆರಂಭವಾಗುವ ಸಾಧ್ಯತೆ ಇದೆ.
ನೇತ್ರಾವದಿ ಮತ್ತು ಫಲ್ಗುಣಿ ನದಿಗಳಲ್ಲಿ ಇರುವ ಮರಳು ದಿಬ್ಬಗಳನ್ನು ತೆರವುಗೊಳಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತವು ಮರಳುಗಾರಿಗೆಕೆ ಅನುಮತಿ ನೀಡಿದೆ. ಮರಳು ದಿಬ್ಬ ತೆರವುಗೊಳಿಸಲು ಜಿಲ್ಲಾಡಳಿತವು 14 ಸ್ಥಳಗಳನ್ನು ಗುರುತಿಸಿ ಮೇ ತಿಂಗಳಲ್ಲಿ ಕರೆದ ಡೆಂಡರ್ ಪ್ರಕ್ರಿಯೆಗೆ 282 ಅರ್ಜಿಗಳು ಬಂದಿದ್ದವು. ಈ ಪೈಕಿ 202 ಅರ್ಜಿಗಳನ್ನು ಗುರುತಿಸಲಾಗಿತ್ತು. ಆರಂಭದಲ್ಲಿ 148 ಮಂದಿಗೆ ಮಾತ್ರ ಮರುಳುಗಾರಿಕೆಗೆ ಪರವಾನಿಗೆ ನೀಡಲಾಗಿತ್ತು. ಉಳಿದ ಅರ್ಜಿಗಳನ್ನು ವಿಲೇವಾರಿ ಮಾಡುವ ಮುನ್ನ ಹಸಿರು ನ್ಯಾಯ ಮಂಡಳಿಯು ಮರುಳುಗಾರಿಕೆಗೆ ನಿಷೇಧ ಹೇರಿ ಆದೇಶಿಸಿತ್ತು. ಅದರಂತೆ ಮರುಳುಗಾರಿಕೆಗೆ ತಡೆಬಿದ್ದಿತ್ತು.
ಇತ್ತೀಚೆಗೆ ಜಿಲ್ಲಾಧಿಕಾರಿಯವರ ನೇತೃತ್ವದಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ 7 ಮಂದಿಯ ಸಮಿತಿ ಸದಸ್ಯರೊಂದಿಗೆ ನಡೆದ ಸಭೆಯಲ್ಲಿ ಎರಡು ನದಿಗಳಲ್ಲಿ ಗುರುತಿಸಿದ ಪ್ರದೇಶಗಳಲ್ಲಿ ಮರಳುಗಾರಿಕೆ ನಡೆಸಲು ಅನುಮತಿ ನೀಡುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿತ್ತು. ಅದರಂತೆ ಬಾಕಿ ಉಳಿದ 54 ಅರ್ಜಿಗಳನ್ನು ವಿಲೇವಾರಿ ಮಾಡಿ ಒಟ್ಟು 202 ಮಂದಿಗೆ ಮರಳುಗಾರಿಕೆ ನಡೆಸಲು ಅನುಮತಿ ನೀಡಿ ಆದೇಶಿಸಲಾಗಿದ್ದು, ಮುಂದಿನ ವಾರದಿಂದ ಮರಳುಗಾರಿಕೆ ಆರಂಭವಾಗುವ ಸಾಧ್ಯತೆ ಇದೆ.