ಪುತ್ತೂರು: ಟ್ರಾನ್ಸ್ಫರ್ ಪೆಟ್ಟಿಗೆ ಇದ್ದ ವಿದ್ಯುತ್ ಕಂಬವೇರಿ ವಿದ್ಯುತ್ ಸರಿ ಪಡಿಸುತಿದ್ದ ವೇಳೆ ವಿದ್ಯುತ್ ಸ್ಪರ್ಶಿಸಿ ವಿದ್ಯಾರ್ಥಿಯೊಬ್ಬ ಮೃತಪಟ್ಟ ಘಟನೆ ಪುತ್ತೂರು ತಾಲೂಕಿನ ಪಡುವನ್ನೂರು ಗ್ರಾಮದ ಅಂಬಟೆಮೂಲೆ ಎಂಬಲ್ಲಿ ನಡೆದಿದೆ.

ಪಡುವನ್ನೂರು ಗ್ರಾಮದ ಪಡುಮಲೆ ಸರ್ಕಾರಿ ಶಾಲಾ ಸಮೀಪದ ನಿವಾಸಿ ಕೃಷ್ಣ ನಾಯ್ಕ್ ಮತ್ತು ಸರಸ್ವತಿ ದಂಪತಿ ಪುತ್ರ, ಪಟ್ಟೆಯ ಪ್ರತಿಭಾ ಪ್ರೌಢ ಶಾಲೆಯ 10ನೇ ತರಗತಿ ವಿದ್ಯಾರ್ಥಿ ರಂಜಿತ್ ಮೃತರು.
ರಂಜಿತ್ ರವರ ಪರಿಚಯದ ಹುಡುಗನೊಬ್ಬ ತನ್ನ ಮನೆಗೆ ವಿದ್ಯುತ್ ಇಲ್ಲ. ಅದನ್ನು ಸರಿಪಡಿಸುವಂತೆ ರಂಜಿತ್ ರನ್ನು ತನ್ನ ಮನೆಯ ಸಮೀಪದ ಟಿಸಿ ಇರುವ ವಿದ್ಯುತ್ ಕಂಬದ ಬಳಿಗೆ ಕರೆದುಕೊಂಡು ಹೋಗಿದ್ದ ಎನ್ನಲಾಗಿದೆ.
ಇನ್ನು ರಂಜಿತ್ ಟಿಸಿ ಇರುವ ವಿದ್ಯುತ್ ಕಂಬವೇರಿ ವಿದ್ಯುತ್ ಸರಿಪಡಿಸಲು ಯತ್ನಿಸುತಿದ್ದ ವೇಳೆ ವಿದ್ಯುತ್ ಸ್ಪರ್ಶಿಸಿ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
ಸಂಪ್ಯ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.