ಮೂಡಬಿದ್ರೆ : ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ದಾಳಿ ನಡೆಸಿ ಅಕ್ರಮ ಕಸಾಯಿಖಾನೆ ನಡೆಸುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿ ಆರೋಪಿಗಳನ್ನು ಬಂಧಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಜಮೀನು ಮತ್ತು ಮನೆಯನ್ನು ಮುಟ್ಟುಗೋಲು ಹಾಕಿ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಹಿಂದೂ ಜಾಗರಣ ವೇದಿಕೆ ಮೂಡಬಿದ್ರೆ ತಾಲೂಕು, ಮಂಗಳೂರು ಗ್ರಾಮಾಂತರ ಜಿಲ್ಲೆ ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಿದೆ.
ಹಿಂದೂ ಜಾಗರಣಾ ವೇದಿಕೆ ಈಗಾಗಲೇ ಗೋ ರಕ್ಷಣೆ ಬಗ್ಗೆ ನಿರಂತರವಾಗಿ ಹೋರಾಟ ಮಾಡುತ್ತಲೇ ಬರುತ್ತಿದೆ. ಈಗಾಗಲೇ ಸಂಘಟನೆ ಮೂಡಬಿದ್ರೆ ಪೊಲೀಸ್ ಠಾಣಾ ವ್ಯಾಪ್ತಿಯ ಒಳಗಡೆ ಇರುವ ಅಕ್ರಮ ಕಸಾಯಿಖಾನೆಗಳ ಬಗ್ಗೆ ಮತ್ತು ನಿರಂತರ ಗೋವುಗಳ ಅಕ್ರಮ ಕಳ್ಳ ಸಾಗಾಟನೆಯ ಬಗ್ಗೆ ಕ್ರಮವನ್ನು ಕೈಗೊಳ್ಳುವಂತೆ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮತ್ತು ಮೂಡಬಿದ್ರೆ ಪೊಲೀಸರಿಗೆ ಈಗಾಗಲೇ ದೂರನ್ನು ನೀಡಿರುತ್ತೇವೆ.
ಮೂಡಬಿದ್ರೆ ಪೊಲೀಸರು ಅಕ್ರಮ ಕಸಾಯಿಖಾನೆ ಮತ್ತು ಅಕ್ರಮ ಗೋವುಗಳ ಕಳ್ಳಸಾಗಾಟಣೆಯ ಬಗ್ಗೆ ನಿರ್ಲಕ್ಷತನವನ್ನು ವಹಿಸಿದ್ದರಿಂದ ಡಿ.24 ರಂದು ಬೆಳಗ್ಗಿನ ಜಾವ ಮೂಡಬಿದ್ರೆಯ ಅಲಂಗಾರಿನ
ಆಶ್ರಯ ಕಾಲೋನಿಯಲ್ಲಿ ಗಿಲ್ಬರ್ಟ್ ಮಿರಾಂದ ಎಂಬವರ ಮನೆಯಲ್ಲಿ ನಡೆಯುತ್ತಿದ್ದ ಗೋವುಗಳ ಅಕ್ರಮ ಕಸಾಯಿಖಾನೆಗೆ ದಾಳಿ ಮಾಡಿ ಪೊಲೀಸರಿಗೆ ಮಾಹಿತಿಯನ್ನು ನೀಡಿರುತ್ತೇವೆ.
ಈ ದಾಳಿಯ ಸಂದರ್ಭದಲ್ಲಿ ಗಿಲ್ಬರ್ಟ್ ಮಿರಾಂದ ಅವರ ಮನೆಯಲ್ಲಿ ವಧೆ ಮಾಡಿದ 60 ಕೆಜಿ ಗೋವಿನ ಮಾಂಸ, ತಲೆಬುರುಡೆ ಮತ್ತು ವಧೆ ಮಾಡಲು ಕಟ್ಟಿ ಹಾಕಿದ ನಾಲ್ಕು ಗೋವುಗಳು ಪತ್ತೆಯಾಗಿರುತ್ತದೆ. ಕಾರ್ಯಕರ್ತರು ಹಿತ್ತಿಲಲ್ಲಿ ಶೋಧಿಸಿದಾಗ ಈ ಹಿಂದೆ ಕಡಿದ ಗೋವಿನ ರುಂಡವು ಪತ್ತೆಯಾಗಿರುತ್ತದೆ.
ಮೂಡಬಿದ್ರೆ ಪೊಲೀಸ್ ಠಾಣಾ ವ್ಯಾಪ್ತಿಯ ಒಳಗಡೆ ಸುಮಾರು 20ಕ್ಕಿಂತಲೂ ಅಧಿಕ ಅಕ್ರಮ ಕಸಾಯಿಖಾನೆಗಳಿದ್ದು, ಮೂಡಬಿದ್ರೆ ಪೊಲೀಸರು ಈ ಅಕ್ರಮ ಕಸಾಯಿಖಾನೆಯ ವಿರುದ್ಧ ಯಾವುದೇ ಕಾನೂನು ಕ್ರಮವನ್ನು ಜರುಗಿಸದೆ ಅಕ್ರಮ ಗೋವುಗಳ ಕಸಾಯಿಖಾನೆಯನ್ನು ನಡೆಸುವವರಿಗೆ ಸಹಕಾರವನ್ನು ನೀಡುತ್ತಿರುವುದನ್ನು ಹಿಂದೂ ಜಾಗರಣ ವೇದಿಕೆಯು ತೀವ್ರವಾಗಿ ಖಂಡಿಸುತ್ತದೆ. ಗೋವುಗಳ ಅಕ್ರಮ ಕಸಾಯಿಖಾನೆ ಮತ್ತು ಗೋವುಗಳ ಅಕ್ರಮ ಕಳ್ಳಸಾಗಾಟಣೆಯಿಂದಾಗಿ ಮೂಡಬಿದ್ರೆಯಲ್ಲಿ ಶಾಂತಿ ಸೌಹಾರ್ದಕ್ಕೆ ಮತ್ತು ಕೋಮು ಸೌಹಾರ್ದಕ್ಕೆ ಧಕ್ಕೆ ಉಂಟಾಗುವ ಸಾಧ್ಯತೆ ಇದೆ.
ಸಂಘಟನೆಯ ಕಾರ್ಯಕರ್ತರು ಪತ್ತೆ ಮಾಡಿರುವಂತಹ ಪ್ರಕರಣವು ಮೂಡಬಿದ್ರೆ ಪೊಲೀಸ್ ಠಾಣಾ ವ್ಯಾಪ್ತಿಯಿಂದ ಕೇವಲ ಐದು ಕಿಲೋಮೀಟರ್ ದೂರದಲ್ಲಿದ್ದು ಪೊಲೀಸರ ಗಮನಕ್ಕೆ ಬಾರದೇ ಇರುವುದು ವಿಪರ್ಯಾಸವಾಗಿದೆ.
ಕ್ಲಾರೆನ್ಸ್ ಆಲ್ವಿನ್ ಲೋಬೋ ಮತ್ತು ಗಿಲ್ಬರ್ಟ್ ಮಿರಾಂದ ತಮ್ಮ ಮನೆ ಮತ್ತು ಜಮೀನಿನಲ್ಲಿ ಯಾವುದೇ ಭಯವಿಲ್ಲದೆ ಅಕ್ರಮ ಗೋವುಗಳ ಕಸಾಯಿಖಾನೆಯನ್ನು ನಿರ್ಮಾಣ ಮಾಡಿರುತ್ತಾರೆ. ಮೂಡಬಿದ್ರೆ ಪೊಲೀಸರು ಗಿಲ್ಬರ್ಟ್ ಮಿರಾಂದ ರ ಜಮೀನನ್ನು ಪರಿಶೀಲನೆ ಮಾಡಿದಾಗ ಅನೇಕ ಗೋವುಗಳು ಹತ್ಯೆಯಾಗಿರುವ ಬಗ್ಗೆ ಅವಶೇಷಗಳು ಕಂಡು ಬಂದಿರುತ್ತದೆ. ಇನ್ನೂ ಸುಮಾರು 20 ಅಕ್ರಮ ಗೋವುಗಳ ಕಸಾಯಿಖಾನೆಗಳು ಮೂಡಬಿದ್ರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿದ್ದು, ಮೂಡಬಿದ್ರೆ ಪೊಲೀಸರು ಈ ಬಗ್ಗೆ ಯಾವುದೇ ಕಾನೂನು ಕ್ರಮ ಕೈಗೊಳ್ಳದೇ ಇದ್ದಲ್ಲಿ ಇಂತಹ ಅಕ್ರಮ ಗೋವುಗಳ ಕಸಾಯಿಖಾನೆಯ ವಿರುದ್ಧ ಸಂಘಟನೆಯು ಹೋರಾಟವನ್ನು ಮಾಡಲು ಸಿದ್ಧವಾಗಿದೆ.
ಗೋವುಗಳ ಅಕ್ರಮ ಕಸಾಯಿಖಾನೆಯನ್ನು ತಮ್ಮ ಜಮೀನು ಮತ್ತು ಮನೆಯಲ್ಲಿ ನಡೆಸುತ್ತಿರುವ ಗಿಲ್ಬರ್ಟ್ ಮಿರಾಂದ ವಿರುದ್ಧ ಕಠಿಣ ಕಾನೂನು ಕ್ರಮವನ್ನು ಕೈಗೊಂಡು ಗೋವುಗಳ ಅಕ್ರಮಕಸಾಯಿಖಾನೆಗೆ ಉಪಯೋಗ ಮಾಡಿದಂತಹ ಜಮೀನು ಮತ್ತು ಮನೆಯನ್ನು ಮುಟ್ಟುಗೋಲು ಹಾಕಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಮನವಿಯಲ್ಲಿ ತಿಳಿಸಲಾಗಿದೆ..

























