ಕೊರೊನಾ ಹಿನ್ನೆಲೆ ಮಕ್ಕಳು ಶಾಲೆಗೆ ಹೋಗದಿದ್ದರೂ ಕೆಲವು ಶಾಲೆಗಳು ಶುಲ್ಕದಲ್ಲಿ ವಿನಾಯ್ತಿ ನೀಡಲು ಹಿಂದೇಟು ಹಾಕಿದ್ದವು. ಈ ಸಂಬಂಧ ಪೋಷಕರು ಸರ್ಕಾರದ ಮಧ್ಯ ಪ್ರವೇಶಕ್ಕೆ ಆಗ್ರಹಿಸಿದ್ದರು. ಸರ್ಕಾರ ಸಹ ಮಧ್ಯ ಪ್ರವೇಶ ಮಾಡಿತ್ತು. ಈ ಪ್ರಕರಣ ನ್ಯಾಯಾಲಯದ ಮೆಟ್ಟಿಲು ಸಹ ಏರಿತ್ತು. ಇದೀಗ ಅರ್ಜಿಗಳ ವಿಚಾರಣೆ ನಡೆಸಿದ ಕರ್ನಾಟಕದ ಉಚ್ಛ ನ್ಯಾಯಾಲಯದ ಏಕ ಸದಸ್ಯ ಪೀಠ ಖಾಸಗಿ ಶಾಲೆಗಳ ಶುಲ್ಕ ನಿಗಧಿ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ ಎಂದು ಮಹತ್ವದ ಆದೇಶ ಹೊರಡಿಸಿದೆ.
ಖಾಸಗಿ ಅನುದಾನ ರಹಿತ ಶಾಲೆಗಳು ರಾಜ್ಯ ಸರ್ಕಾರ ನಿಗದಿ ಪಡಿಸಿದ ರೀತಿಯಲ್ಲಿ ಶುಲ್ಕ ಪಡೆಯುವುದನ್ನು ಕಡ್ಡಾಯಪಡಿಸುವ ಹಾಗೂ ಉಲ್ಲಂಘಿಸಿದರೆ ಶಿಕ್ಷೆ ವಿಧಿಸುವ ಕರ್ನಾಟಕ ಶಿಕ್ಷಣ ಕಾಯಿದೆ 1983ರ ಕೆಲ ಸೆಕ್ಷನ್ ಗಳನ್ನು ಹೈಕೋರ್ಟ್ ಅಸಂವಿಧಾನಿಕ ಎಂದು ಹೈಕೋರ್ಟ್ ಹೇಳಿದೆ.
ಶುಲ್ಕ ನಿಗಧಿ ಸಂಬಂಧ ಕರ್ನಾಟಕ ಖಾಸಗಿ ಶಾಲೆಗಳ ಸಮಿತಿ ಸೇರಿದಂತೆ ಹಲವು ಶಾಲಾ ಆಡಳಿತ ಮಂಡಳಿಗಳು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದವು. ಈ ಎಲ್ಲಾ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಾಧೀಶ ಇ.ಎಸ್.ಇಂದಿರೇಶ್ ಅವರ ಪೀಠ ಮಹತ್ವದ ಆದೇಶ ಹೊರಡಿಸಿದೆ.
ಕರ್ನಾಟಕ ಹೈಕೋರ್ಟ್ ಆದೇಶದ ಅನ್ವಯ ರಾಜ್ಯ ಸರ್ಕಾರಕ್ಕಿದ್ದ ಶುಲ್ಕ ನಿಗದಿ ಪಡಿಸುವ ಮತ್ತು ನಿಯಂತ್ರಿಸುವ ಅಧಿಕಾರ ರದ್ದುಗೊಳ್ಳಲಿದೆ. ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳಿಗೆ ಗೆಲುವು ಸಿಕ್ಕಂತಾಗಿದೆ.
ಈ ಸೆಕ್ಷನ್ಗಳು ಅಸಂವಿಧಾನಿಕ
ಅಪರಾಧಗಳಿಂದ ಮಕ್ಕಳ ರಕ್ಷಣೆ, ಸುರಕ್ಷತೆ ಮಾರ್ಗಸೂಚಿ ಉಲ್ಲಂಘನೆಗೆ ದಂಡ ವಿಧಿಸುವ ಅಧಿಕಾರವೂ ಕಾನೂನು ಬಾಹಿರ ಎಂದು ನ್ಯಾಯಾಲಯ ಹೇಳಿದೆ. ಅನುದಾನ ರಹಿತ ಶಾಲೆಗಳ ನಿಯಂತ್ರಿಸಲು ಜಿಲ್ಲಾಧಿಕಾರಿಗಳ ನೇತೃತ್ವದ ಜಿಲ್ಲಾ ಶಿಕ್ಷಣ ನಿಯಂತ್ರಣ ಪ್ರಾಧಿಕಾರಕ್ಕೆ ಅಧಿಕಾರ ನೀಡುವ ಸೆಕ್ಷನ್ 2(11)( ಎ) ಅಸಂವಿಧಾನಿಕ ಎಂದು ಕೋರ್ಟ್ ಹೇಳಿದೆ. ಇದರ ಜೊತೆ ಖಾಸಗಿ ಶಾಲೆಗಳ ಸಿಬ್ಬಂದಿಗಳ ಮೇಲೆ ಕ್ರಮಕೈಗೊಳ್ಳುವ ಅಧಿಕಾರ ನೀಡುವ ಸೆಕ್ಷನ್ 5 (ಎ) ಮತ್ತು 10 ಲಕ್ಷ ರೂಪಾಯಿವರೆಗೆ ದಂಡ ವಿಧಿಸುವ ಸೆಕ್ಷನ್ 124ಎ, ಶುಲ್ಕ ನಿಗದಿ ಪಡಿಸುವ ಅಧಿಕಾರ ನೀಡುವ ಸೆಕ್ಷನ್ 48 ಅಸಂವಿಧಾನಿಕ ಎಂದು ಕೋರ್ಟ್ ಹೇಳಿದೆ.
ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಹಕ್ಕುಗಳಿಗೆ ಸಂಬಂಧಿಸಿದಂತೆ ಸುಪ್ರೀಂಕೊರ್ಟ್ ರಚಿಸಿರುವ ಪ್ರಕಾರ, , ಪರಿಚ್ಛೇದ 19(1)(ಜಿ)(ಕಾನೂನಿನ ಅಧೀನದಲ್ಲಿರುವ ಯಾವುದೇ ವೃತ್ತಿ, ಉದ್ಯೋಗ, ವ್ಯಾಪಾರ ಮತ್ತು ವ್ಯವಹಾರವನ್ನು ನಡೆಸುವ ಹಕ್ಕು), ಕರ್ನಾಟಕ ಶಿಕ್ಷಣ ಕಾಯಿದೆ 1983ರ ಈ ಸೆಕ್ಷನ್ಗಳು ಸಂವಿಧಾನ ಪರಿಚ್ಛೇದ 14( ಕಾನೂನಿನಲ್ಲಿ ಸಮಾನತೆ) ಉಲ್ಲಂಘನೆ ಮಾಡಿದಂತಿದೆ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.


























