ವಿಟ್ಲ: ಬಸ್ ನಲ್ಲಿ ವಿದ್ಯಾರ್ಥಿನಿಗೆ ಚಾಕಲೇಟ್ ಬೇಕಾ..!!?? ಎಂದು ಕೇಳಿದ ವಿಚಾರವಾಗಿ ಮುಸ್ಲಿಂ ಯುವಕನಿಗೆ ಹಿಂದೂ ಯುವಕರ ತಂಡ ಹಲ್ಲೆ ನಡೆಸಿದೆ ಎಂದು ಆರೋಪಿಸಿ ಮುಸ್ಲಿಂ ಯುವಕನೋರ್ವ ಆಸ್ಪತ್ರೆಗೆ ದಾಖಲಾಗಿ, ಠಾಣೆಗೆ ದೂರು ನೀಡಿದ ಘಟನೆ ನಡೆದಿದೆ.
ವೀರಕಂಭ ಮಂಗಳಪದವು ನಿವಾಸಿ ಮಹಮ್ಮದ್ ಶಾಕೀರ್ (19) ಎಂಬಾತ ನೀಡಿದ ದೂರಿನ ಮೇರೆಗೆ ಚಂದ್ರಶೇಖರ, ಪ್ರಜ್ವಲ್, ರೋಹಿತ್ ಹಾಗೂ ಇತರ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.
ಶಾಕೀರ್ ಮಂಗಳೂರು ಬಲ್ಮಠ ಎಂಬಲ್ಲಿರುವ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿಕೊಂಡಿದ್ದು, ಜ.12 ರಂದು ಕಾಲೇಜು ಮುಗಿಸಿ ಕೆ.ಎಸ್.ಆರ್.ಟಿ.ಸಿ ಬಸ್ಸಿನಲ್ಲಿ ಮನೆಗೆ ಬರುತ್ತಿರುವ ವೇಳೆ ಶಾಕೀರ್ ಕುಳಿತುಕೊಂಡಿದ್ದ ಪಕ್ಕದ ಸೀಟಿನಲ್ಲಿ ಕುಳಿತಿದ್ದ ವಿದ್ಯಾರ್ಥಿನಿಗೆ ಚಾಕಲೇಟು ಬೇಕೆ ಎಂದು ಕೇಳಿದ್ದನ್ನು ತಪ್ಪಾಗಿ ತಿಳಿದುಕೊಂಡು ಬಸ್ ಬಂಟ್ವಾಳ ತಾಲೂಕು ವೀರಕಂಭ ಗ್ರಾಮದ ಕೆಲಿಂಜ ಎಂಬಲ್ಲಿಗೆ ತಲುಪಿದಾಗ ಬಸ್ ಗೆ ಏಕಾಏಕಿಯಾಗಿ ಕೆಲಿಂಜ ನಿವಾಸಿಗಳಾದ ಚಂದ್ರಶೇಖರ, ಪ್ರಜ್ವಲ್, ರೋಹಿತ್ ಹಾಗೂ ಇತರ ಮೂರು ಜನರು ಹತ್ತಿ ಹಲ್ಲೆ ನಡೆಸಿದ್ದಾರೆಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಅ.ಕ್ರ 08/2023 ಕಲಂ: 143, 147,323 ಜೊತೆಗೆ 149 ರಂತೆ ಪ್ರಕರಣ ದಾಖಲಾಗಿದೆ..