ಚಿಕ್ಕಮಗಳೂರು: ಆಕಸ್ಮಿಕ ಬೆಂಕಿ ಬಿದ್ದು ಹತ್ತಾರು ಎಕರೆ ಅರಣ್ಯ ಬೆಂಕಿಗಾಹುತಿಯಾಗಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ಚಾರ್ಮಾಡಿ ಘಾಟಿಯಲ್ಲಿ ನಡೆದಿದೆ.
ಚಾರ್ಮಾಡಿ ಘಾಟಿಯ ಆಲೆಖಾನ್ ಹೊರಟ್ಟಿ ಸಮೀಪದ ಮಲಯಮಾರುತ ಸಮೀಪದ ಬಳಿ ಗುಡ್ಡಕ್ಕೆ ಆಕಸ್ಮಿಕ ಬೆಂಕಿ ಬಿದ್ದು ಹತ್ತಾರು ಎಕರೆ ಅರಣ್ಯ ಸುಟ್ಟುಕರಕಲಾಗಿದೆ. ಅರಣ್ಯ ಪ್ರದೇಶಕ್ಕೆ ಬೆಂಕಿ ಬೀಳುತ್ತಿದ್ದಂತೆ ಎಚ್ಚೆತ್ತುಕೊಂಡ ಅರಣ್ಯ ಇಲಾಖೆ ಸಿಬ್ಬಂದಿ ಕೂಡಲೇ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಿದ್ದಾರೆ.
ಅರಣ್ಯಕ್ಕೆ ಆಕಸ್ಮಿಕವಾಗಿ ಬೆಂಕಿ ಬಿತ್ತೋ ಅಥವಾ ಯಾರಾದರೂ ಬೆಂಕಿ ಹಾಕಿದ್ದಾರೋ ತಿಳಿದಿಲ್ಲ. ಆದರೆ ಗಾಳಿ ಹಾಗೂ ಬಿಸಿಲಿನ ಝಳಕ್ಕೆ ಒಣಗಿದ್ದ ಗುಡ್ಡದ ಮರಗಿಡಗಳು ಹಾಗೂ ಹುಲ್ಲು ಹೊತ್ತಿ ಉರಿದಿದೆ. ಬೇಸಿಗೆಯಾದ್ದರಿಂದ ಬಿಸಿಲ ಧಗೆಗೆ ಬೆಂಕಿಯ ಜ್ವಾಲೆ ಹೆಚ್ಚಿದ್ದರಿಂದ ಅರಣ್ಯ ಅಧಿಕಾರಿಗಳು ಹಾಗೂ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿಯನ್ನು ನಂದಿಸಲು ಹರಸಾಹಸಪಟ್ಟರು..


























