ವಿಟ್ಲ: ಕೋಣೆಯಲ್ಲಿ ಮಲಗಿದಲ್ಲಿಯೇ ವ್ಯಕ್ತಿ ಮೃತಪಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನ ಪತ್ನಿ ಹಾಗೂ ಪತ್ನಿಯ ಪರಿಚಯಸ್ಥ ಸೇರಿಕೊಂಡು ಕುತ್ತಿಗೆ ಹಿಸುಕಿ ಕೊಲೆ ಮಾಡಿರುವುದು ಪೊಲೀಸ್ ತನಿಖೆಯಿಂದ ದೃಢಪಟ್ಟಿದ್ದು, ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಇಡ್ಕಿದು ಕುಮೇರು ನಿವಾಸಿ ಅರವಿಂದ ಭಾಸ್ಕರ (39) ಮೃತ ವ್ಯಕ್ತಿ.

ಅರವಿಂದ ಅವರ ಪತ್ನಿ ಆಶಾ ಹಾಗೂ ಮನೆಯ ಸೆಂಟ್ರಿಂಗ್ ಕೆಲಸ ನಿರ್ವಹಿಸಿದ ಯೋಗೀಶ ಗೌಡ ಆರೋಪಿಗಳಾಗಿದ್ದಾರೆ.
ಅರವಿಂದ ಭಾಸ್ಕರ ಅವರು ಸುಮಾರು 2 ವರ್ಷಗಳ ಹಿಂದೆ ಹೊಸ ಮನೆಯನ್ನು ಕಟ್ಟಲು ಆರಂಭಿಸಿದ್ದು, ಅದರ ಸೆಂಟ್ರಿಂಗ್ ಕೆಲಸವನ್ನು ಯೋಗೀಶ ಗೌಡ ಎಂಬವರು ನಿರ್ವಹಿಸುತ್ತಿದ್ದು, ಆತ ಅರವಿಂದ ಭಾಸ್ಕರನ ಪತ್ನಿ ಆಶಾಳೊಂದಿಗೆ ತುಂಬಾ ಅನ್ಯೋನ್ಯವಾಗಿದ್ದ.

ಅರವಿಂದ ಭಾಸ್ಕರ ಅವರು ಅಡಿಕೆ ಮಾರಾಟ ಮಾಡಿ ಬಂದ ಹಣವನ್ನು ದುಂದುವೆಚ್ಚ ಮಾಡುತ್ತಿದ್ದ ಬಗ್ಗೆ ಆತನ ಪತ್ನಿ ಆಕ್ಷೇಪಿಸುತ್ತಿದ್ದುದಲ್ಲದೇ, ಯೋಗೀಶ ಆಶಾಳೊಂದಿಗೆ ಸೇರಿಕೊಂಡು ಅರವಿಂದ ಭಾಸ್ಕರನಿಗೆ ಹಲ್ಲೆ ನಡೆಸುತ್ತಿದ್ದರು. ಇದರಿಂದ ಹೆದರಿ ರಾತ್ರಿ ವೇಳೆಯಲ್ಲಿ ಮನೆಯ ಕೋಣೆಯ ಬಾಗಿಲಿನ ಚಿಲಕವನ್ನು ಹಾಕಿ ಮಲಗುತ್ತಿರುವ ಬಗ್ಗೆ ಸುಮಾರು 1 ತಿಂಗಳ ಹಿಂದೆ ತಿಳಿಸಿದ್ದರು ಎಂದು ದೂರಿನಲ್ಲಿ ಭಾಸ್ಕರ್ ರವರ ಸಂಬಂಧಿಯೋರ್ವರು ತಿಳಿಸಿದ್ದರು.

ಫೆ 26 ರಂದು ತಡ ರಾತ್ರಿ ಅರವಿಂದ ಭಾಸ್ಕರ (39) ಅವರನ್ನು ಅವರು ಮನೆಯೊಳಗಡೆ ಮಲಗಿದ್ದ ವೇಳೆ ಕತ್ತು ಹಿಸುಕಿ ಕೊಲೆಗೆಯ್ಯಲಾಗಿತ್ತು. ಬಳಿಕ ಮರುದಿನ ಬೆಳಿಗ್ಗೆ ಪತ್ನಿ ಪತಿಯ ಶವವನ್ನು ವಿಟ್ಲ ಸಮುದಾಯ ಭವನಕ್ಕೆ ಕರೆದುಕೊಂಡು ಹೋಗಿದ್ದು , ಅಲ್ಲಿರಾತ್ರಿ ಮಲಗಿದ್ದ ಪತಿ ಬೆಳಿಗ್ಗೆಯಾದರೂ ಎದ್ದಿಲ್ಲ ಎಂದು ಕಥೆ ಕಟ್ಟಿ ಹೇಳಿದ್ದರು. ಆದರೇ ಪರೀಕ್ಷಿಸಿದ ವೈದರು, ಸ್ನೇಹಿತರು ಹಾಗೂ ಬಂದುಗಳು ಸಾವಿನ ಸಂಶಯ ವ್ಯಕ್ತ ಪಡಿಸಿದ ಹಿನ್ನಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕೊಲೆ ಕೃತ್ಯ ಬಯಲಿಗೆಳೆದಿದ್ದರು.
ಕೊಲೆ ನಡೆಸಿ ಕಥೆ ಕಟ್ಟಿದ ಆಶಾ..:
ಯೋಗೀಶ್ ಹಾಗೂ ಆಶಾ ರವರು ಪರಸ್ಪರ ಹತ್ತಿರವಾಗುತ್ತಿದ್ದಂತೆ ಅರವಿಂದ ಭಾಸ್ಕರ ರನ್ನು ದೂರ ಮಾಡುವ ಯೋಜನೆಯನ್ನು ಮಾಡಿಕೊಂಡಿದ್ದ ಅವರಿಬ್ಬರು ಆ ಸಮಯಕ್ಕಾಗಿ ಕಾಯುತ್ತಿದ್ದರು. ದಿನಂಪ್ರತಿ ಕುಡಿತದ ಚಟ ಹೊಂದಿದ್ದ ಅರವಿಂದ ಭಾಸ್ಕರರಿಂದ ವಿಮುಕ್ತಿ ಹೊಂದುವ ಯೋಚನೆಯನ್ನು ಮಾಡಿದ್ದ ಆಶಾ ಅದಕ್ಕಾಗಿ ತನ್ನ ಪ್ರಿಯಕರ ಯೋಗೀಶ್ನೊಂದಿಗೆ ಸೇರಿಕೊಂಡು ಪತಿಯನ್ನೆ ಮುಗಿಸುವ
ಯೋಜನೆಯನ್ನು ರೂಪಿಸಿಕೊಂಡಿದ್ದರು. ಎಂದಿನಂತೆ ಅರವಿಂದ ಭಾಸ್ಕರ ಕುಡಿದು ಮಲಗಿದ ಬಳಿಕ ಅವರ ಪತ್ನಿ ಆಶಾ ಪ್ರಿಯಕರ ಯೋಗೀಶ್ನೊಂದಿಗೆ ಸೇರಿಕೊಂಡು ತಲೆ ದಿಂಬಿನಿಂದ
ಉಸಿರುಗಟ್ಟಿಸಿ ಅರವಿಂದ ಭಾಸ್ಕರರನ್ನು ಕೊಲೆ ನಡೆಸಿದ್ದರು. ಬಳಿಕ ಯಾರಿಗೂ ಸಂಶಯ ಬರಬಾರದೆಂದು ಬೆಳಗ್ಗೆ ಎದ್ದ ಆಶಾ, ಪತಿ ರಾತ್ರಿ ಮಲಗಿದವರು ಬೆಳಗ್ಗೆ ಮೃತಪಟ್ಟ ಸ್ಥಿತಿಯಲ್ಲಿದ್ದಾರೆ ಎಂದು ಸ್ಥಳೀಯರಿಗೆ ಹಾಗೂ ಸಂಬಂಧಿಕರಿಗೆ ಮಾಹಿತಿ ನೀಡಿದ್ದರು.
ತರಾತುರಿಯಲ್ಲಿ ಅಂತ್ಯ ಸಂಸ್ಕಾರಕ್ಕೂ ಮುಂದಾಗಿದ್ದರು ಎನ್ನುವ ಮಾಹಿತಿ ಪೊಲೀಸ್ ತನಿಖೆಯಿಂದ ಬೆಳಕಿಗೆ ಬಂದಿದೆ.
ಇತ್ತ ಬೆಳ್ಳಂಬೆಳಗ್ಗೆ ಗ್ರಾಮದ ವ್ಯಕ್ತಿಯೋರ್ವ ಅಸಹಜವಾಗಿ ಮೃತಪಟ್ಟ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯರ ಸಹಿತ ಹಲವು ಜನರು ಮನೆಮುಂದೆ ಸೇರಿದ್ದರು. ಈ ವೇಳೆ ಅರವಿಂದ ಭಾಸ್ಕರ ಅವರ ಸಾವಿನಲ್ಲಿ ಸಂಶಯ ವ್ಯಕ್ತಪಡಿಸಿ ನೆರೆದಿದ್ದ ಸ್ಥಳೀಯರ ಸಹಿತ ಸಂಬಂಧಿಕರು ವಿಟ್ಲ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದರು. ಮಾತ್ರವಲ್ಲದೆ ಅರವಿಂದ ಭಾಸ್ಕರ ರವರ ಸ್ನೇಹಿತ ಮನೋಜ್ ಎಂಬವರು, ಇದು ಅಸಹಜ ಸಾವಲ್ಲ, ಆತನ ಸಾವಿನಲ್ಲಿ ಸಂಶಯವಿದೆ ಎಂದು ಆರಂಭದಲ್ಲಿ ವಿಟ್ಲ ಠಾಣಾ ಪೊಲೀಸರಿಗೆ ದೂರು ನೀಡಿದ್ದರು.
ತನಿಖೆ ಚುರುಕುಗೊಳಿಸಿದ ತಂಡಕ್ಕೆ ಲಭಿಸಿತ್ತು ಮಹತ್ವದ ಸುಳಿವು..:
ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಸ್ಥಳೀಯ ಕೆಲವರು ಹಾಗೂ ಮೃತರ ಸಂಬಂಧಿಕರಿಂದ ಕೆಲವೊಂದು ಮಾಹಿತಿಯನ್ನು ಕಲೆಹಾಕಿದ್ದರು. ಈ ಮಾಹಿತಿ ಜಾಡು ಹಿಡಿದ ತನಿಖಾ ತಂಡಕ್ಕೆ ಯೋಗೀಶ್ ಹಾಗೂ ಆಶಾ ರವರ ನಡುವಿನ ಪ್ರೇಮಪ್ರಕರಣ ತಿಳಿದು ಬಂದಿತ್ತು. ಆ ಬಳಿಕ ಆಶಾ ಹಾಗೂ ಯೋಗೀಶ್ ರವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸಾವಿನ ರಹಸ್ಯ ಹೊರಬಿದ್ದಿತ್ತು.

ಆರೋಪಿಗಳಿಬ್ಬರು ಪೊಲೀಸರ ಅತಿಥಿಗಳಾಗಿದ್ದಾರೆ..


























