ಪುತ್ತೂರು: ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆ ಮಾ.11 ರಂದು ಸಂಜೆ 5 ಗಂಟೆಗೆ ಪುತ್ತೂರಿನ ವೆಂಕಟರಮಣ ದೇವಸ್ಥಾನದ ಪಕ್ಕದ ಮೈದಾನದಲ್ಲಿ ನಡೆಯಲಿದೆ ಎಂದು ಪುತ್ತೂರು ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಹೇಳಿದರು.
ಪುತ್ತೂರು ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಒಟ್ಟು ನಾಲ್ಕು ತಂಡಗಳ ಮೂಲಕ ಹೊರಡಲಿದ್ದು, ಮಾ.1 ರಂದು ಮಲೈ ಮಹಾದೇಶ್ವರ ಬೆಟ್ಟದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ವಿಜಯ ಸಂಕಲ್ಪ ಯಾತ್ರೆಗೆ ಚಾಲನೆಯನ್ನು ನೀಡಿದ್ದಾರೆ.

ಇವುಗಳಲ್ಲಿ ಒಂದು ತಂಡ ಮಾ.11 ರಂದು ಪುತ್ತೂರು ತಲುಪಲಿದೆ. ಈ ತಂಡದಲ್ಲಿ ಬಿಜೆಪಿ ರಾಜ್ಯ ಮುಖಂಡರಾದ ಆರ್.ಆಶೋಕ್, ಕೆ.ಎಸ್.ಈಶ್ವರಪ್ಪ, ಸುನಿಲ್ ಕುಮಾರ್,ಕೋಟಾ ಶ್ರೀನಿವಾಸ ಪೂಜಾರಿ, ಎಸ್.ಅಂಗಾರ ಮೊದಲಾದ ಸಚಿವರು ಇರಲಿದ್ದಾರೆ ಎಂದ ಅವರು ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಪಟ್ಟ ಎಲ್ಲಾ ಶಕ್ತಿ ಕೇಂದ್ರ ಮತ್ತು ಮಂಡಲಗಳಲ್ಲಿ ಈಗಾಗಲೇ ಯಾತ್ರೆಯ ಕುರಿತು ಸಭೆಗಳನ್ನು ನಡೆಸಲಾಗಿದೆ. ಪ್ರತೀ ಬೂತ್ ನಿಂದ 100 ಮಂದಿಯಂತೆ ಜನ ಆಗಲಿಸಲಿದ್ದು, ಒಟ್ಟು 20 ಸಾವಿರದಷ್ಟು ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

























