ಸುಬ್ರಹ್ಮಣ್ಯ: ವಾಲಗದಕೇರಿಯ ದರ್ಪಣ ತೀರ್ಥ ನದಿಯಲ್ಲಿ ಸಾವಿರಾರು ಮೀನುಗಳ ಸಹಿತ ಜಲಚರಗಳು ಸಾವನ್ನಪ್ಪಿರುವುದು ಬೆಳಕಿಗೆ ಬಂದಿದ್ದು, ಕಲುಷಿತ ನೀರು ನದಿಗೆ ಸೇರಿರುವುದೇ ಘಟನೆಗೆ ಕಾರಣ ಎಂಬ ಶಂಕೆ ವ್ಯಕ್ತವಾಗಿದೆ.
ಕುಕ್ಕೆ ಸುಬ್ರಹ್ಮಣ್ಯದ ದರ್ಪಣ ತೀರ್ಥ ನದಿ ಕುಮಾರಧಾರಾಕ್ಕೆ ಸೇರುವ ಮಧ್ಯ ಭಾಗದ ವಾಲಗದ ಕೇರಿ ಪ್ರದೇಶದಲ್ಲಿ ದೇವರ ಮೀನುಗಳ ಸಹಿತ ಹಲವಾರು ಜಾತಿಯ ಮೀನುಗಳು ಹಾಗೂ ವಿವಿಧ ಜಲಚರಗಳು ಸಾವನ್ನಪ್ಪಿ ನೀರಿನಲ್ಲಿ ತೇಲುತ್ತಿರುವುದು, ದಡಕ್ಕೆ ಬಂದು ಬಿದ್ದಿರುವುದು ಕಂಡುಬಂದಿದೆ. ಭಾರೀ ಪ್ರಮಾಣದಲ್ಲಿ ಮೀನುಗಳ ಸಾವಿನಿಂದ ಸ್ಥಳೀಯರಲ್ಲಿ ಆತಂಕ ಮೂಡಿದೆ.
ವಸತಿಗಳ ಹಾಗೂ ಒಳಚರಂಡಿಯ ಕಲುಷಿತ ನೀರು ಸೇರ್ಪಡೆ ಗೊಂಡಿರುವುದರಿಂದ ದರ್ಪಣ ತೀರ್ಥ ಮಲಿನಗೊಂಡಿದ್ದು, ನೀರಿನ ಬಣ್ಣವೂ ಕೊಳಚೆ ರೀತಿಯಲ್ಲಿ ಕಾಣುತ್ತಿದೆ ಎಂಬ ದೂರು ಕೇಳಿಬಂದಿದೆ. ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದೆ ಎಂಬ ಆರೋಪ ಕೇಳಿ ಬಂದಿದ್ದು, ಘಟನೆ ಬಗ್ಗೆ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೀನುಗಳ ಸಾವಿನಿಂದ ಪರಿಸರದಲ್ಲಿ ದುರ್ವಾಸನೆ ಪಸರಿಸಿದ್ದು ಅಕ್ಕಪಕ್ಕದವರು ಮೂಗು ಮುಚ್ಚಿಕೊಂಡು ವಾಸಿಸಬೇಕಾಗಿದೆ. ಸಾಂಕ್ರಾಮಿಕ ರೋಗ ಭೀತಿ ಎದುರಾಗಿದೆ. ಈ ವರೆಗೂ ಯಾವುದೇ ಅಧಿಕಾರಿಗಳು ಭೇಟಿ ನೀಡಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.


























