ಪುತ್ತೂರು: ಹಿಂದು ಜಾಗರಣ ವೇದಿಕೆ ವತಿಯಿಂದ ಪುತ್ತೂರಿನ ಬೊಳುವಾರಿನಲ್ಲಿರುವ ಸುಬ್ರಹ್ಮಣ್ಯನಗರದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸೇರಿದ ಜಾಗದಲ್ಲಿ ನಡೆದ ಆಶ್ಲೇಷ ಬಲಿ ಹಾಗೂ ಅರ್ಧ ಏಕಾಹ ಭಜನಾ ಕಾರ್ಯಕ್ರಮದ ಧಾರ್ಮಿಕ ಸಭೆಯಲ್ಲಿ ಅಧ್ಯಕ್ಷೀಯ ಭಾಷಣ ಮಾಡಿದ ಹಿಂದೂ ಜಾಗರಣ ವೇದಿಕೆಯ ತಾಲೂಕು ಗೌರವಾಧ್ಯಕ್ಷರಾದ ಪುತ್ತೂರಿನ ಜನಪ್ರಿಯ ವೈದ್ಯರು, ಹಿಂದೂ ಸಮಾಜದ ಮಾರ್ಗದರ್ಶಕರಾದ ಡಾ. ಎಂ ಕೆ ಪ್ರಸಾದ್ ರವರ ವಿರುದ್ಧ ಬಿಷಪ್ ಮತ್ತು ಕೆಥೋಲಿಕ್ ಚರ್ಚ್ ಮುಖಂಡರು ಮಂಗಳೂರಿನಲ್ಲಿ ಪೋಲಿಸ್ ಅಧೀಕ್ಷಕರಿಗೆ ದೂರು ನೀಡಿರುವ ವಿಚಾರ ಹಾಗೂ ಪುತ್ತೂರಿನಲ್ಲಿ ಮಾಯೆ ದೇವೂಸ್ ಶಿಕ್ಷಣ ಸಂಸ್ಥೆಯ ಧರ್ಮ ಗುರಗಳು ಪತ್ರಿಕಾಗೋಷ್ಠಿ ಕರೆದು ಡಾ. ಎಂ ಕೆ. ಪ್ರಸಾದ್ ರವರು ಕ್ರೈಸ್ತರ ವಿರುದ್ಧ ದ್ವೇಷ ಪೂರಿತ ಭಾಷಣ ಮಾಡಿದ್ದಾರೆ ಎಂದು ಸುಳ್ಳು ಆರೋಪ ಹೊರಿಸಿರುವ ವಿಚಾರವನ್ನು ಹಿಂದೂ ಜಾರಗಣ ವೇದಿಕೆ ತೀವ್ರವಾಗಿ ಖಂಡಿಸಿದೆ.
ಸದ್ರಿ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷೀಯ ಭಾಷಣ ಮಾಡಿರುವ ಡಾ. ಎಂ. ಪ್ರಸಾದ್ ರವರು ಭಾಷಣದುದ್ದಕ್ಕೂ ಹಿಂದೂ ಸಮಾಜದ ಮತ್ತು ಹಿಂದೂ ದೈವ-ದೇವಸ್ಥಾನ ಮಠ ಮಂದಿರಗಳ ಉಳಿವಿನಲ್ಲಿ ಹಿಂದೂ ಸಂಘಟನೆಗಳ ಪಾತ್ರ ಮಹತ್ವದ್ದಾಗಿದೆ. ಸದ್ರಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆಸ್ತಿಯನ್ನು ಮೋಸದಿಂದ ವಶಪಡಿಸಿಕೊಂಡಿದ್ದ ಅನ್ಯಧರ್ಮೀಯರಿಂದ ಸದ್ರಿ ಭೂಮಿಯನ್ನು ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಒಪ್ಪಿಸಿದ ಹಿಂದೂ ಜಾಗರಣ ವೇದಿಕೆಯ ಹೋರಾಟ ಇಡೀ ಸಮಾಜವೇ ಮೆಚ್ಚಲೇ ಬೇಕಾದುದು ಎಂಬುದಾಗಿ ಸಂಘಟನೆಯ ಬಗ್ಗೆ ಮೆಚ್ಚುಗೆಯ ಮಾತನ್ನಾಡಿರುತ್ತಾರೆ.
ಎಲ್ಲಾ ಹಿಂದೂ ಸಂಘಟನೆಗಳು ನಮ್ಮ ದೇಶದ ರಕ್ಷಣೆಯ ಜೊತೆಗೆ ಹಿಂದೂ ಸಮಾಜದ ಒಳಿತಿಗಾಗಿ ಮತ್ತು ಜನರಲ್ಲಿ ರಾಷ್ಟ್ರಪ್ರೇಮವನ್ನು ಮೂಡಿಸುವ ವಿಚಾರವಾಗಿ ಕೆಲಸ ಮಾಡುತ್ತಿದೆ.ನಮ್ಮ ದೇಶದ ಎಲ್ಲಾ ಆಸ್ತಿಗಳು ಪುರಾತನವಾಗಿ ಹಿಂದುಗಳದ್ದೇ ಆಗಿತ್ತು. ಬ್ರಿಟೀಷರು ಆಡಳಿತದಲ್ಲಿರುವ ಸಂದರ್ಭದಲ್ಲಿ ಅವುಗಳನ್ನು ಬೇರೆ ಬೇರೆ ಸಂಸ್ಥೆಗಳಿಗೆ ನೀಡಿದ್ದರು ಎಂದಷ್ಟೇ ಹೇಳಿದ್ದಾರೆ ಹೊರತು ಇಲ್ಲಿ ಯಾವುದೇ ಮತವಾಗಲಿ ಅನ್ಯ ಧರ್ಮದ ವಿಚಾರದಲ್ಲಿ ತುಚ್ಛವಾಗಿ ಮಾತನಾಡುವುದಾಗಲಿ ನಿಂದಿಸುವುದಾಗಲಿ ಮಾಡಿರುವುದಿಲ್ಲ.
ಸದ್ರಿ ಭಾಷಣದಲ್ಲಿ ಯಾವುದೇ ಕೋಮು ಪ್ರಚೋದನೆ ಉಂಟು ಮಾಡುವ ವಿಚಾರವಾಗಲಿ ಅಥವಾ ದ್ವೇಷಪೂರಿತ ಭಾಷಣವಾಗಲಿ ಮಾಡಿರುವುದಿಲ್ಲ. ಆದರೂ ಸಹ ನಿರಂತರವಾಗಿ ಹಿಂದುತ್ವದ ಪರವಾಗಿ ಮಾತನಾಡುತ್ತಿದ್ದಾರೆ ಮತ್ತು ಹಿಂದು ಸಂಘಟನೆಗಳ ಜೊತೆ ಗುರುತಿಸಿಕೊಂಡಿದ್ದಾರೆ ಎನ್ನುವ ಏಕೈಕ ಕಾರಣಕ್ಕಾಗಿ ಅವರಿಗೆ ತೊಂದರೆ ಕೊಡಬೇಕೆನ್ನುವ ಉದ್ದೇಶಕ್ಕಾಗಿ ಅವರ ಹಿರಿತನಕ್ಕೆ ಗೌರವವನ್ನು ಕೊಡದೆ ಕೆಲವು ನಿರ್ಧಿಷ್ಟ ಶಕ್ತಿಗಳು ಪ್ರಯತ್ನಿಸುತ್ತಿರುವ ಹಾಗೆ ಮೇಲ್ನೋಟಕ್ಕೆ ಕಂಡು ಬರುತ್ತಿದೆ.
ಸದ್ರಿ ಕಾರ್ಯಕ್ರಮ ನಡೆದ ದಿನಾಂಕದಂದು (ಮಾ.24) ಯಾವುದೇ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿಲ್ಲದಿದ್ದರೂ ಚುನಾವಣಾ ಮಾದರಿ ನೀತಿಸಂಹಿತೆಯನ್ನು ಉಲ್ಲಂಘಿಸಿರುವುದಾಗಿ ಸುಳ್ಳು ಕಾರಣ ನೀಡಿ ತಾಲೂಕು ಚುನಾವಣಾಧಿಕಾರಿಯಾಗಿರುವ ಸಹಾಯಕ ಆಯುಕ್ತರು ಡಾ. ಎಂ.ಕೆ. ಪ್ರಸಾದ್ ರವರಿಗೆ ನೋಟೀಸ್ ಜಾರಿ ಮಾಡಿ ಮಾನಸಿಕ ಕಿರುಕುಳವನ್ನು ನೀಡಿರುವ ವಿಚಾರವನ್ನು ಹಿಂದೂ ಜಾಗರಣ ವೇದಿಕೆ ಪುತ್ತೂರು ತೀವ್ರವಾಗಿ ಖಂಡಿಸುತ್ತದೆ.
ಆದ್ದರಿಂದ ನಿರಂತರ ರಾಷ್ಟ್ರೀಯತೆ, ಹಿಂದುತ್ವ, ಸಾಮಾಜಿಕ ಕಳಕಳಿ ವ್ಯಕ್ತಪಡಿಸುವ ನಮ್ಮ ಮಾರ್ಗದರ್ಶಕರಾದ ಡಾ. ಎಂ. ಕೆ. ಪ್ರಸಾದ್ ರವರ ವಿರುದ್ಧ ಸುಳ್ಳು ಆರೋಪ ಹೊರಿಸಿ ಕೆಲವು ಸಂಘಟನೆಗಳು ಸುಳ್ಳು ದೂರು ನೀಡಿದ ಕಾರಣಕ್ಕೆ ಸುಳ್ಳು ಪ್ರಕರಣ ದಾಖಲಿಸುವ ಅಥವಾ ಅವರಿಗೆ ನೋಟೀಸು ಜಾರಿ ಮಾಡಿ ಮಾನಸಿಕ ಕಿರುಕುಳ ನೀಡುವ ದುಸ್ಸಾಹಸಕ್ಕೆ ಜಿಲ್ಲಾಡಳಿತ ಅಥವಾ ಪೋಲೀಸ್ ಇಲಾಖೆಗಳು ಕೈ ಹಾಕಿದ್ದಲ್ಲಿ ಆದರ ವಿರುದ್ಧ ಎಲ್ಲಾ ಹಿಂದೂ ಸಮಾಜವನ್ನು ಒಟ್ಟು ಸೇರಿಸಿಕೊಂಡು ತೀವ್ರ ಹೋರಾಟವನ್ನು ಮಾಡಬೇಕಾದೀತು ಎಂದು ಹಿಂದು ಜಾಗರಣ ವೇದಿಕೆ ತಿಳಿಸಿದೆ..

























