ಅಹಮದಾಬಾದ್ : ನರೇಂದ್ರ ಮೋದಿ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 16 ಹೈವೋಲ್ಟೇಜ್ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಗೆದ್ದು ಬೀಗಿದೆ. ಈ ಮೂಲಕ 5ನೇ ಬಾರಿಗೆ ಐಪಿಎಲ್ ಟ್ರೋಫಿಗೆ ಧೋನಿ ಪಡೆ ಮುತ್ತಿಟ್ಟಿದೆ.
ಕೊನೆಯ ಎರಡು ಎಸೆತಗಳಲ್ಲಿ ರವೀಂದ್ರ ಜಡೇಜಾ ಸಿಡಿಸಿದ ಭರ್ಜರಿ ಸಿಕ್ಸರ್, ಬೌಂಡರಿ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ರೋಚಕ ಜಯ ಸಾಧಿಸಿ 2023ರ ಟಾಟಾ ಐಪಿಎಲ್ ಚಾಂಪಿಯನ್ ಕಿರೀಟ ಮುಡಿಗೇರಿಸಿಕೊಂಡಿದೆ.
ಮೊದಲು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ 4 ವಿಕೆಟಿಗೆ 214 ರನ್ ಪೇರಿಸಿತ್ತು, ಆದರೆ ಚೆನ್ನೈ ಚೇಸಿಂಗ್ ವೇಳೆ ಮಳೆಯ ಆಗಮನವಾಗಿದೆ. ಚೆನ್ನೈ ಕೇವಲ 3 ಎಸೆತಗಳನ್ನಷ್ಟೇ ಎದುರಿಸಿದ್ದು, ವಿಕೆಟ್ ನಷ್ಟವಿಲ್ಲದೆ 4 ರನ್ ಗಳಿಸಿದೆ. ಸುಮಾರು ಎರಡು ತಾಸುಗಳ ಬಳಿಕ ಆಟ ಪುನರಾರಂಭಗೊಂಡಾಗ ಚೆನ್ನೈಗೆ 15 ಓವರ್ಗಳಲ್ಲಿ 171 ರನ್ ಗಳಿಸುವ ಗುರಿಯನ್ನು ನೀಡಲಾಗಿತ್ತು. ಮಳೆ ನಿಂತ ಬಳಿಕ ಆಟ ಮುಂದುವರಿಸಿದ ಆರಂಭಿಕರಾದ ರುತುರಾಜ್ ಗಾಯಕ್ವಾಡ್ ಮತ್ತು ಡೇವನ್ ಕಾನ್ವೇ ಭರ್ಜರಿ ಆರಂಭ ಒದಗಿಸಿದ್ದು ಮೊದಲ ವಿಕೆಟಿಗೆ 6.3 ಓವರ್ಗಳಲ್ಲಿ 74 ರನ್ ಪೇರಿಸಿದ್ದರು. ಅವರಿಬ್ಬರ ಬಳಿಕ ಉಳಿದ ಆಟಗಾರರೆಲ್ಲರೂ ಸಿಕ್ಸರ್ಗಳ ಸುರಿಮಳೆ ಸುರಿಸಿದರು.
ಅಂತಿಮ ಓವರಿನಲ್ಲಿ ಚೆನ್ನೈ ಗೆಲ್ಲಲು 13 ರನ್ ಗಳಿಸಬೇಕಿತ್ತು. ಮೋಹಿತ್ ಶರ್ಮ ಎಸೆದ ಈ ಓವರಿನ ಮೊದಲ ನಾಲ್ಕು ಎಸೆತಗಳಲ್ಲಿ ತಂಡ ಕೇವಲ ಮೂರು ರನ್ ಗಳಿಸಿತ್ತು. ಇದರಿಂದಾಗಿ ಗುಜರಾತ್ ಗೆಲ್ಲುವ ಆಸೆ ಬಲವಾಯಿತು. ಆದರೆ ಗುಜರಾತ್ನ ಈ ಕನಸನ್ನು ರವೀಂದ್ರ ಜಡೇಜಾ ನುಚ್ಚುನೂರು ಮಾಡಿದರು.
ಈ ವರ್ಷದ ಐಪಿಎಲ್ ನ ಅತ್ಯಂತ ಚರ್ಚಿತ ವಿಷಯವೆಂದರೆ ಅದು ಧೋನಿ ನಿವೃತ್ತಿ. ಈ ಬಾರಿ ಧೋನಿ ನಿವೃತ್ತಿ ಘೋಷಿಸುತ್ತಾರೆ ಎಂಬ ಅನುಮಾನ ಅಭಿಮಾನಿಗಳಿಗಿತ್ತು. ಈ ಬಗ್ಗೆ ಧೋನಿ ಫೈನಲ್ ಪಂದ್ಯದಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ.
ನಿವೃತ್ತಿ ಘೋಷಣೆ ಮಾಡುವುದು ಸುಲಭದ ವಿಚಾರ. ಆದರೆ ಮುಂದಿನ ಒಂಬತ್ತು ತಿಂಗಳು ಅಭ್ಯಾಸ ನಡೆಸಿ ಮುಂದಿನ ಸೀಸನ್ ಆಡಿ ಅಭಿಮಾನಿಗಳಿಗೆ ಗಿಫ್ಟ್ ಕೊಡುವುದಾಗಿ ಧೋನಿ ಹೇಳಿದ್ದಾರೆ.
ಸಾಂದರ್ಭಿಕವಾಗಿ ಇದು ನಿವೃತ್ತಿ ಘೋಷಣೆ ಮಾಡಲು ಸೂಕ್ತ ಸಮಯ. ಆದರೆ ಈ ಬಾರಿ ನಾನು ಹೋದಲ್ಲೆಲ್ಲಾ ಜನರು ತೋರಿದ ಅಭಿಮಾನ ನೋಡಿದರೆ, ‘ಥ್ಯಾಂಕ್ಯೂ ಸೋ ಮಚ್’ ಎಂದು ಹೇಳುವುದು ಕಷ್ಟದ ವಿಷಯವಿಲ್ಲ. ಆದರೆ ಮುಂದಿನ ಒಂಬತ್ತು ತಿಂಗಳು ಅಭ್ಯಾಸ ನಡೆಸಿ ಕನಿಷ್ಠ ಒಂದು ಸೀಸನ್ ಆದರೂ ಆಡಬಯಸುತ್ತೇನೆ. ಆದರೆ ಎಲ್ಲವೂ ದೇಹದ ಮೇಲೆ ಅವಲಂಬಿತ. ಈ ಬಗ್ಗೆ ನಿರ್ಧರಿಸಲು 6-7 ತಿಂಗಳು ಸಮಯವಿದೆ. ಇದು ನನ್ನ ಕಡೆಯಿಂದ ಗಿಫ್ಟ್ ರೀತಿ. ಇದು ನನಗೆ ಸುಲಭವಲ್ಲ, ಆದರೆ ಜನರು ತೋರಿದ ಪ್ರೀತಿ ನೋಡಿದರೆ ನಾನು ಅದನ್ನು ಮಾಡಲೇಬೇಕಿದೆ ( ಆಟ ಮುಂದುವರಿಕೆ)” ಎಂದು ಪಂದ್ಯದ ನಂತರ ಧೋನಿ ಹೇಳಿದರು.


























