ಬೆಳ್ತಂಗಡಿ : ತೆಕ್ಕಾರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಸ್ವಚ್ಛತಾ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿ ಸರಕಾರಿ ಸೊತ್ತು ನಾಶ, ನಗದು ದರೋಡೆ ಮಾಡಿ ಜೀವ ಬೆದರಿಕೆಯೊಡ್ಡಿದ್ದಲ್ಲದೆ ಮಾನಭಂಗಕ್ಕೆ ಯತ್ನಿಸಿದ ಆರೋಪದಡಿ ಗ್ರಾ.ಪಂ. ಸದಸ್ಯೆ ಸಹಿತ ಮೂವರ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಪಿಡಿಓ ಸುಮಯ್ಯ ರವರು ನೀಡಿದ ದೂರಿನಂತೆ ಗ್ರಾ.ಪಂ. ಸದಸ್ಯೆ ಯಮುನಾ, ಯಮುನಾ ರವರ ಪುತ್ರ ನವೀನ್ ನಾಯ್ಕ್ ಮತ್ತು ಸ್ಥಳೀಯ ನಿವಾಸಿ ಮಂಜುನಾಥ ಸಾಲಿಯಾನ್ ವಿರುದ್ಧ ಪ್ರಕರಣ ದಾಖಲಾಗಿದೆ.
ಬೆಳ್ತಂಗಡಿ ತಾಲೂಕಿನ ತೆಕ್ಕಾರು ಗ್ರಾಮ ಪಂಚಾಯತ್ಗೆ ಸೇರಿದ ವಿವಾದಿತ ಕಟ್ಟಡವನ್ನು ಸ್ಥಳೀಯ ಯಮುನಾ ರವರು ಅತಿಕ್ರಮಿಸಿಕೊಂಡು ನೆಲೆಸಿರುವ ಬಗ್ಗೆ ಈಗಾಗಲೇ ವ್ಯಾಜ್ಯ ಇದೆ. ಅದೇ ವಿವಾದಿತ ಕಟ್ಟಡದಲ್ಲಿ ಶಾಸಕ ಹರೀಶ್ ಪೂಂಜ ಅವರು ಎರಡನೇ ಬಾರಿಗೆ ಶಾಸಕರಾಗಿ ಚುನಾಯಿತರಾಗಿರುವ ಬಗ್ಗೆ ಅಭಿನಂದನೆ ಸಲ್ಲಿಸಿ ಬ್ಯಾನರ್ ಅಳವಡಿಸಲಾಗಿದೆ. ಅದನ್ನು ತೆರವುಗೊಳಿಸುವಂತೆ ಗ್ರಾ.ಪಂ. ಪಿಡಿಓ ಸುಮಯ್ಯ ರವರ ಸೂಚನೆಯಂತೆ ಸ್ವಚ್ಛತಾ ಸಿಬ್ಬಂದಿ ಪ್ರಮೀಳಾ ರವರು ಯಮುನಾ ರವರ ಮನೆಗೆ ಹೋಗಿ ಅವರಿಗೆ ನೋಟೀಸು ಜಾರಿಗೊಳಿಸಿ ಸ್ವೀಕೃತಿ ಪಡೆದು ಪಂಚಾಯತ್ ಕಛೇರಿಗೆ ಮರಳಿದ್ದರು.
ಇದಾದ ಸ್ವಲ್ಪ ಹೊತ್ತಿನಲ್ಲಿ ಯಮುನಾ ಮತ್ತು ಅವರ ಪುತ್ರ ನವೀನ್ ನಾಯ್ಕ ಅವರು ಮಂಜುನಾಥ ಸಾಲಿಯಾನ್ ಎಂಬವರ ಕುಮ್ಮಕ್ಕಿನಿಂದ ಪಂಚಾಯತ್ ಕಛೇರಿಗೆ ಬಂದು ಸ್ವೀಕೃತಿ ಪತ್ರ ಮರಳಿ ನೀಡುವಂತೆ ಒತ್ತಾಯಿಸಿ ಜಗಳ ಮಾಡಿದ್ದಾರೆ. ಸ್ವಚ್ಛತಾ ಸಿಬ್ಬಂದಿ ಪ್ರಮೀಳಾ ರವರ ಮೇಲೆ ಕೈ ಮಾಡಿದ್ದಾರೆ. ಪಿಡಿಒ ಸುಮಯ್ಯ ಮತ್ತು ಸ್ವಚ್ಛತಾ ಸಿಬ್ಬಂದಿ ಪ್ರಮೀಳಾ ರವರ ಮೇಲೆ ಹಲ್ಲೆ ನಡೆಸಿ ದೇಹದ ಭಾಗಗಳ ಮೇಲೆ ಕೈ ಮಾಡಿ ಮಾನಭಂಗಕ್ಕೆ ಯತ್ನಿಸಿದ್ದಾರೆ. ಅಲ್ಲದೆ ಸರಕಾರಿ ಸೊತ್ತಾಗಿರುವ ಗ್ರಾಮ ಪಂಚಾಯತ್ನ ಮೊಬೈಲ್ ಫೋನ್ ಅನ್ನು ಪಿಡಿಒ ಅವರಿಂದ ಕಿತ್ತುಕೊಂಡು ನೆಲಕ್ಕೆ ಅಪ್ಪಳಿಸಿ ಹಾನಿ ಮಾಡಿದ್ದಾರೆ. ಪಂಚಾಯತ್ ಕಛೇರಿಯಲ್ಲಿದ್ದ ಸರಕಾರಿ ಹಣ 3000 ಸಾವಿರವನ್ನು ದೋಚಿ ಓಮ್ಮಿ ಕಾರಿನಲ್ಲಿ ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಗ್ರಾಮ ಪಂಚಾಯತ್ ಎಟೆಂಡರ್ ಹುದ್ದೆ ಖಾಲಿ ಇರುವುದರಿಂದ ಪಿಡಿಒ ಸುಮಯ್ಯ ರವರ ನಿರ್ದೇಶನದ ಮೇರೆಗೆ ಸ್ವಚ್ಚತಾಗಾರ್ತಿ ಪ್ರಮೀಳಾರವರು ನೋಟೀಸು ನೀಡುವ ಕರ್ತವ್ಯ ಮಾಡಿ ಬಂದಿದ್ದರು.
ತೆಕ್ಕಾರು ಗ್ರಾಮ ಪಂಚಾಯತ್ನಲ್ಲಿ ನಡೆದ ಘಟನೆಗೆ ಸಂಬಂಧಿಸಿ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ಪ್ರತಿ ದೂರು ನೀಡಲಾಗಿದೆ. ಸ್ವಚ್ಛತಾ ಸಿಬ್ಬಂದಿ ಪ್ರಮೀಳಾ ವಿರುದ್ಧ ಜಾತಿನಿಂದನೆ ಮಾಡಿರುವ ಆರೋಪ ಹೊರಿಸಿ ಯಮುನಾ ರವರು ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಗ್ರಾಮ ಪಂಚಾಯತ್ ಕಛೇರಿಗೆ ಆಗಮಿಸಿರುವ ಪೊಲೀಸರು ಮಹಜರು ನಡೆಸಿದ್ದಾರೆ.
ಪಿಡಿಓ ಸುಮಯ್ಯ ರವರು ನೀಡಿದ ದೂರಿನಂತೆ ಗ್ರಾ.ಪಂ. ಸದಸ್ಯೆ ಯಮುನಾ, ಯಮುನಾ ರವರ ಪುತ್ರ ನವೀನ್ ನಾಯ್ಕ್ ಮತ್ತು ಸ್ಥಳೀಯ ನಿವಾಸಿ ಮಂಜುನಾಥ ಸಾಲಿಯಾನ್ ವಿರುದ್ಧ ಐಪಿಸಿ 109, 504, 323, 506, 354, 353,392, 34, 2(0) ದಂಡ ಸಂಹಿತೆಯಡಿ ಪ್ರಕರಣ ದಾಖಲಾಗಿದೆ.




























