ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಆಶ್ರಯದಲ್ಲಿ ಔಷಧೀಯ ಸಸ್ಯಗಳ ಸಂರಕ್ಷಣೆ, ಸಂವರ್ಧನೆ, ಬಳಕೆ ಹಾಗೂ ಜನಜಾಗೃತಿಯ ಆಂದೋಲನ `ವಿವೇಕ ಸಂಜೀವಿನಿ’ ಕಾರ್ಯಕ್ರಮ ವಿಶ್ವ ಪರಿಸರ ದಿನದಂದು ಉದ್ಘಾಟನೆಗೊಂಡಿತು.
ಈ ಸಂದರ್ಭದಲ್ಲಿ ರೇಡಿಯೋ ಪಾಂಚಜನ್ಯ 90.8 ಎಫ್.ಎಂ. ಸಮುದಾಯ ಬಾನುಲಿ ಕೇಂದ್ರದ ವತಿಯಿಂದ ಪ್ರತೀ ವಾರ ನಡೆಯುವ ವಿವೇಕ ಸಂಜೀವಿನಿ ಸರಣಿ ಕಾರ್ಯಕ್ರಮದ ಬಿಡುಗಡೆ ಕಾರ್ಯಕ್ರಮ ನೆರವೇರಿತು.
ಬಿಡುಗಡೆಯನ್ನು ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಅಧ್ಯಕ್ಷರಾದ ಡಾ. ಪ್ರಭಾಕರ ಭಟ್ ಕಲ್ಲಡ್ಕ, ಕಾರ್ಯದರ್ಶಿ ಡಾ. ಕೆ.ಎಂ. ಕೃಷ್ಣ ಭಟ್, ಸೆಂಟ್ರಲ್ ಇನ್ಸ್ಟ್ಟೂಟ್ ಆಫ್ ಮೆಡಿಷನಲ್ ಮತ್ತು ಆ್ಯರೋಮೆಟಿಕ್ ಪ್ಲಾಂಟ್ಸ್ ಬೆಂಗಳೂರಿನ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರಾದ ಡಾ. ದಿನೇಶ್ ನಾಗೇಗೌಡ, ಔಷಧೀಯ ಸಸ್ಯಗಳ ಸಂರಕ್ಷಕರಾದ ದಿನೇಶ್ ನಾಯಕ್ ವಿಟ್ಲ, ಖ್ಯಾತ ಉರಗ ತಜ್ಞರಾದ ಡಾ. ರವೀಂದ್ರನಾಥ ಐತಾಳ್, ರೇಡಿಯೋ ಪಾಂಚಜನ್ಯ ಸಮಿತಿ ಅಧ್ಯಕ್ಷರಾದ ಕೃಷ್ಣವೇಣಿ ಪ್ರಸಾದ್ ಮುಳಿಯ, ವಿವೇಕ ಸಂಜೀವಿನಿ ಕಾರ್ಯಕ್ರಮ ಸಂಯೋಜಕರಾದ ರೂಪಲೇಖಾ ಅವರು ನೆರವೇರಿಸಿದರು.