ಪುತ್ತೂರು : ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಆಗಿ ಮುನ್ನಡೆಯುತ್ತಿರುವ ಸಂದರ್ಭದಲ್ಲಿ ದೇಶ ವಿಶ್ವ ಗುರು ಆಗುತ್ತಿರುವ ಕಾಲಘಟ್ಟದಲ್ಲಿ ನಾವು ಇರುವಂತದ್ದು ಹೆಮ್ಮೆಪಡುವ ವಿಚಾರ ಎಂದು ವಿದ್ಯಾಭಾರತಿಯ ಕ್ಷೇತ್ರಿಯ ನೈತಿಕ ಆಧ್ಯಾತ್ಮಿಕ ಪ್ರಮುಖ್ ಹಾಗೂ ಕಡಬದ ಸರಸ್ವತಿ ವಿದ್ಯಾಕೇಂದ್ರದ ಸಂಚಾಲಕ ವೆಂಕಟ್ರಮಣರಾವ್ ಮಂಕುಡೆ ತಿಳಿಸಿದರು.

ಅವರು ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ವಿಶ್ವಯೋಗ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡುತ್ತಾ ಯೋಗದಿಂದ ಏಕಾಗ್ರತೆ ಹೆಚ್ಚುವುದಲ್ಲದೆ ನಮ್ಮ ಮಾನಸಿಕ ಮತ್ತು ದೈಹಿಕ ಕ್ಷಮತೆ ಅಭಿವೃದ್ಧಿಯಾಗುತ್ತದೆ. ಯೋಗಕ್ಕಿರುವ ಅಗಾಧ ಶಕ್ತಿ ಬೇರೊಂದಿಲ್ಲ, ಸಣ್ಣ ಕಾಲಾವಧಿಯಲ್ಲೂ ಯೋಗ ಮಾಡಿ ನೆಮ್ಮದಿ ಪಡೆಯಬಹುದು. ಪರಿಪೂರ್ಣ ಜೀವನಕ್ಕೆ ಯೋಗ ಅತ್ಯಗತ್ಯ. ಮಾನವ ಕುಲದ ಏಕತೆಯ ಪರಿಕಲ್ಪನೆಗೆ ಯೋಗ ಪ್ರಾಮುಖ್ಯವಾದುದು. ಯೋಗಜೀವನದ ಒಂದು ಭಾಗವೇ ಆಗಬೇಕು. ದೈನಂದಿನ ಜೀವನದಲ್ಲಿ ಅದನ್ನು ಅಳವಡಿಸಿಕೊಂಡು ನಮ್ಮ ಸಾಮರ್ಥ್ಯ ಹೆಚ್ಚಿಸುವ ಮೂಲಕ ಸಮಾಜಮುಖಿ ಕಾರ್ಯಕ್ಕೆ ಕೈ ಜೋಡಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲ ಮಹೇಶ್ ನಿಟಿಲಾಪುರ ಮಾತನಾಡಿ, ನಮ್ಮ ದಿನಚರಿಯಲ್ಲಿ ಯೋಗಧ್ಯಾನ, ಪ್ರಾಣಯಾಮಗಳನ್ನು ಅಳವಡಿಸಿಕೊಂಡಾಗ ಯಶಸ್ಸು ಸಾಧ್ಯ ಎಂದು ತಿಳಿಸಿದರು.

ಕಾರ್ಯಕ್ರಮ ಅತಿಥಿಯಾಗಿ ಉಪನ್ಯಾಸಕಿ ದಿವ್ಯಾ ಜಿ ಇವರು ಪ್ರಾಣಯಾಮದ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಈ ಕಾರ್ಯಕ್ರಮದಲ್ಲಿ ಪ್ರಾಣಾಯಾಮ, ಸೂರ್ಯ ನಮಸ್ಕಾರ ಹಾಗೂ ಕೆಲವು ಆಸನಗಳ ಪ್ರಾತ್ಯಕ್ಷಿತೆಯನ್ನು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ಜ್ಯೋತಿ ಪಿ ಸಿ ನೆರವೇರಿಸಿದರು.

ಕಾರ್ಯಕ್ರಮವನ್ನು ಕ್ರೀಡಾಸಂಘದ ಕಾರ್ಯದರ್ಶಿ ಭೂಮಿಕ ನಿರೂಪಿಸಿದರು. ಕಾಲೇಜಿನ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಸಹನ ಸ್ವಾಗತಿಸಿ, ವಿದ್ಯಾರ್ಥಿ ಸಂಘದ ಅಧ್ಯಕ್ಷ ಮನೀಶ್ ಪಿ ಎಚ್ ವಂದಿಸಿದರು.

























