ಹುಬ್ಬಳ್ಳಿ: ಸಿಎಂ ಸಿದ್ದರಾಮಯ್ಯ ಸರ್ಕಾರ ಶಕ್ತಿ ಯೋಜನೆ ಜಾರಿಗೆ ತಂದಿದ್ದೇ, ತಂದಿದ್ದು ಉಚಿತವಾಗಿ ಬಸ್ನಲ್ಲಿ ಮಹಿಳೆಯರು ಪ್ರಯಾಣ ಮಾಡುತ್ತಿದ್ದಾರೆ. ಇದರ ಮಧ್ಯೆ ವ್ಯಕ್ತಿಯೊರ್ವ ಥೇಟ್ ಮಹಿಳೆಯರಂತೆ ಬುರ್ಖಾ ವೇಷ ಹಾಕಿಕೊಂಡು ಬಸ್ ನಿಲ್ದಾಣಕ್ಕೆ ಬಂದು ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದ ಘಟನೆ ಕುಂದಗೋಳ ತಾಲೂಕಿನ ಸಂಶಿ ಬಸ್ ನಿಲ್ದಾಣದಲ್ಲಿ ನಡೆದಿದೆ.

ಸಂಶಿ ಸಾರ್ವಜನಿಕ ಬಸ್ ನಿಲ್ದಾಣದಲ್ಲಿ ವಿಜಯಪುರ ಜಿಲ್ಲೆಯ ಸಿಂಧಗಿ ತಾಲೂಕಿನ ಗೋಲಗೇರಿ ಗ್ರಾಮದಲ್ಲಿ ವ್ಯಕ್ತಿಯೋರ್ವ ಕುಳಿತುಕೊಂಡಿದ್ದ. ಈ ವೇಳೆ ಬುರ್ಖಾಧಾರಿ ವ್ಯಕ್ತಿಯನ್ನು ನೋಡಿದ ಪ್ರಯಾಣಿಕರು ಹಾಗೂ ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ. ಬಳಿಕ ಒತ್ತಾಯ ಪೂರ್ವಕವಾಗಿ ಬುರ್ಖಾ ತೆಗೆಯುವಂತೆ ಹೇಳಿದ್ದಾರೆ. ವ್ಯಕ್ತಿಯು ಬುರ್ಖಾ ತೆಗೆಯಲು ಹಿಂದೆ ಮುಂದೆ ನೋಡಿ ಗಾಬರಿಗೊಂಡಿದ್ದಾನೆ. ಅಲ್ಲೇ ಇದ್ದ ಪ್ರಯಾಣಿಕರು ಬುರ್ಖಾ ತೆಗೆದಿದ್ದಾರೆ. ಪುರುಷ ಎಂದು ತಿಳಿದ ಕೂಡಲೇ ಸಾರ್ವಜನಿಕರು ವ್ಯಕ್ತಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಇನ್ನು, ಬುರ್ಖಾ ಧರಿಸಿದ್ದ ವ್ಯಕ್ತಿ ನಾನು ಭಿಕ್ಷಾಟನೆಗೆ ಬಂದಿದ್ದೇನೆ. ನನ್ನ ಹೆಸರು ವೀರಭದ್ರಯ್ಯ ನಿಂಗಯ್ಯ ಮಠಪತಿ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕು ಘೋಡಗೋರಿ ನಮ್ಮೂರು ಎಂದು ಒಪ್ಪಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ. ಥೇಟ್ ಮಹಿಳೆಯರಂತೆ ಬುರ್ಖಾ ಚಪ್ಪಲಿ ಧರಿಸಿದ್ದ ಈ ವೇಷಧಾರಿ ಕಾಂಗ್ರೆಸ್ ಸರ್ಕಾರದ ಶಕ್ತಿ ಯೋಜನೆ ಅಡಿಯಲ್ಲಿ ಬಸ್ನಲ್ಲಿ ಉಚಿತ ಪ್ರಯಾಣಿಸಲು ಬುರ್ಖಾ ಧರಿಸಿಕೊಂಡು ಬಂದಿದ್ದಾನೆ. ವ್ಯಕ್ತಿ ಬಳಿ ಮುಸ್ಲಿಂ ಮಹಿಳೆಯರ ಆಧಾರ್ ಕಾರ್ಡ್ ಝೆರಾಕ್ಸ್ ಇರುವುದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ.


























